ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳುವಲ್ಲಿ ದೈನಂದಿನ ಆಹಾರದ ಜೊತೆಗೆ ಹಣ್ಣುಗಳು ಪೂರಕವಾಗಿವೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.ಶನಿವಾರ ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ಎ.ಪಿ.ಎಂ.ಸಿ. ಆವರಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಮಾವು-ಹಲಸಿನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಆರೋಗ್ಯಕ್ಕೆ ಪೂರಕವಾದ ಹಣ್ಣುಗಳ ಸೇವನೆಯೂ ಮಿತವಾಗಿರಬೇಕು, ಸ್ಥಳೀಯವಾಗಿ ದೊರೆಯದಿರುವ ಅಪರೂಪದ ಹಾಗೂ ಪೌಷ್ಠಿಕಾಂಶಯುಕ್ತ ಹಣ್ಣಿನ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಇವುಗಳನ್ನು ಇಲ್ಲಿನ ಹವಾಗುಣಕ್ಕೆ ಒಗ್ಗಿಕೊಳ್ಳುವಂತೆ ಸಸಿಗಳನ್ನು ತಂದು ಪೋಷಿಸಿ, ಬೆಳೆಸುವ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ. ಈ ರೀತಿಯಲ್ಲಿ ಪೌಷ್ಠಿಕಾಂಶಯುಕ್ತವಾದ ಅಪರೂಪದ ಹಣ್ಣುಗಳು ಜನಸಾಮಾನ್ಯರಿಗೆ ಸರಳವಾಗಿ ದೊರೆಯುವಂತೆ ಮಾರುಕಟ್ಟೆ ಸೌಲಭ್ಯ ಕೂಡ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.ಈ ರೀತಿಯ ಮಾವು ಮತ್ತು ಹಲಸಿನ ಪ್ರದರ್ಶನ ಮತ್ತು ಮಾರಾಟ ಮೇಳಗಳು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಆಯೋಜಿಸುವಂತಾಗಬೇಕು. ಈ ಮೇಳಗಳಿಂದಾಗಿ ಅಪರೂಪದ ಎಲ್ಲಾ ತಳಿಯ ಹಣ್ಣುಗಳು ಜನಸಾಮಾನ್ಯರಿಗೆ ದೊರೆಯಲಿವೆ. ಮಾತ್ರವಲ್ಲ ಯಾವುದೇ ಮದ್ಯವರ್ತಿಗಳ ಹಾವಳಿಯಿಲ್ಲದೇ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ಇದು ರೈತರಿಗೆ ಲಾಭದಾಯಕ ಉದ್ಯಮವಾಗಿಯೂ ಪರಿಣಮಿಸಲಿದೆ. ಕೆಲವು ಕೃಷಿಕರಿಗೆ ಪ್ರೇರಣೆಯಾಗಲಿದೆ ಎಂದರು.
ಹಾಪ್ ಕಾಮ್ಸ್ ಆಯೋಜಿಸುವ ಇಂತಹ ಮೇಳಗಳಿಂದ ರೈತರಿಗೆ ಸಹಕಾರಿಯಾಗಲಿದೆ. ಹಾಪ್ ಕಾಮ್ಸ್ ಅಭಿವೃದ್ಧಿಗೆ ಅಗತ್ಯವಿರುವ ನೆರವು ಸಹಕಾರವನ್ನು ಸರ್ಕಾರದಿಂದ ಒದಗಿಸಿಕೊಡಲಾಗುವುದು ಎಂದರು.ಅತಿಥಿ ಶಿಕ್ಷಕರ ನೇಮಕಾತಿ:
ಶಿಕ್ಷಣ ಇಲಾಖೆಯಲ್ಲಿ ಕೊರತೆ ಇರುವ ಶಿಕ್ಷಕರ ಕೊರತೆ ನೀಗಿಸಿ, ಸಕಾಲದಲ್ಲಿ ನಿರಂತರ ಪಠ್ಯಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಮಾರು 5100 ಅತಿಥಿ ಶಿಕ್ಷಕರ ನೇಮಕಾತಿ ಕಾರ್ಯ ಈಗಾಗಲೇ ಪೂರ್ಣಗೊಳಿಸಲಾಗಿದೆ. ಅಲ್ಲದೇ ಅವರಿಗೆ ನೀಡಲಾಗುತ್ತಿದ್ದ ಗೌರವಧನವನ್ನು ಮಾಹೆಯಾನ 2 ಸಾವಿರ ರು.ಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.ವಿಧಾನ ಪರಿಷತ್ ಸದಸ್ಯ ಡಾ। ಧನಂಜಯ ಸರ್ಜಿ ಮಾತನಾಢಿ, ಪ್ರತಿ ವ್ಯಕ್ತಿಯೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಹಣ್ಣು ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವಂತೆ ಜೊತೆಗೆ ರಸಾಯನಿಕ ಮುಕ್ತ ಮಾವು, ಹಲಸನ್ನು ಸೇವಿಸುವಂತೆ ಸಲಹೆ ನೀಡಿದರು.
ವಿಶೇಷವಾಗಿ ಶನಿವಾರ ಮತ್ತು ಭಾನುವಾರ ನಡೆಯಲಿರುವ ಮೇಳದಲ್ಲಿ ಮಿಯಾಝಾಕಿ ಮಾವು, ಕೆಂಪು ದಂತ ಮಾವು, ಬಾಳೆ ಮಾವು ಮತ್ತು ಬೀಜರಹಿತ ಹಲಸು ಸೇರಿದಂತೆ ವಿವಿಧ ತಳಿಯ ಮಾವಿನಹಣ್ಣು, ಬಗೆಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ,ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ, ಹಾಪ್ ಕಾಮ್ಸ್ ರಾಜ್ಯಾಧ್ಯಕ್ಷ ಬಿ.ಡಿ.ಭೂಕಾಂತ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್, ಪ್ರಸನ್ನಕುಮಾರ ಮತ್ತಿತರರು ಉಪಸ್ಥಿತರಿದ್ದರು.
--------------------ಅರಣ್ಯದ ಮೇಲಿನ ಮನುಷ್ಯನ ಅವ್ಯಾಹತ ದಾಳಿಯಿಂದಾಗಿ ಕಾಡು ಪ್ರಾಣಿಗಳು ನಗರ ಪ್ರದೇಶಕ್ಕೆ ಲಗ್ಗೆ ಇಡುತ್ತಿವೆ. ಜಿಲ್ಲೆಯಲ್ಲಿ ಮಂಗನ ಹಾವಳಿ ನಿಯಂತ್ರಣಕ್ಕೆ ಮಂಕಿ ಪಾರ್ಕ್, ಆನೆಗಳ ನಿಯಂತ್ರಣಕ್ಕೆ ಆನೆ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಶೀಘ್ರದಲ್ಲಿ ಫಲಿತಾಂಶ ನಿರೀಕ್ಷಿಸಬಹುದಾಗಿದೆ.
- ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು.