ಡಿಕೆಶಿ ಸಿಎಂ ಆಗುವುದರಲ್ಲಿ ಅನುಮಾನವಿಲ್ಲ: ಶಾಸಕ ಉದಯ್

| Published : Oct 28 2023, 01:15 AM IST

ಸಾರಾಂಶ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಯಾವಾಗ ಯಾರು ಸಿಎಂ ಆಗಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಹೇಳಿದರು.
ಮದ್ದೂರು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಯಾವಾಗ ಯಾರು ಸಿಎಂ ಆಗಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು. ಯಾವಾಗ ಮುಖ್ಯಮಂತ್ರಿಯಾಗುತ್ತಾರೆ, ಅವಧಿ ನಿಶ್ಚಯವಾಗಿದೆಯಾ ಎಂಬ ವಿಷಯಗಳ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅದಕ್ಕಾಗಿ ಹೈಕಮಾಂಡ್ ಇದೆ. ಹೈಕಮಾಂಡ್ ಹೇಳಿದಾಗ ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದು ನಿರ್ಧಾರವಾಗಲಿದೆ ಎಂದು ಪಟ್ಟಣದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು. ಸಿದ್ದರಾಮಯ್ಯನವರೂ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅದೇ ರೀತಿ ಡಿ.ಕೆ.ಶಿವಕುಮಾರ್ ಕೂಡ ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಮುಖ್ಯಮಂತ್ರಿಯಾಗುವ ಅರ್ಹತೆ, ಯೋಗ್ಯತೆಯನ್ನೂ ಹೊಂದಿದ್ದಾರೆ. ಅವರೂ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಹಲವಾರು ಬಾರಿ ಗೆದ್ದಿದ್ದಾರೆ. ಅವರೂ ಮುಖ್ಯಮಂತ್ರಿ ಆಗಬೇಕು. ಸಿದ್ದರಾಮಯ್ಯನವರ ನಂತರ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಖಚಿತವಾಗಿ ಹೇಳಿದರು. ಹೈಕಮಾಂಡ್ ಮಾಡುವ ತೀರ್ಮಾನವನ್ನು ನಾವು ಹೇಳಲಾಗುವುದಿಲ್ಲ. ನಮ್ಮ ಇತಿ-ಮಿತಿಯೊಳಗೆ ನಾವು ಮಾತನಾಡಬೇಕು. ನಮ್ಮ ತಾಲೂಕಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು, ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವುದು ನಮ್ಮ ಕೆಲಸ ಎಂದು ನುಡಿದರು. ಸರ್ಕಾರ ಬೀಳಿಸುವ ಕುರಿತು ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಮಾತನಾಡಿರುವ ಬಗ್ಗೆ ಕೇಳಿದಾಗ, ಯಾರೋ ಕೆಲಸವಿಲ್ಲದವರು ಎಲ್ಲೋ ಟೈಂಪಾಸ್‌ಗೆ ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ೧೩೬ ಜನ ಶಾಸಕರಿದ್ದಾರೆ. ಸರ್ಕಾರ ತೆಗೆಯುವುದು ತಿರುಕನ ಕನಸು ಎಂದು ನೇರವಾಗಿ ಹೇಳಿದರು. ಹಿಂದಿನ ಸರ್ಕಾರ ಅವಧಿಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇರಲಿಲ್ಲ. ಬೇರೆ ರೀತಿಯ ರಾಜಕೀಯ ವಾತಾವರಣವಿತ್ತು. ಅಂದಿನ ಪರಿಸ್ಥಿತಿ, ಸನ್ನಿವೇಶಗಳೇ ಬೇರೆಯಾಗಿದ್ದವು. ಸರ್ಕಾರ ನಡೆದುಕೊಳ್ಳುತ್ತಿದ್ದ ರೀತಿ, ಕಾರ್ಯವೈಖರಿ ಸರಿಯಾಗಿರಲಿಲ್ಲ. ಅವರು ಮಾಡಿದ ತಪ್ಪಿನಿಂದ ಸರ್ಕಾರ ಕಳೆದುಕೊಂಡರು. ಇವತ್ತು ಆ ಪರಿಸ್ಥಿತಿ ಇಲ್ಲ. ಸರ್ಕಾರ ಸಮರ್ಥವಾಗಿದೆ, ಬಲಿಷ್ಠವಾಗಿದೆ. ಉತ್ತಮ ಆಡಳಿತ ಕೊಡುತ್ತಿದೆ. ಸರ್ಕಾರವನ್ನು ಯಾರೂ ಅಲುಗಾಡಿಸಲಾಗುವುದಿಲ್ಲ ಎಂದು ಖಡಕ್ಕಾಗಿ ಪ್ರತಿಕ್ರಿಯಿಸಿದರು. ನನಗೆ ಪಕ್ಷ ಸೇರುವಂತೆ ಯಾವ ಪಕ್ಷದಿಂದಲೂ ಆಫರ್ ಬಂದಿಲ್ಲ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಸಕ್ರಿಯವಾಗಿ ಪಕ್ಷ ಮತ್ತು ಜನಪರವಾಗಿ ನಿಂತಿದ್ದೇವೆ. ಹೊಸದಾಗಿ ಶಾಸಕನಾಗಿ ಮಾಡಬೇಕಿರುವ ಕೆಲಸಗಳು ಸಾಕಷ್ಟಿವೆ. ಅವುಗಳನ್ನು ತಿಳಿದುಕೊಂಡು ಜನರ ಪರವಾಗಿ ಕೆಲಸ ಮಾಡಬೇಕಿದೆ. ಅದಕ್ಕಷ್ಟೇ ನನ್ನ ಆದ್ಯತೆ ಎಂದರು. ಸರ್ಕಾರ ಉರುಳಿಸಲು ಆಫರ್ ಕೊಡುತ್ತಿರುವವರಿಗೆ ೫೦ ಕೋಟಿ ರು. ಕೊಡುವುದಕ್ಕೆ ಶಕ್ತಿ ಇದೆಯಾ. ಯಾರು ಈ ಆಫರ್ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಅವರಿಗೆ ಆ ಹಣ ಹೊತ್ತುಕೊಂಡು ಬರುವಷ್ಟು ಶಕ್ತಿ ಇದೆಯಾ. ಬಾಯಿಗೆ ಬಂದಂತೆ ಮಾತನಾಡಬಾರದು. ಮಾತನಾಡುವುದಕ್ಕೆ ಒಂದು ಅರ್ಥವಿರಬೇಕು. ಇದು ಗಾಳಿಸುದ್ದಿಯೇ ವಿನಃ ಬೇರೇನೂ ಅಲ್ಲ ಎಂದು ಛೇಡಿಸಿದರು. ರೈತರ ಹೆಸರೇಳಿಕೊಂಡು ಪ್ರಧಾನಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅದೇ ರೈತರ ಕಣ್ಣಿಗೆ ಮಂಕುಬೂದಿ ಎರಚಿದರು. ಇವರು ಅಧಿಕಾರದಲ್ಲಿದ್ದಾಗ ಕಾವೇರಿ ಸಮಸ್ಯೆಗೆ ಪರಿಹಾರ ಏಕೆ ಹುಡುಕಲಿಲ್ಲ. ಈಗ ಬಂದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತೀನಿ ಅಂತಾರೆ. ಇವರ ಸಾಧನೆ ಏನು. ಯಾರಿಗೇ ಆಗಲಿ ಕೆಟ್ಟದ್ದನ್ನು ಬಯಸಬಾರದು ಎಂದು ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದರು.