ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಾಯಿ ಆರೋಗ್ಯವು ಸಂಪೂರ್ಣ ದೈಹಿಕ ಆರೋಗ್ಯಕ್ಕೆ ಪೂರಕವಾಗಿದೆ. ಪ್ರತಿ ದಿನ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ನಮ್ಮ ದಿನಚರಿಯಲ್ಲಿ ರೂಢಿಸಿಕೊಳ್ಳುವ ಮೂಲಕ ಬಾಯಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಹಿರಿಯ ದಂತ ಆರೋಗ್ಯಾಧಿಕಾರಿ ಡಾ.ಜೆ.ಡಿ.ಸ್ಮಿತಾ ಹೇಳಿದರು.ತಾಲೂಕಿನ ಅರಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿ ಬಾಯಿ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂತೃಪ್ತ ಬಾಯಿ, ಸಂತೃಪ್ತ ಜೀವನ ಎಂಬ ಈ ವರ್ಷದ ಬಾಯಿ ಆರೋಗ್ಯ ದಿನದ ಘೋಷವಾಕ್ಯದೊಂದಿಗೆ ಸಾರ್ವಜನಿಕರಿಗೆ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬಾಯಿ ಸ್ವಚ್ಛತೆಯ ಕೊರತೆಯಿಂದ ಹಲವು ಕಾಯಿಲೆಗಳು ಗುರುತಿಸಬಹುದಾಗಿದೆ ಎಂದು ಎಚ್ಚರಿಸಿದರು.ದಂತ ಕುಳಿ ಸಮಸ್ಯೆ, ವಸಡಿನ ಸಮಸ್ಯೆ, ಉಸಿರಿನ ಸಮಸ್ಯೆ ಮುಂತಾದ ಆರೋಗ್ಯ ಸಮಸ್ಯೆಯಿಂದ ಮುಕ್ತರಾಗಿ ಬಾಯಿ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ಆರೋಗ್ಯವಂತ ಬಾಯಿಯಿಂದ ಆರೋಗ್ಯವಂತ ದೇಹ ಹೊಂದಬಹುದು ಎಂದರು.
ದಂತ ವೈದ್ಯಾಧಿಕಾರಿ ಡಾ.ಅರುಣಕುಮಾರ್ ಮಾತನಾಡಿ, ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಹೀಗೆ ದಿನಕ್ಕೆ ಎರಡು ಬಾರಿ ಬ್ರಷ್ ಮಾಡುವುದು ರೂಢಿಸಿಕೊಳ್ಳಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಬದಲಿಸುವದು, ದುಶ್ಚಟಗಳಿಂದ ದೂರ ಇರುವುದು, ಸೂಕ್ತ ಚಿಕಿತ್ಸೆ ಮೂಲಕ ವಸಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಈ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವನಿತಾ, ದೈಹಿಕ ಶಿಕ್ಷಕ ರಾಘವೇಂದ್ರ, ಆಶಾ ಕಾರ್ಯಕರ್ತೆ ರಾಣಿ ಸೇರಿದಂತೆ ಇತರರು ಇದ್ದರು.