ಆಪರೇಶನ್‌ ಸಿಂದೂರಗೆ ಗದಗ ಜಿಲ್ಲೆಯಲ್ಲಿ ಪ್ರಶಂಸೆ

| Published : May 11 2025, 11:56 PM IST

ಸಾರಾಂಶ

ಆಪರೇಶನ್‌ ಸಿಂದೂರ ಮೂಲಕ ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳನ್ನು ಧ್ವಂಸ ಮಾಡಿರುವುದಕ್ಕೆ ಗದಗ ಜಿಲ್ಲೆಯ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗದಗ: ಆಪರೇಶನ್‌ ಸಿಂದೂರ ಮೂಲಕ ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳನ್ನು ಧ್ವಂಸ ಮಾಡಿರುವುದಕ್ಕೆ ಗದಗ ಜಿಲ್ಲೆಯ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗುವ ಉಗ್ರ ಸಂಘಟನೆಗಳ ಹುಟ್ಟಡಗಿಸುವ ಹೋರಾಟದಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರದ ಜತೆ ಇದ್ದೇವೆ. ನಮ್ಮ ಹೆಮ್ಮೆಯ ಭಾರತೀಯ ಸೈನ್ಯವನ್ನು ದೇಶದ ಪ್ರತಿಯೊಬ್ಬ ನಾಗರಿಕರು ಬೆಂಬಲಿಸಬೇಕಿದೆ. ಸಿಂಧೂರವು ಕೇವಲ ಒಂದು ವಸ್ತುವಲ್ಲ, ಭಾರತೀಯ ಸಂಸ್ಕೃತಿಯಲ್ಲಿ ಆಳವಾದ ಭಾವನಾತ್ಮಕ, ಅಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯವನ್ನು ಹೊಂದಿದೆ ಎಂದು ಗದುಗಿನ ಭಾರತ ಜನಸೇವಾ ಟ್ರಸ್ಟ್ ಅಧ್ಯಕ್ಷ ಅಂದಾನಯ್ಯ ಹಿರೇಮಠ ಹೇಳಿದ್ದಾರೆ.

ವೈರಿ ರಾಷ್ಟ್ರ ಪಾಕಿಸ್ತಾನದ ಭಯೋತ್ಪಾದಕರು ಪಹಲ್ಗಾಂದಲ್ಲಿ 26 ಜನ ಪ್ರವಾಸಿಗರ ಮೇಲೆ ದಾಳಿ ಮಾಡುವ ಮೂಲಕ ದೇಶದ ಶಾಂತಿಯನ್ನು ಮತ್ತೊಮ್ಮೆ ಕೆದಕಿದ್ದಾರೆ. ಅದರ ಪ್ರತೀಕಾರವಾಗಿ ಭಾರತದ ಸೈನಿಕರು ಆಪರೇಶನ್‌ ಸಿಂದೂರ ಮೂಲಕ ಭಾರತದ ಶಕ್ತಿ ಜಗತ್ತಿಗೆ ತೋರಿಸಿದ್ದಾರೆ. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಕೈ ಜೋಡಿಸಿ ದೇಶ ರಕ್ಷಣೆಗೆ ಪಣ ತೊಡಬೇಕು ಎಂದು ನರಗುಂದದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದ್ದಾರೆ.ಆಪರೇಶನ್‌ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ಸೇನಾ ಕಾರ್ಯಾಚರಣೆ ಶ್ಲಾಘನೀಯ. ಭಾರತೀಯ ಸೇನಾಪಡೆ ಜತೆ ಇಡೀ ದೇಶದ ಜನತೆ ನಿಂತಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ತೀರ್ಮಾನಗಳಿಗೆ ಪ್ರತಿಪಕ್ಷಗಳು ಸಹ ಕೈ ಜೋಡಿಸಿವೆ. ಪಾಕಿಸ್ತಾನದ ಹೀನ ಕೃತ್ಯಕ್ಕೆ ಭಾರತ ಎಂದೂ ಬಗ್ಗದು. ಭಾರತೀಯ ರಕ್ಷಣಾ ಪಡೆ ಭಾರತದ ರಾಷ್ಟ್ರಪ್ರೇಮ ಎಂತಹದ್ದು ಎಂಬುದನ್ನು ತೋರಿಸಿವೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದ್ದಾರೆ. ಪಹಲ್ಗಾಂನಲ್ಲಿ ನಾಗರಿಕರನ್ನು ಕೊಂದ ಭಯೋತ್ಪಾದಕರಿಗೆ ಭಾರತೀಯ ಸೇನೆ ಆಪರೇಷನ್ ಸಿಂದೂರ ಮೂಲಕ ತಕ್ಕ ಉತ್ತರ ನೀಡಿದೆ. ಭಾರತೀಯ ಸೇನೆ ನಡೆಸಿದ ಪ್ರತೀಕಾರದ ದಾಳಿಗೆ ಪಕ್ಷ ಭೇದ ಮರೆತು ಇಡೀ ದೇಶ ಸೈನಿಕರಿಗೆ ಮತ್ತು ಪ್ರಧಾನಿಯವರಿಗೆ ಬೆಂಬಲವಾಗಿ ನಿಂತಿದೆ. ಇದು ಭಾರತದ ಒಗ್ಗಟ್ಟು ಪ್ರದರ್ಶಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿ ದೇಶದ ಹಿರಿಮೆ ಹೆಚ್ಚಿಸಿದೆ ಎಂದು ರೋಣ ಶಾಸಕ ಜಿ.ಎಸ್‌. ಪಾಟೀಲ ಹೇಳಿದ್ದಾರೆ.