ಸಾರಾಂಶ
ಈ ತಿಂಗಳಿನಿಂದ ಪಡಿತರದಲ್ಲಿ ಅಕ್ಕಿಯ ಜೊತೆಗೆ ಜೋಳವನ್ನು ವಿತರಿಸಲಾಗುತ್ತಿದೆ. ಪ್ರತಿ ತಿಂಗಳು 10ನೇ ತಾರೀಖಿ ನಂತರ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಿಸಲಾಗುತ್ತಿದೆ.
ಗುಳೇದಗುಡ್ಡ : ಈ ತಿಂಗಳಿನಿಂದ ಪಡಿತರದಲ್ಲಿ ಅಕ್ಕಿಯ ಜೊತೆಗೆ ಜೋಳವನ್ನು ವಿತರಿಸಲಾಗುತ್ತಿದೆ. ಪ್ರತಿ ತಿಂಗಳು 10ನೇ ತಾರೀಖಿ ನಂತರ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಿಸಲಾಗುತ್ತಿದೆ. ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ತಾಲೂಕು ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ ಹೇಳಿದರು.
ಅವರು ಪಟ್ಟಣದ ಕಂಜುಮರ್ ಸೊಸೈಟಿಯಲ್ಲಿ ಇತ್ತೀಚೆಗೆ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಬಾಗಲಕೋಟೆ, ತಹಸೀಲ್ದಾರ್ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯವನ್ನು ಪ್ರತಿತಿಂಗಳು ಅರ್ಹ ಫಲಾನುಭವಿಗಳಿಗೆ ವಿತರಿಸುವ ಬಗ್ಗೆ ಹಾಗೂ ಕುಂದುಕೊರೆತೆಗಳ ಬಗ್ಗೆ ವಿಚಾರಣೆ ಮಾಡಿ ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಪ್ರತಿತಿಂಗಳು ಪಡಿತರ ಅಂಗಡಿಗಳಲ್ಲಿ ಆಹಾರ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ಇ-ಕೆವೈಸಿ ಆಗದೇ ಇದ್ದವರು ಇ-ಕೆವೈಸಿ ಮಾಡಿಸಬೇಕು ಎಂದರು.
ಆಹಾರಧಾನ್ಯ ಸರಿಯಾಗಿ ವಿತರಿಸುತ್ತಾರೋ ಇಲ್ಲವೋ ಎಂಬುವುದರ ಬಗ್ಗೆ ಅಲ್ಲಿದ್ದ ಫಲಾನುಭವಿಗಳನ್ನು ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ ಅವರು ವಿಚಾರಿಸಿದರು.
ಈ ಸಂದರ್ಭದಲ್ಲಿ ಕಂಜುಮರ್ ಸೊಸೈಟಿ ಅಧ್ಯಕ್ಷ ಚಂದ್ರಶೇಖರ ಹರವಿ, ಕುಮಾರ ಅಂಗಡಿ, ರಾಜು ಹುಳಬುತ್ತಿ, ವೀರೇಶ ಮುರನಾಳ, ಹನಮಂತ ಕೌಜಗನೂರ, ಚೇತನ ಜಾನಿಕಲ್, ಚೇತನ ಅಂಗಡಿ, ಮಹಾಂತೇಶ ಸಿಂದಗಿ, ಕುಮಾರ ಗಂಗಾವತಿ, ಜಯಶ್ರೀ ಬರಹಾನಪೂರ ಮತ್ತಿತರರು ಇದ್ದರು.