ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ

| Published : May 31 2025, 12:52 AM IST

ಸಾರಾಂಶ

ಯುವಕರು ದೇಶಾಭಿಮಾನ ಬೆಳಸಿಕೊಳ್ಳಬೇಕು. ದೇಶದ ಸುರಕ್ಷತೆಗೆ ನಮ್ಮ‌ಇಡೀ ಸೈನ್ಯ ತಮ್ಮ ಕುಟುಂಬ ತೊರೆದು ಗಡಿಯಲ್ಲಿ ಶತೃಗಳೊಂದಿಗೆ ನಿರಂತರ ಹೋರಾಡುತ್ತಾ ಪ್ರಾಣ ಕಳೆದುಕೊಳ್ಳುತ್ತಾರೆ.‌ ಆದರೆ, ದೇಶದೊಳಗಿನ ಕೆಲ ರಾಜಕೀಯ ವ್ಯಕ್ತಿಗಳು ಭಾರತೀಯ ಸೇನೆ ಮತ್ತು ಸೈನಿಕರಿಗೆ ಅಪಮಾನದ ಮಾತನ್ನಾಡುತ್ತಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ನಾಗರಿಕರು, ಮಾಜಿ ಸೈನಿಕರು, ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಗರದಲ್ಲಿ ವಿವಿಧ ಸಂಘಟನೆಗ ಮೂಲಕ ಶುಕ್ರವಾರ ನಗರದ ಭುವನೇಶ್ವರಿ ವೃತ್ತದಿಂದ 650 ಮೀ ಗಳ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.

ಭುವನೇಶ್ವರಿ ವೃತ್ತದಿಂದ ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭವಾದ ಬೃಹತ್ ತಿರಂಗಾ ಯಾತ್ರೆ ಮಳೆಯಲ್ಲಿ ನೆನೆಯುತ್ತಲೇ ಹೆಜ್ಜೆ ಹಾಕಿ ಗಂಗಮ್ಮ ಗುಡಿರಸ್ತೆ, ಕೋರ್ಟ್ ರಸ್ತೆ, ಅಂಬೇಡ್ಕರ್ ವೃತ್ತ, ಬಿಬಿ ರಸ್ತೆ, ಸರ್ ಎಂವಿ ವೃತ್ತ ಮತ್ತು ಬಜಾರ್ ರಸ್ತೆಯ ಮೂಲಕ ಮತ್ತೆ ಭುವನೇಶ್ವರಿ ವೃತದಲ್ಲಿ ಸಮಾವೇಶಗೊಂಡ ಯಾತ್ರೆಯಲ್ಲಿ ಸಾವಿರಾರು ನಾಗರಿಕರು, ವಿದ್ಯಾರ್ಥಿಗಳು, ಮಾಜಿ ಸೈನಿಕರು ಭಾರತ್ ಮಾತಾ ಕೀ ಜೈ, ಭಾರತೀಯ ಸೈನಿಕರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಸಿಂದೂರ ಇನ್ನೂ ಮುಗಿದಿಲ್ಲ

ಭಾರತೀಯ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಸದಸ್ಯ ಸುಂದರ್ ರಾಜ್ ಮಾತನಾಡಿ, ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ. ಇನ್ನೊಮ್ಮೆ ನಡೆದರೆ ಪಾಕಿಸ್ತಾನ ನಿರ್ಣಾಮವಾಗಲಿದೆ. ಪಿಒಕೆ ನಮ್ಮದಾಗಲಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂಬುದು ದೇಶದ ನಿಲುವಾಗಿತ್ತು. ಪ್ರಧಾನಿಯವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರು. ಜನರು ಬಯಸಿದ್ದನ್ನು ನಾವು ಮಾಡಿ ತೋರಿಸಿದೆವು. ಸೈನಿಕರ ಹಿಂದೆ ಇಡೀ ರಾಷ್ಟ್ರ ನಿಂತಿತ್ತು. ಪಾಕಿಸ್ತಾನಕ್ಕೆ ಸಿಂದೂರ ಸಮರ್ಥ ಉತ್ತರ ನೀಡಿದೆ ಎಂದರು.

ಯುವಕರು ದೇಶಾಭಿಮಾನ ಬೆಳಸಿಕೊಳ್ಳಬೇಕು. ದೇಶದ ಸುರಕ್ಷತೆಗೆ ನಮ್ಮ‌ಇಡೀ ಸೈನ್ಯ ತಮ್ಮ ಕುಟುಂಬ ತೊರೆದು ಗಡಿಯಲ್ಲಿ ಶತೃಗಳೊಂದಿಗೆ ನಿರಂತರ ಹೋರಾಡುತ್ತಾ ಪ್ರಾಣ ಕಳೆದುಕೊಳ್ಳುತ್ತಾರೆ.‌ ಆದರೆ, ದೇಶದೊಳಗಿನ ಕೆಲ ರಾಜಕೀಯ ವ್ಯಕ್ತಿಗಳು ಭಾರತೀಯ ಸೇನೆ ಮತ್ತು ಸೈನಿಕರಿಗೆ ಅಪಮಾನದ ಮಾತನ್ನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪಾಕ್‌ನಿಂದ ಉಗ್ರರ ಪೋಷಣೆ

ಭಾರತೀಯ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ನೆರೆಯ ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುವ ಮೂಲಕ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ದೇಶದ ಅಮಾಯಕ ಹಿಂದು ಪ್ರವಾಸಿಗರನ್ನು ಹತ್ಯೆಗೈದ ಉಗ್ರರಿಗೆ ಆಪರೇಷನ್ ಸಿಂದೂರ್ ಮೂಲಕ ಭಾರತದ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರೇಮಲೀಲಾ ವೆಂಕಟೇಶ್ ಮಾತನಾಡಿ, ಇತ್ತೀಚೆಗೆ ಪಾಕಿಸ್ತಾನದ ಪ್ರಚೋದಿತ ಉಗ್ರರಿಂದ ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಹತ್ಯಾಕಾಂಡವು ಸಮಗ್ರ ಭಾರತೀಯರ ಸ್ವಾಭಿಮಾನಕ್ಕೆ ಮಾಡಿದ ಅವಮಾನವಾಗಿವೆ. ವೇಶದಲ್ಲಿ ಆಶಾಂತಿ, ಆಸ್ಥಿರತೆ ಸೃಷ್ಟಿಗೆ ಪಾಕಿಸ್ತಾನ ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಆದರೆ, ಇಂತಹ ಪೈಶಾಚಿಕ ಕೃತ್ಯಗಳು ಯಶಸ್ಸು ಸಾಧಿಸದಂತೆ ನಾವೆಲ್ಲರು ಒಗ್ಗೂಡಿ ಜಾಗೃತರಾಗಬೇಕಿದೆ. ದೇಶದ ಹಿತಕ್ಕಾಗಿ ಗಡಿಯಲ್ಲಿ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಭಾರತೀಯ ಸೈನಿಕರ ಜೊತೆಗೆ ಜವಾಬ್ದಾರಿಯುತ ನಾಗರಿಕರಾದ ನಾವೆಲ್ಲರೂ ನಿಲ್ಲಬೇಕು ಎಂದು ಹೇಳಿದರು.

ತಿರಂಗಾ ಯಾತ್ರೆಯಲ್ಲಿ ನಿವೃತ್ತ ಸೈನಿಕರಾದ ನಾಯಕ್ ಸುಭೇದಾರ್ ರಾಮು, ವೆಂಕಟಸ್ವಾಮಿ, ಎರ್ ಪೋರ್ಸ್ ಯೋಧ ಎನ್,ನಟರಾಜ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ವಿ.ರವಿಕುಮಾರ್, ಆರ್ಯವೈಶ್ಯ ಸಂಘದ ಗೌವರವಾಧ್ಯಕ್ಷ ದೇಶಾನಂಜುಂಡಯ್ಯಶ್ರೇಷ್ಟಿ, ಗುರು ಪ್ರಿಂಟರ್ಸ್ ಸೂರ್ಯನಾರಾಯಣ ಶೆಟ್ಟಿ, ಕುರುಬರಸಂಘದಮಾಜಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಅನುಆನಂದ್, ಡಾಂಬು ಶ್ರೀನಿವಾಸ್, ರಾಣಿ ಪ್ರಭಾಕರ್, ರಮ್ಯಾಗಣೇಶ್, ರಾಧ, ಅಮೂಲ್ಯ, ಕಿರಣ್,ವೆಂಕಟೇಶ್ ಬಾಬು, ಲೋಕೇಶ್, ರಾಜೀವ್, ಸ್ವರೂಪ್, ನಾಗರಿಕರು, ವಿದ್ಯಾರ್ಥಿಗಳು, ಮಾಜಿ ಸೈನಿಕರು ಇದ್ದರು.