ಸಾರಾಂಶ
ಗುಳೇದಗುಡ್ಡ : ನಾವು ಹೇಗಿದ್ದರೂ ಜನ ಮಾತಾಡುತ್ತಾರೆ. ಜನರ ಬಗ್ಗೆ ತಲೆಕೆಡಿಸಿಕೊಳ್ಳದೆ ಅಂದುಕೊಂಡ ಗುರಿಯ ಕಡೆಗೆ ಮುಂದೆ ಸಾಗಬೇಕು. ನನ್ನನ್ನು ಎಲ್ಲೆಲ್ಲಿ ಕೀಳಾಗಿ ಕಂಡು ಅವಮಾನ, ಕಣ್ಣೀರು ಹಾಕಿಸಿದ್ದರೋ ಅದೇ ಜಾಗದಲ್ಲಿ ನನಗೆ ಸನ್ಮಾನ ಗೌರವ ಲಭಿಸಿದೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.
ಭಾನುವಾರ ಕೋಟೆಕಲ್ -ಗುಳೇದಗುಡ್ಡ ಶ್ರೀ ಅಮರೇಶ್ವರ ಬ್ರಹನ್ಮಠದ ಶ್ರೀ ಅಮರೇಶ್ವರ ಶ್ರೀಗಳ 56ನೇ ಪುಣ್ಯಾರಾಧನೆ ಕಾರ್ಯಕ್ರಮ, ಅಮರ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಮನುಷ್ಯ ಅಂತ ಹುಟ್ಟಿದ ಮೇಲೆ ಎಲ್ಲರೂ ಸಮಾನರು. ಯಾರು ಇನ್ನೊಬ್ಬರ ಮನಸು ನೋಯಿಸುವ ಕೆಲಸ ಮಾಡುತ್ತಾರೋ ಅವರು ಜೀವನದಲ್ಲಿ ಉದ್ದಾರ ಆಗಲ್ಲ. ಒಬ್ಬರು ಇನ್ನೊಬರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಇನ್ನೊಬ್ಬರ ಕಾಲು ಎಳೆಯುವ ಕೆಲಸ ಮಾಡಬಾರದು ಎಂದು ಹೇಳಿದರು.
ನಾವು ಮಾಡುವ ಕೆಲಸ ದಲ್ಲಿ ಶ್ರದ್ಧೆ ಭಕ್ತಿ, ಪ್ರಾಮಾಣಿಕತೆ ಇದ್ದರೆ ಯಶಸ್ಸು ಸಾಧ್ಯ. ಈ ಜಗತ್ತಿನಲ್ಲಿ ಯಾರು ಯಾರನ್ನು ಗುರುತಿಸುವುದಿಲ್ಲ. ನಮ್ಮ ಪ್ರಯತ್ನ, ಶ್ರಮದಿಂದ ಮಾತ್ರ ಮೇಲೆ ಬರಲು ಸಾಧ್ಯ.. ಈ ಅಮರೇಶ್ವರ ಮಠದ ಕಾರ್ಯಕ್ರಮದಲ್ಲಿ ಸ್ತ್ರೀ ಪುರುಷ ಜೊತೆಗೆ ತೃತೀಯ ಲಿಂಗಿಗಳೂ ಭಾಗವಹಿಸಿದ್ದು, ಇದೊಂದು ಸಮಾನತೆಯ ವೇದಿಕೆಯಾಗಿದೆ ಎಂದು ಹೇಳಿದರು.
ಕಾಶಿಗೆ ಹೋಗಲ್ಲ ಅಂದಿದ್ದೆ : ನಾನು ಕಳೆದ ಹಲವು ವರ್ಷಗಳಿಂದ ನನ್ನ ಸಹೋದರ, ಆತನ ಮಗ ಕಾಶಿಗೆ ಹೋಗಿ ಬರೋಣ ಅಂತಾ ಹಲವು ಬಾರಿ ಕರೆದರೂ ದೂರಾಗುತ್ತದೆ ಎಂದು ಹೋಗಿರಲಿಲ್ಲ. ಆದರೆ ನನ್ನ ಅದೃಷ್ಟವೋ ಏನೋ ಇಂದು ಅದೇ ಕಾಶಿ ಜಗದ್ಗುರುಗಳೇ ನನಗೆ ಅಮರ ಶ್ರೀ ಪ್ರಶಸ್ತಿ ನೀಡಿ, ಕಾಶಿಯನ್ನೇ ಇಲ್ಲಿಗೆ ಕರೆ ತಂದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಸಾನ್ನಿಧ್ಯ ವಹಿಸಿದ್ದ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಜೀವನ ಸಾರ್ಥಕ ಪಡಿಸಿಕೊಳ್ಳಲು ಪರಿಶ್ರಮ ಅಗತ್ಯ ಸಾಧನೆ ಮಾಡಲು ಶರೀರ ಮುಖ್ಯ. ಅದನ್ನು ಸಾರ್ಥಕ ರೀತಿಯಲ್ಲಿ ಬಳಸಬೇಕು. ಅದರ ಮೂಲಕ ಸಮಾಜದಲ್ಲಿ ಆದರ್ಶ ಜೀವನ ನಡೆಸಬೇಕು. ಮಂಜಮ್ಮ ತಾಯಿ ಸಾಧನೆ ಸಮಾಜಕ್ಕೆ ಪ್ರೇರಣೆ ಎಂದು ಹೇಳಿದರು.
ಮಂಜಮ್ಮ ತಾಯಿ ಸಾಧನೆ ಇನ್ನಷ್ಟು ಎತ್ತರಕ್ಕ ಬೆಳೆಯಲಿ. ಜಾನಪದ ಕಲೆಯನ್ನು ಉಳಿಸಿ, ಮಂಗಳಮುಖಿಯರ ಜೀವನ ಸಾರ್ಥಕತೆಗೆ ಮಂಜಮ್ಮ ಜೋಗತಿ ಅವರು ಶ್ರಮಿಸುತ್ತಿದ್ದಾರೆ. ಮಂಜಮ್ಮ ಅವರು ಜಾನಪದ ಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಮಂಜಮ್ಮ ಕೀರ್ತಿ ಅಮರವಾಗಲಿ ಎಂದರು.
ಕೆರೂರು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಮಠದ ಪೀಠಾಧ್ಯಕ್ಷ ಡಾ.ನೀಲಕಂಠ ಶ್ರೀಗಳು ಮಾತನಾಡಿದರು. ನಂದಾ ವೀಣಾ ದೇವಾಂಗಮಠ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಅಮರ ಆದರ್ಶ ದಂಪತಿ ಸತ್ಕಾರ ಸಮಾರಂಭ ನಡೆಯಿತು.
ಒಪ್ಪತ್ತೇಶ್ವರ ಶ್ರೀಗಳು, ಶ್ರೀಮಠದ ಪೀಠಾಧ್ಯಕ್ಷ ಡಾ.ನೀಲಕಂಠ ಶ್ರೀಗಳು, ಗುರುಸಿದ್ದೇಶ್ವರ ಬ್ರಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳು, ಸಸ್ತಾಪುರದ ಈಶ್ವಾರನಂದ ಶ್ರೀಗಳು, ಆಂಧ್ರ ಪ್ರದೇಶದ ಶ್ರೀಶಂಕರ ಶ್ರೀಗಳು, ಮಲ್ಲಿಕಾರ್ಜುನ ಶಾಸ್ತ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ರಾಜಶೇಖರ ಶೀಲವಂತ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಎಂ.ಬಿ. ಹಂಗರಗಿ, ನಾಗೇಶ ಮೊರಬದ, ಪ್ರಭು ಮೊರಬದ, ಎಸ್.ಎಂ. ಪಾಟೀಲ, ಶಿವಯೋಗಿ ಹೊದ್ಲೂರಮಠ, ಕಾಶಿನಾಥ ಪುರಾಣಿಕಮಠ, ಮುತ್ತು ಮೊರಬದ, ಜಿ.ಎಸ್. ಗೊಬ್ಬಿ, ವಿ.ಎಸ್. ಹಿರೇಮಠ, ಬಸವರಾಜ ಸಿಂದಗಿಮಠ, ಗುಂಡಪ್ಪ ಕೋಟಿ ಸೇರಿದಂತೆ ಬಿಸನಹಳ್ಳಿ, ಬಂಕಾಪುರ, ಬ್ಯಾಹಟ್ಟಿ, ಕೊಂಕಣಕೊಪ್ಪ , ಸೊಲ್ಲಾಪುರ, ತೊಗುಣಶಿ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.