ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದೇವಸ್ಥಾನಗಳನ್ನು ಕಟ್ಟುವುದು ಎಷ್ಟು ಮುಖ್ಯವೋ ಪಾವಿತ್ರತೆ ಕಾಪಾಡವುದು ಅಷ್ಠೆ ಮುಖ್ಯ ಎಂದು ಮಾದಾರ ಚನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ದುರ್ಗಾಂಬಿಕಾ ದೇವಿಯ ಉತ್ಸವ ಮೂರ್ತಿ ಹಾಗೂ ದೇವಸ್ಥಾನದ ಕಳಸ ಪ್ರತಿಷ್ಠಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಮಾಜ, ಒಂದು ಕುಟುಂಬ ಬದಲಾವಣೆಯಾಗಬೇಕಾದರೆ ಮಹಿಳೆಯರು ಮುಂದೆ ಬರಬೇಕು. ಪುರುಷರು ದುಡಿಯುವ ಹಣ ಹೆಣ್ಣು ಮಕ್ಕಳ ಕೈಗೆ ಬರುವಂತಾಗಬೇಕು ಎಂದರು.
ದೇವಸ್ಥಾನಕ್ಕೆ ಹೋದರೆ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತದೆ. ಮಠ, ಮಂದಿರ, ಚರ್ಚ್, ಮಸೀದಿ ದೇಶಕ್ಕೆ ಬೇಕು. ದೇವಸ್ಥಾನ ಜೀರ್ಣೋದ್ಧಾರವಾದಂತೆ ಮನುಷ್ಯನ ಜೀವನ ಕೂಡ ಜೀರ್ಣೋದ್ಧಾರವಾಗಬೇಕು. ದಾರಿದ್ರ್ಯ ನಿವಾರಣೆಯಾಗಬೇಕಾದರೆ ಮಕ್ಕಳಿಗೆ ಶಿಕ್ಷಣ ಬೇಕು. ಎಲ್ಲಿಯವರೆಗೂ ಜೀವನದಲ್ಲಿ ಬದಲಾವಣೆ ಯಾಗುವುದಿಲ್ಲವೋ ಅಲ್ಲಿಯವರೆಗೂ ಗೌರವ ಸಿಗುವುದಿಲ್ಲ. ಜೀವನದಲ್ಲಿ ಸುಖವಾಗಿರಬೇಕಾದರೆ ಕಷ್ಟ ಪಡಬೇಕು ಎಂದರು.ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ, ಅಬುದಾಬಿಯಲ್ಲಿ ಹಿಂದೂ ದೇವಾಲಯವಾಗಿದೆ. ಸರ್ಕಾರದ ಹಣದಿಂದ ದೇವಸ್ಥಾನ ನಿರ್ಮಾಣವಾಗುವುದಕ್ಕಿಂತಲೂ ಮಿಗಿಲಾಗಿ ಭಕ್ತರು ನೀಡುವ ಹಣದಿಂದ ದೇವಾಲಯಗಳಾಗುತ್ತಿರುವುದು ಸಂತಸದ ಸಂಗತಿ. ದೇವಸ್ಥಾನ ಕಟ್ಟುವುದರ ಜೊತೆ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಸಂವಿಧಾನದಡಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಪ್ರಯೋಜನ ಪಡೆದುಕೊಳ್ಳಬೇಕಷ್ಟೆ ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಜನಾಂಗದ ಹೆಸರೇಳಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಜಾಸ್ತಿಯಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ದಲ್ಲಿದ್ದಾಗ ಜನಾಂಗಕ್ಕೆ ಕಿಂಚಿತ್ತಾದರೂ ಸಹಾಯವಾಗುವಂತ ಕೆಲಸವಾಗಬೇಕು. ಸಮಾಜದ ಹೆಸರಿನಲ್ಲಿ ಸಿಕ್ಕ ಅಧಿಕಾರವನ್ನು ಸಮಾಜಕ್ಕೆ ಅರ್ಪಿಸಬೇಕು. ಜನಾಂಗದ ಗೌರವ ಕಳೆಯುವ ಕೆಲಸ ಮಾಡಬಾರದು. ಬೇರೆ ಜನಾಂಗದವರೊಂದಿಗೆ ಪ್ರೀತಿ ಸಹಭಾಳ್ವೆಯಿಂದ ಬದುಕಬೇಕು. ಒಳ್ಳೆಯ ರೀತಿಯಿಂದ ಏನು ಬೇಕಾದರೂ ಸಾಧನೆ ಮಾಡಬಹುದು. ಪ್ರೀತಿಯಿಂದ ಇದ್ದರೆ ಯಾರು ಯಾರನ್ನೂ ದ್ವೇಷಿಸುವುದಿಲ್ಲ. ಎಲ್ಲರೊಳಗೊಂದಾಗಿ ಬದುಕುವುದನ್ನು ಕಲಿಯಬೇಕು. ಅದಕ್ಕಾಗಿ ಸರಿಯಾದ ಮಾರ್ಗದಲ್ಲಿ ಸಾಗಬೇಕು. ಬಡತನವಿದೆಯೆಂದು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಕಲ್ಪಿಸಿದ್ದಾರೆ ಎಂದರು.ಹುಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಪ್ಪ ಪಿ., ಸದಸ್ಯರುಗಳಾದ ರವಿಕುಮಾರ್, ದುಗ್ಗಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಸಮಾದಪ್ಪ, ಕಲ್ಲೇಶಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹುಲ್ಲೂರು ಕೃಷ್ಣಪ್ಪ, ಹುಲ್ಲೂರು ಕುಮಾರ್ ವೇದಿಕೆಯಲ್ಲಿದ್ದರು.