ಸಾರಾಂಶ
ಹೊಸಪೇಟೆ : ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಶಿವರಾಜ್ ವಿ. ಪಾಟೀಲ, ಸಾಹಿತಿ ಕುಂ. ವೀರಭದ್ರಪ್ಪ (ಕುಂವೀ), ಹಿಂದುಸ್ತಾನಿ ಗಾಯಕ ಎಂ. ವೆಂಕಟೇಶ್ ಕುಮಾರ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶುಕ್ರವಾರ ಪ್ರದಾನ ಮಾಡಿದರು.
ಕನ್ನಡ ವಿವಿಯ ನವರಂಗ ಬಯಲು ರಂಗಮಂದಿರದಲ್ಲಿ ನಡೆದ 33ನೇ ನುಡಿಹಬ್ಬ- ಘಟಿಕೋತ್ಸವದಲ್ಲಿ ರಾಜ್ಯಪಾಲರು ನಾಡೋಜ ಗೌರವ ಪದವಿ ಪ್ರದಾನ ಮಾಡಿದರು. ಈ ಗೌರವ ಪದವಿ ಪ್ರಮಾಣಪತ್ರ, ಸರಸ್ವತಿ ವಿಗ್ರಹ ಮತ್ತು ಶಲ್ಯ ಒಳಗೊಂಡಿದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ, ತುಮಕೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಎಂ.ಎಚ್., ಹಂಪಿ ವಿವಿ ಕುಲಪತಿ ಡಾ. ಡಿ.ವಿ. ಪರಶಿವಮೂರ್ತಿ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ಸಿಂಡಿಕೇಟ್ ಸದಸ್ಯರು, ಡೀನ್ರು ಮತ್ತಿತರರಿದ್ದರು. 198 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್ಡಿ ಮತ್ತು 7 ಸಂಶೋಧಕರಿಗೆ ಡಿಲಿಟ್ ಪದವಿ ಕೂಡ ಪ್ರದಾನ ಮಾಡಲಾಯಿತು.
ಕನ್ನಡ ವಿವಿಗೆ ಅನುದಾನಕ್ಕಾಗಿ ಸಿಎಂ ಬಳಿ ಚರ್ಚಿಸುವೆ-ಸಚಿವ ಡಾ. ಎಂ.ಸಿ. ಸುಧಾಕರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕನ್ನಡ ವಿವಿಯ ಆರ್ಥಿಕ ಸಂಕಷ್ಟಗಳ ಕುರಿತು ಚರ್ಚಿಸಿ, ಆದಷ್ಟು ಬೇಗ ಪರಿಹಾರಗಳನ್ನು ಹುಡುಕಿ, ಕನ್ನಡ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆ, ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಹೊಸ ಹುರುಪು ಹಾಗೂ ಹೊಳಪಿನೊಂದಿಗೆ ನಡೆಯಲು ಬೇಕಾದ ವಾತಾವರಣದ ಸೃಷ್ಟಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಹೇಳಿದರು.
ಹಂಪಿ ಕನ್ನಡ ವಿವಿಯ ನವರಂಗ ಬಯಲು ರಂಗಮಂದಿರದಲ್ಲಿ ಶುಕ್ರವಾರ ನಡೆದ ವಿವಿಯ 33ನೇ ನುಡಿಹಬ್ಬ-ಘಟಿಕೋತ್ಸವದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಡಿಲಿಟ್ ಹಾಗೂ ಪಿಎಚ್ಡಿ ಪದವಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಕನ್ನಡ ವಿಶ್ವವಿದ್ಯಾಲಯ ಅಮೋಘ ಸಾಧನೆ ಮಾಡಿದ ಹೆಮ್ಮೆಯ ವಿಶ್ವವಿದ್ಯಾಲಯ ಆಗಿದೆ.
ಈ ವಿವಿ ಅನುದಾನದ ಕೊರತೆಯಿಂದ ತನ್ನ ಸಂಶೋಧನೆ ಅಭಿವೃದ್ಧಿ ಹಾಗೂ ನಿರ್ವಹಣೆ ಚಟುವಟಿಕೆಗಳಲ್ಲಿ ಸಂಕಷ್ಟ ಎದುರಿಸುತ್ತಿರುವುದನ್ನು ಕೇಳಿರುವೆ. ಸ್ವತಃ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಆರ್ಥಿಕ ಸಂಕಷ್ಟಗಳಿಂದಾಗಿ ಉದ್ಭವಿಸಿರುವ ಇಲ್ಲಿನ ಪರಿಣಾಮಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಕೂಡ ಇತ್ತೀಚೆಗೆ ಕರ್ನಾಟಕದಲ್ಲಿ ಶೇ. 60ರಷ್ಟು ವಾಣಿಜ್ಯ ಫಲಕಗಳು ಕನ್ನಡದಲ್ಲಿರಬೇಕು ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟಗಳನ್ನು ಮುಖ್ಯಮಂತ್ರಿ ಅವರು ಸಹಾನುಭೂತಿಯಿಂದ ಪರಿಹರಿಸಬಲ್ಲರು ಎನ್ನುವ ನಂಬಿಕೆ ನನ್ನದಾಗಿದೆ ಎಂದರು.