ಸಾರಾಂಶ
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ-ಮಜ್ಜಿಗೆಪುರ ಗ್ರಾಮದ ಬಳಿ ದೇವರಾಯ ಅಣೆಕಟ್ಟೆಯಲ್ಲಿ ವಿ.ಫಾರಂ ಪವರ್ ಕಂ. (ಪ್ರೈ) ಲಿಮಿಟೆಡ್ ತೆರೆಯಲು ಹೊರಟಿದ್ದ 0.5 ಮೆ.ವ್ಯಾ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯನ್ನು ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ರದ್ದು ಪಡಿಸಿ ಆದೇಶಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬೆಳಗೊಳ-ಮಜ್ಜಿಗೆಪುರ ಗ್ರಾಮದ ಬಳಿ ದೇವರಾಯ ಅಣೆಕಟ್ಟೆಯಲ್ಲಿ ವಿ.ಫಾರಂ ಪವರ್ ಕಂ. (ಪ್ರೈ) ಲಿಮಿಟೆಡ್ ತೆರೆಯಲು ಹೊರಟಿದ್ದ 0.5 ಮೆ.ವ್ಯಾ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯನ್ನು ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ರದ್ದು ಪಡಿಸಿ ಆದೇಶಿಸಿದ್ದಾರೆ.ಕಂಪನಿಗೆ ಹಂಚಿಕೆಯಾಗಿದ್ದ 0.5 ಮೆ.ವ್ಯಾ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆ ಇದುವರೆವಿಗೂ ಅನುಷ್ಠಾನಗೊಂಡಿಲ್ಲ ಹಾಗೂ ಕಾಲಾವಕಾಶ ಶುಲ್ಕ ಪಾವತಿಸದ ಕಾರಣ ಕಿರು ಜಲ ವಿದ್ಯುತ್ ಯೋಜನೆಯನ್ನು ಸರ್ಕಾರ ರದ್ದು ಪಡಿಸಿ ಆದೇಶಿಸಿರುವುದನ್ನು ಕಾಂಗ್ರೆಸ್ ಮುಖಂಡರು, ಸ್ಥಳಿಯ ಜನಪ್ರತಿನಿದಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಹಾಗೂ ಪ್ರಾಣಿ ಪ್ರಿಯರು ಸ್ವಾಗತಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮುಖಂಡರಾದ ಬೆಳಗೊಳ ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್, ತಾಪಂ ಮಾಜಿ ಸದಸ್ಯ ಮೇಟಗಳ್ಳಿ ಸ್ವಾಮೀಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಬೆಳಗೊಳ ಮಂಜುನಾಥ್, ಭಾರ್ಗವ, ಪುಟ್ಟೇಗೌಡ ಸೇರಿದಂತೆ ಬೆಳಗೊಳ, ಮಜ್ಜಿಗೆಪುರ ಗ್ರಾಮಸ್ಥರು ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.ಕಾವೇರಿ ನದಿಯಲ್ಲಿ ವಿ.ಪಾರಂ ಪವರ್ ಕಂ. (ಪ್ರೈ) ಲಿಮಿಟೆಡ್ ವತಿಯಿಂದ ಗಡಿ ಗುರಿತಿಸದೆ, ಪವರ್ ಪ್ಲಾಂಟ್ ನಿರ್ಮಿಸಲು ತಡೆಗೋಡೆ ನಿರ್ಮಿಸುತ್ತಿದ್ದಾರೆ. ಜೊತೆಗೆ ಎಡಮುರಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ನೂರಾರು ವರ್ಷಗಳ ಇತಿಹಾಸವಿದೆ. ಅನೇಕ ಪ್ರಭೇದದ ಪ್ರಾಣಿ ಪಕ್ಷಿಗಳ ಸಂತತಿ ಇದ್ದು, ಏಕೋ ಜೋನ್ ಎಂದು ಘೋಷಣೆಯಾಗಿದೆ ಎಂದು ತಿಳಿಸಿದ್ದರು.
ಈಗಿದ್ದರೂ ಏಕಾಏಕಿ ತಡೆಗೋಡೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಇದನ್ನು ಪ್ರಶ್ನಿಸಿದವರ ವಿರುದ್ಧ ಜಾತಿ ನಿಂದನೆ ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡುವ ಪ್ರೌವೃತ್ತಿ ಹೊಂದಿದ್ದಾನೆ. ಜೊತೆಗೆ ಅರಣ್ಯ ಇಲಾಖೆ ಸಹ ಈ ಸ್ಥಳವನ್ನು ದೇವರಾಜ ದ್ವೀಪಗಳು ಎಂದು ಗುರುತಿಸಿ ಅತಿಕ್ರಮ ಪ್ರವೇಶಿಸದಂತೆ ಎಚ್ಚರಿಕಾ ನಾಮಫಲಕಗಳನ್ನ ಅಳವಡಿಸಿದ್ದು, ಇಂತಹ ಸಂರಕ್ಷಣಾ ಜಾಗದಲ್ಲಿ ಅವೈಜ್ಞಾನಿಕವಾಗಿ ನದಿಯಲ್ಲಿ ಕೆಲಸ ಮಾಡುತ್ತಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಆಗ್ರಹಿಸಿದ್ದರು.