ಕನ್ನಡಪ್ರಭ ವಾರ್ತೆ ವಿಜಯಪುರ
ಮರಗಳು ನಮ್ಮ ಜೀವನಾಡಿಯಾಗಿದ್ದು, ಒಂದು ಮರ ಸಾವಿರ ಜೀವಗಳನ್ನು ಉಳಿಸುತ್ತದೆ. ನಾವು ಹೆಚ್ಚು ಹೆಚ್ಚು ಮರಗಳನ್ನು ನೆಡಬೇಕು. ನೀರನ್ನು ಮಿತವಾಗಿ ಬಳಸಿ, ವಿದ್ಯುತ್ ಉಳಿಸಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ನಗರದ ಎಬಿವಿ ಸಿಬಿಎಸ್ಇ ಶಾಲೆ ಮುಖ್ಯೋಪಾಧ್ಯಾಯಿನಿ ಐಶ್ವರ್ಯ ಸಂಗಮ ಹೇಳಿದರು.ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಟಲ್ ಬಿಹಾರಿ ವಾಜಪೇಯಿ ಸಿಬಿಎಸ್ಇ ಶಾಲೆಯಲ್ಲಿ ಆಚರಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಾವು ಭೂಮಿಯನ್ನು ಕಾಪಾಡಿದರೆ ನಾಳೆ ಭೂಮಿ ನಮ್ಮನ್ನು ಕಾಪಾಡುತ್ತದೆ ಎಂಬ ಸಂಕಲ್ಪವಿರಬೇಕು. ಸಣ್ಣ ಸಣ್ಣ ಕ್ರಮಗಳಿಂದ ದೊಡ್ಡ ಬದಲಾವಣೆ ತರಬಹುದಾಗಿದ್ದು, ಶಾಲೆಯಲ್ಲಿ, ಮನೆಯಲ್ಲಿ, ಸಮಾಜದಲ್ಲಿ ಪರಿಸರ ಜಾಗೃತಿ ಮೂಡಿಸಬೇಕಿದೆ. ಪ್ರತಿವರ್ಷ ಏಪ್ರಿಲ್ 22ರಂದು ಭೂಮಿಯನ್ನು ರಕ್ಷಿಸುವ, ಪರಿಸರವನ್ನು ಕಾಪಾಡುವ ಸಂಕಲ್ಪದೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಶಾಲಾ ವಿದ್ಯಾರ್ಥಿಗಳು ಭೂಮಿಯ ಚಿತ್ರಣವನ್ನು ತೆಗೆದು ಜಾಗೃತಿ ಮೂಡಿಸುತ್ತಿದ್ಧಾರೆ ಎಂದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಶಾಲೆಯ ನಾಮನಿರ್ದೇಶಿತ ಅಧ್ಯಕ್ಷ ಬಸವರಾಜ ಸುಗೂರ, ಹಣಕಾಸು ಕಾರ್ಯದರ್ಶಿ ಸದಾನಂದ ದೇಸಾಯಿ, ಕೋಶಾಧಿಕಾರಿಯಾದ ಶಿವಾನಂದ ನೀಲಾ, ಶಾಲಾ ಶೈಕ್ಷಣಿಕ ಆಡಳಿತಾಧಿಕಾರಿ ಡಾ.ಹೆಚ್.ವೆಂಕಟೇಶ, ಉಪಪ್ರಾಂಶುಪಾಲ ರವಿಕಾಂತ ಮೆಂಡೆಗಾರ ಸಂತೋಷ ವ್ಯಕ್ತಪಡಿಸಿದರು.