ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 70 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಭಕ್ತರ ಪರವಾದ ಸಂಘಟನೆ ಅಗತ್ಯವಿತ್ತು. ಅಲ್ಲಿಯ ಕುಂದು-ಕೊರತೆ ನಿವಾರಣೆ, ಭಕ್ತರ ಬಯಕೆ ಈಡೇರಿಕೆಗೆ ಈ ಸಂಘಟನೆ ಕಾರ್ಯತತ್ಪರವಾಗಿದೆ.
ಹುಬ್ಬಳ್ಳಿ:
ಸನಾತನ ಹಿಂದೂ ಧರ್ಮ ಉಳಿವಿಗೆ ಸಂಘಟನೆ ಅಗತ್ಯ. ಈ ಹಿನ್ನೆಲೆಯಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿಯ ಶಿರೂರ ಪಾರ್ಕ್ನ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ (ಎಸ್ಎಎಸ್ಎಸ್) ವತಿಯಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 70 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಭಕ್ತರ ಪರವಾದ ಸಂಘಟನೆ ಅಗತ್ಯವಿತ್ತು. ಅಲ್ಲಿಯ ಕುಂದು-ಕೊರತೆ ನಿವಾರಣೆ, ಭಕ್ತರ ಬಯಕೆ ಈಡೇರಿಕೆಗೆ ಈ ಸಂಘಟನೆ ಕಾರ್ಯತತ್ಪರವಾಗಿದೆ. ಅನೇಕ ಬದಲಾವಣೆ ತರಲಾಗಿದ್ದು ಜಗತ್ತಿನಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಇರುವುದು ಇದೇ ಕಾರಣಕ್ಕೆ. ಹಿಂದೂಗಳಾದ ನಾವೆಲ್ಲ ಒಗ್ಗಟ್ಟಾಗಿರಬೇಕು ಎಂದರು.ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ, ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಉಪಾಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಶಬರಿಮಲೈ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಹಳಷ್ಟು ಭಕ್ತರು ತೆರಳುತ್ತಾರೆ. ಅಲ್ಲಿಯ ಕುಂದು-ಕೊರತೆ, ಆಗು-ಹೋಗುಗಳನ್ನು ಸೇವಾ ಸಮಾಜಂ ನೋಡಿಕೊಳ್ಳುತ್ತಿದೆ. ತ್ಯಾಗ ಮತ್ತು ಶ್ರದ್ಧೆಯಿಂದ ಸೇವೆ ಮಾಡುತ್ತಿದೆ. ಇಂದು ನಡೆಯುತ್ತಿರುವ ಕಾರ್ಯಕಾರಿಣಿಯಲ್ಲಿ ಚಿಂತನ-ಮಂಥನ ನಡೆಸಿ 6 ತಿಂಗಳೊಳಗೆ ಕಾರ್ಯಾನುಷ್ಠಾನ ಆಗಬೇಕು. ಇದರಿಂದ ಸಮಾಜ ಹಾಗೂ ಭಕ್ತರಿಗೆ ಒಳಿತಾಗಲಿದೆ ಎಂದು ಹೇಳಿದರು.
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ, ಸನಾತನ ಧರ್ಮದ ಮೇಲೆ ಹಲವರಿಂದ ದಾಳಿಗಳಾಗಿವೆ. ಅದರಲ್ಲೂ ಹಿಂದೂಗಳ ಆತ್ಮವಾಗಿರುವ ದೇವಸ್ಥಾನ ಮತ್ತು ಮಠಗಳ ಮೇಲೆ ದಾಳಿಯಾಗುತ್ತಿವೆ. ನಾವೆಲ್ಲ ಜಾಗೃತರಾಗಬೇಕು. ಹಿಂದೂಗಳಿಗೆ ಆಗುತ್ತಿರುವ ಅಪಮಾನ, ಅಪಚಾರ, ಅಕ್ರಮ ತಡೆಯಬೇಕು. ಈ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕು ಎಂದು ಕರೆ ನೀಡಿದರು.ಎಸ್ಎಎಸ್ಎಸ್ನ ಕರ್ನಾಟಕ ಸಂಯೋಜಕ ಪಿ.ಎಸ್. ಪ್ರಕಾಶ ಮಾತನಾಡಿ, ದೇವಸ್ಥಾನಗಳು ನಮ್ಮ ಭಕ್ತಿ ಮತ್ತು ಶಕ್ತಿಯ ಕೇಂದ್ರಗಳು. ಭಾರತೀಯ ಹಿಂದೂ ಸಮಾಜ ಭಕ್ತಿ ಮತ್ತು ಶಕ್ತಿಯ ಸಮ್ಮಿಲನವಾಗಿದೆ. ನಾವು ಎರಡನ್ನೂ ಸಂಘಟಿತಗೊಳಿಸಬೇಕು. ಇದರಿಂದ ನಮ್ಮ ಜೀವನ ಬೆಳಕಿನ ಕಡೆಗೆ ಹೋಗುತ್ತದೆ ಎಂದರು.
ಬೆಳಗ್ಗೆ ಎಸ್ಎಎಸ್ಎಸ್ ರಾಷ್ಟ್ರೀಯ ಉಪಾಧ್ಯಕ್ಷ ಆನಂದ ವಾಮನ ನಾಯಕ್ ಗೋಪೂಜೆ ನೆರವೇರಿಸಿದರು. ಹಿರಿಯ ಮಾರ್ಗದರ್ಶಕ ಸೇತುಮಾಧವನ್ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರೀಯ ಅಧ್ಯಕ್ಷ ಎಸ್.ಜೆ.ಆರ್. ಕುಮಾರ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಧರ್ಮದರ್ಶಿ ಆನಂದ ಗುರುಸ್ವಾಮಿ ಸಾನ್ನಿಧ್ಯ ವಹಿಸಿದ್ದರು.ಈ ವೇಳೆ ಪಾಲಿಕೆ ಸದಸ್ಯೆ ವೀಣಾ ಬರದ್ವಾಡ, ರಾಷ್ಟ್ರೀಯ ಕಾರ್ಯಕಾರಿ ಟಿ.ಬಿ. ಶೇಖರ್, ಪ್ರಮುಖರಾದ ಎ.ಆರ್. ಮೋಹನ, ಸೆಲ್ವನ್ ಮುರುಘನ್, ಪ್ರಕಾಶ ಗಣಪತಿ ಪೈ, ಈರೋಡು ಎನ್. ರಾಜನ್, ದೊರೈಶಂಕರ, ವಿನೋದ, ಡಾ. ಎನ್. ಜಯರಾಂ, ಶರಣಕುಮಾರ ಶೆಟ್ಟಿ, ಪಿ. ದೇವರಾಜು, ಎಂ. ಮುನಿರಾಜು, ಎಚ್.ಆರ್. ಸಂಪತಕುಮಾರ, ಡಾ. ರಮೇಶ ಮುಧೋಳ, ದತ್ತು ಶಿಂತ್ರೆ ಸೇರಿದಂತೆ ಹಲವರಿದ್ದರು.