ಸಾರಾಂಶ
ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಗುಡ್ಡ ದುರಂತದಲ್ಲಿ ಹುದುಗಿ ಹೋಗಿದ್ದ ಟ್ಯಾಂಕರ್ನ ಚಕ್ರದ ಜೋಡಿ ಹಾಗೂ ಮುಂದಿನ ಕ್ಯಾಬಿನ್ ಹೊರತೆಗೆಯಲಾಗಿದೆ. ಮಣ್ಣಿನ ಒಳಗೆ ಸಿಲುಕಿರುವ ಕೇರಳದ ಅರ್ಜುನ ಚಲಾಯಿಸುತ್ತಿದ್ದ ಭಾರತ ಬೆಂಜ್ ಲಾರಿಯ ಹುಡುಕಾಟ ನಡೆಸಲಾಗಿತ್ತು.
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಗುಡ್ಡ ದುರಂತದಲ್ಲಿ ಹುದುಗಿ ಹೋಗಿದ್ದ ಟ್ಯಾಂಕರ್ನ ಚಕ್ರದ ಜೋಡಿ ಹಾಗೂ ಮುಂದಿನ ಕ್ಯಾಬಿನ್ ಹೊರತೆಗೆಯಲಾಗಿದ್ದು, ನಿನ್ನೆಯಿಂದ ಆರಂಭವಾದ ಕಾರ್ಯಾಚರಣೆಗೆ ಕೊಂಚ ಯಶಸ್ಸು ಲಭಿಸಿದಂತಾಗಿದೆ.
ಮಣ್ಣಿನ ಒಳಗೆ ಸಿಲುಕಿರುವ ಕೇರಳದ ಅರ್ಜುನ ಚಲಾಯಿಸುತ್ತಿದ್ದ ಭಾರತ ಬೆಂಜ್ ಲಾರಿಯ ಹುಡುಕಾಟ ನಡೆಸಲಾಗಿತ್ತು. ಆದರೆ ಟ್ಯಾಂಕರ್ ಬಿಡಿಭಾಗಗಳು ದೊರಕಿದವು. ಹಿಂದೆಯೇ ಈ ಟ್ಯಾಂಕರ್ನ ಟ್ಯಾಂಕ್ ದೊರೆತಿತ್ತು. ಸದ್ಯ ಸಂಪೂರ್ಣ ಅವಶೇಷ ದೊರೆತಂತಾಗಿದೆ.ಆರಂಭದಲ್ಲಿ ವಾಹನದ ಬಿಡಿ ಭಾಗಗಳು ದೊರೆತಾಗ ಅದು ಅರ್ಜುನ ಓಡಿಸುತ್ತಿದ್ದ ಲಾರಿಯ ಬಿಡಿಭಾಗಗಳು ಎಂದು ಅಂದಾಜಿಸಲಾಗಿತ್ತು. ಆದರೆ ಆನಂತರದಲ್ಲಿ ತಜ್ಞರ ಪರಿಶೀಲನೆಯಿಂದ ಅದು ಟ್ಯಾಂಕರ್ನ ಭಾಗ ಎಂದು ದೃಢಪಟ್ಟಿತು.
ತಲೆಕೆಳಕಾದ ಸ್ಥಿತಿಯಲ್ಲಿ ಟ್ಯಾಂಕರ್: ಹೆದ್ದಾರಿಯ ಪಕ್ಕದಲ್ಲಿ ನಿಂತಿದ್ದ ಟ್ಯಾಂಕರ್ಗೆ ಗುಡ್ಡದ ಮಣ್ಣು ಅಪ್ಪಳಿಸಿದ ರಭಸಕ್ಕೆ ಟ್ಯಾಂಕರ್ ವೇಗವಾಗಿ ಗಂಗಾವಳಿ ನದಿಗೆ ಬಿದ್ದಿದ್ದು, ಅದರ ಮುಂಭಾಗ ಕೆಳಗಾಗಿ ಬಿದ್ದಿದೆ. ಮಣ್ಣಿನ ಜತೆಗೆ ಗುಡ್ಡದ ಕಲ್ಲುಗಳು ಸಹ ಟ್ಯಾಂಕರ್ ಮೇಲೆ ಬಿದ್ದಿದ್ದರಿಂದ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೂ ಸಿಕ್ಕಿರುವ ಅವಶೇಷಗಳು ಟ್ಯಾಂಕರ್ನದ್ದೇ ಎಂದು ವೈಜ್ಞಾನಿಕ ದೃಢೀಕರಿಸಲು ಬಿಡಿ ಭಾಗಗಳನ್ನು ಅಧ್ಯಯನಕ್ಕೆ ಕಳುಹಿಸುವ ಸಾಧ್ಯತೆ ಇದೆ.ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ, ಎಸ್ಪಿ ಎಂ. ನಾರಾಯಣ, ಕೇರಳ ಶಾಸಕ ಎ.ಕೆ.ಎಂ. ಅಶ್ರಫ್ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ಹಾಗೂ ಇತರ ರಕ್ಷಣಾ ತಂಡಗಳು ಇದ್ದವು.
ಲಾರಿ ಲೋಡ್ ನಾಟಾ: ಅರ್ಜುನ ಚಲಿಸುತ್ತಿದ್ದ ಭಾರತ ಬೆಂಜ್ ಲಾರಿಯಲ್ಲಿ ನಾಟಾ ತುಂಬಿದ್ದು, ಆರಂಭದಲ್ಲಿಯೇ ನಾಟಾದ ಒಂದು ತುಂಡು ದೊರೆತಿತ್ತು. ಹಾಗಾಗಿ ಅರ್ಜುನ ಅವರ ಲಾರಿಯೂ ಅದೇ ಸ್ಥಳದಲ್ಲಿ ಇರಬಹುದೆಂದು ಹೆಚ್ಚಿನ ಕಾರ್ಯಾಚರಣೆ ನಡೆಸಲಾಗಿತ್ತು. ಅದರೆ ದುರದೃಷ್ಟವಷಾತ್ ಆ ಸ್ಥಳದಲ್ಲಿ ಕಟ್ಟಿಗೆ ತುಂಡು ಬಿಟ್ಟರೆ ಬೇರೆ ಯಾವ ಅವಶೇಷಗಳೂ ಸಿಗಲಿಲ್ಲ.ಈಶ್ವರ್ ಮಲ್ಪೆ ಸಾಹಸ: ಮುಳುಗುತಜ್ಞ ಈಶ್ವರ್ ಮಲ್ಪೆ ಅವರನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಅವರು ತಮ್ಮ ತಂಡದೊಂದಿಗೆ ನದಿಯಲ್ಲಿ ಉಂಟಾಗುವ ಅಪಾಯವನ್ನೂ ಲೆಕ್ಕಿಸದೆ ಊಟ, ವಿಶ್ರಾಂತಿ ಪಡೆಯದೇ ನಿರಂತರ ಕಾರ್ಯಾಚರಣೆ ನಡೆಸಿ ಸಾಹಸ ಮೆರೆದರು. ಅದರ ಪರಿಣಾಮವಾಗಿ ಟ್ಯಾಂಕರ್ನ ಅವಶೇಷಗಳು ಪತ್ತೆಹಚ್ಚಲು ಸಹಾಯಕವಾಯಿತು.