ಸಾರಾಂಶ
ಶಿರಾ : ಹಬ್ಬಕ್ಕೆಂದು ವಿದೇಶದಿಂದ ಗ್ರಾಮಕ್ಕೆ ಬಂದಿದ್ದ ಅನಿವಾಸಿ ಭಾರತೀಯರು ರಸ್ತೆಗಳಲ್ಲಿನ ಗುಂಡಿಗಳಿಗೆ ಮಣ್ಣು ಹಾಕುವ ಮೂಲಕ ಗಾಢ ನಿದ್ರೆಯಲ್ಲಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಹೊಸಪಾಳ್ಯ ಕೆರೆ ಏರಿಯ ಬಳಿ ಮಾದೇನಹಳ್ಳಿ ಗ್ರಾಮದ ಚೇರ್ಮನ್ ರಂಗಪ್ಪನವರ ಪುತ್ರ ಶ್ರೀನಿವಾಸ್ ಅಮೆರಿಕದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅವರಂತೆಯೇ ಯೋಗೇಶ್ ರವರು ಡೆನ್ಮಾರ್ಕ್ ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸದಲ್ಲಿದ್ದು, ಯುಗಾದಿ ಹಬ್ಬಕ್ಕಾಗಿ ಊರಿಗೆ ಬಂದ ಈ ಎಂಜಿನಿಯರ್ ಗಳು ತಮ್ಮೂರಿಗೆ ಹೋಗಬೇಕಾದ ರಸ್ತೆಯ ಗುಂಡಿಗಳನ್ನು ನೋಡಿ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಇಕ್ಕೆಲಗಳಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಮಣ್ಣು ಹಾಕುವ ಮೂಲಕ ಅಧಿಕಾರಿಗಳಿಗೆ ನಾಚಿಕೆ ಬರುವಂತೆ ಮಾಡಿದ್ದಾರೆ.
ಮಾದೇನಹಳ್ಳಿ ಗ್ರಾಮದ ವೇಣು ಇವರ ಕಾರ್ಯಕ್ಕೆ ಕೈಜೋಡಿಸಿದ್ದು ಉಚಿತ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಯಾವುದೇ ಫಲಾಪೇಕ್ಷೆಗಳನ್ನು ಹೊಂದಿರದ ಎಂಜಿನಿಯರ್ ಗಳ ಈ ಕಾರ್ಯಕ್ಕೆ ಗ್ರಾಮಸ್ಥರು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಕೊನೆಗೂ ನಮ್ಮೂರಿನ ರಸ್ತೆಗಳ ಗುಂಡಿಗಳಿಗೆ ಮುಕ್ತಿ ಕಾಣಿಸಲು ವಿದೇಶದಿಂದ ಬರಬೇಕಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.