ಕೂಡಲೇ ಹೊರರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಢೇರಿಕೆಗೆ ಆಗ್ರಹಿಸಲಾಯಿತು.

ಶಿರಹಟ್ಟಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಕಾರ್ಯಾಲಯದ ಎದುರು ಪ್ರಾರಂಭವಾಗಿರುವ ದಸ್ತು ಬರಹಗಾರರ ಅನಿರ್ದಿಷ್ಟ ಪ್ರತಿಭಟನಾ ಸ್ಥಳಕ್ಕೆ ಹಿಂದೂ ಸಂಘಟನೆಗಳ ಒಕ್ಕೂಟದ ಮುಖಂಡ ರಾಜು ಖಾನಪ್ಪನವರ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸಿ ತಮ್ಮ ಬೆಂಬಲವನ್ನು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ, ಹಲವು ವರ್ಷಗಳಿಂದ ದಸ್ತು ಬರಹಗಾರರು ಬಹಳ ಕಷ್ಟದ ಕಾಲದಿಂದಲೂ ತಮ್ಮ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಸರ್ಕಾರ ಡಿಜಟಲೀಕರಣ ನೆಪದಲ್ಲಿ ದಸ್ತು ಬರಹಗಾರರ ಕುಟುಂಬಗಳು ಬೀದಿಗೆ ಬರುವಂಥ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದರು.ಕೂಡಲೇ ಹೊರರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು. ನೋಂದಣಿ ಆಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲ ಬಿಕ್ಕಲಂ ಕಡ್ಡಾಯಗೊಳಿಸಬೇಕು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟುವುದು ಮತ್ತು ಪತ್ರ ಬರಹಗಾರರಿಗೆ ಗುರುತಿನ ಚೀಟಿಯನ್ನು ನೀಡಬೇಕು ಹಾಗೂ ದಸ್ತು ಬರಹಗಾರರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕೆಂದು ಆಗ್ರಹಿಸಿದರು.ನಾಗರಾಜ ಲಕ್ಕುಂಡಿ, ಶಂಕರ ಮರಾಠೆ, ಫಕ್ಕೀರೇಶ ರಟ್ಟಿಹಳ್ಳಿ, ವಿಠ್ಠಲ ಬಿಢವೆ, ನಂದಾ ಪಲ್ಲೇದ, ಶಿವು ಲಮಾಣಿ, ಪರಶುರಾಮ ಡೊಂಕಬಳ್ಳಿ, ಸಂಘದ ತಾಲೂಕಾಧ್ಯಕ್ಷ ಅಶೋಕ ಹುಬ್ಬಳ್ಳಿ, ಉಪಾಧ್ಯಕ್ಷ ಶಿವಬಸಪ್ಪ ದಶಮನಿ, ನಜೀರ ಡಂಬಳ, ಶಂಕರ ಕೂಸ್ಲಾಪೂರ, ಮೋಹನ ಹೊಂಬಾಳಿ, ಮಂಜುನಾಥ ಮೆಣಸಿನಕಾಯಿ, ಮೈನು ಅತ್ತಾರ, ಪದ್ಮಾವತಿ ಹುಬ್ಬಳ್ಳಿ, ಸುಧಾ ಕೂಸ್ಲಾಪೂರ, ಮಂಜು ಹುಬ್ಬಳ್ಳಿ, ಚನ್ನಪ್ಪ ಕುರಿ, ಪವನ ಹುಬ್ಬಳ್ಳಿ, ಮಹಾದೇವಪ್ಪ ಪಲ್ಲೇದ, ಮಹಾದೇವಪ್ಪ ಹೊಂಬಾಳಿ ಮುಂತಾದವರು ಉಪಸ್ಥಿತರಿದ್ದರು.