- ನನಗೆ ಕಾಂಗ್ರೆಸ್ಸೇ ಇಲ್ಲಿ ಎದುರಾಳಿ: ಹೈಕಮಾಂಡ್‌ಗೆ ಸಾದಿಕ್ ಪೈಲ್ವಾನ್ ಸೆಡ್ಡು! - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಾಲ್ಯದಿಂದಲೂ ನಾನೊಬ್ಬ ಪೈಲ್ವಾನ್. ಒಮ್ಮೆ ಅಖಾಡಕ್ಕಿಳಿದರೆ ಮತ್ತೆ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮುಸ್ಲಿಂ ಸಮಾಜದ ಹಿರಿಯ ಸಾದಿಕ್ ಪೈಲ್ವಾನ್ ಪಕ್ಷದ ಹೈಕಮಾಂಡ್‌ಗೆ ಸೆಡ್ಡು ಹೊಡೆದಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡುವಂತೆ ಕೇಳಿದ್ದೆವು. ನಾನೂ ಪ್ರಬಲ ಆಕಾಂಕ್ಷಿಯಾಗಿದ್ದೆ. ಮುಸ್ಲಿಮರಿಗೆ ಟಿಕೆಟ್ ಸಿಕ್ಕಿಲ್ಲ. ಹಾಗಾಗಿ, ನಾನು ಪಕ್ಷೇತರನಾಗಿಯೇ ಸ್ಪರ್ಧಿಸುತ್ತೇನೆ ಎಂದು ಬಂಡಾಯದ ಕಹಳೆ ಮೊಳಗಿಸಿದ್ದಾರೆ.

ಎದುರಾಳಿಯಾಗಿ ಆನೆಯೇ ಇದ್ದರೂ ನಾನು ಸೆಡ್ಡು ಹೊಡೆಯುತ್ತೇನೆ. ದಕ್ಷಿಣ ಕ್ಷೇತ್ರದಲ್ಲಿ ನನಗೆ ಕಾಂಗ್ರೆಸ್ ಪಕ್ಷವೇ ಎದುರಾಳಿ. ಯಾರು ಏನೇ ಹೇಳಿದರೂ ನಾನು ಸ್ಪರ್ಧೆ ಮಾಡುವುದು ಶತಃಸಿದ್ಧ. ಮಾ.23ರ ಬೆಳಗ್ಗೆ 11.30ಕ್ಕೆ ಇಲ್ಲಿನ ಅರಳೀ ಮರ ವೃತ್ತದಿಂದ ಪಾದಯಾತ್ರೆ ಮೂಲಕ ತೆರಳಿ, ಚುನಾವಣಾಧಿಕಾರಿಗೆ ಇನ್ನೊಂದು ಸಲ ನನ್ನ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.


- - -

* ಕೈ ತಪ್ಪಿದ ಟಿಕೆಟ್: ಮುಸ್ಲಿಮರ ಪ್ರತಿಭಟನೆ

- ಜಸ್ಟೀಸ್ ಫಾರ್ ಮೈನಾರಿಟೀಸ್ ಎಂಬುದಾಗಿ ಮೊಳಗಿದ ಘೋಷಣೆ ಕನ್ನಡಪ್ರಭ ವಾರ್ತೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ತಪ್ಪಿದ್ದರಿಂದ ಆಕ್ರೋಶಗೊಂಡ ಮುಸ್ಲಿಮರು ಕೈಯಲ್ಲಿ ಕಪ್ಪು ಬಾವುಟಗಳನ್ನು ಹಿಡಿದು, ಜಸ್ಟೀಸ್ ಫಾರ್ ಮೈನಾರಿಟೀಸ್, ಜಸ್ಟೀಸ್ ಫಾರ್ ಅಹಿಂದ ಎಂಬ ಘೋಷಣೆ ಮೊಳಗಿಸುತ್ತ ಪ್ರತಿಭಟಿಸಿದರು.

ನಗರದ ಅಕ್ತರ್ ರಜಾ ವೃತ್ತದಲ್ಲಿ ಮುಸ್ಲಿಮರು ತಮ್ಮ ಸಮುದಾಯಕ್ಕೆ ಟಿಕೆಟ್ ತಪ್ಪಿದ್ದರಿಂದ ಆಕ್ರೋಶಗೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ, ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ಆಕ್ರೋಶಗೊಂಡು ಘೋಷಣೆ ಕೂಗಿದರು.

ಇದೇ ವೇಳೆ ಮಾತನಾಡಿದ ಮುಖಂಡರು, ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮರು ಬಹುಸಂಖ್ಯಾತ ಮತದಾರರಿದ್ದಾರೆ. ಸುಮಾರು 75 ಸಾವಿರಕ್ಕೂ ಅಧಿಕ ಮುಸ್ಲಿಮರಿದ್ದರೂ ಇಲ್ಲಿವರೆಗೂ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಅಹಿಂದ ವರ್ಗಗಳ ಹೆಸರನ್ನು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಾಯಕರಿಗೆ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಟಿಕೆಟ್ ನೀಡುವ ವೇಳೆ ನೆನಪಿಗೆ ಬರಲಿಲ್ಲವೇ ಎಂದು ಆಕ್ರೋಶ ತೋರ್ಪಡಿಸಿದರು.

ಅಯ್ಯಯ್ಯೋ ಅಯ್ಯಯ್ಯೋ... ಅನ್ಯಾಯ ಅನ್ಯಾಯ... ಮುಸ್ಲಿಮರಿಗೆ ಕಾಂಗ್ರೆಸ್ಸಿನಿಂದ ಅನ್ಯಾಯ ಅನ್ಯಾಯ... ಎಂಬುದಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಸ್ಟೀಸ್ ಫಾರ್ ಮುಸ್ಲಿಮ್ಸ್, ಜಸ್ಟೀಸ್ ಫಾರ್ ಅಹಿಂದ, ಜಸ್ಟೀಸ್ ಫಾರ್ ಮೈನಾರಿಟೀಸ್ ಎಂಬುದಾಗಿ ಭಿತ್ತಿ ಪತ್ರಕಗಳನ್ನು ಹಿಡಿದು ಪ್ರತಿಭಟಿಸಿದರು.

- - -