ಕಳಪೆ ಔಷಧಿಯಿಂದ ಐತಿಹಾಸಿಕ ಆಯುರ್ವೇದಕ್ಕೆ ಕಳಂಕ: ದಿನೇಶ್‌

| Published : Sep 07 2024, 01:38 AM IST

ಸಾರಾಂಶ

ಕೆಲವು ಉದ್ಯಮಗಳು ಕಳಪೆ ಗುಣಮಟ್ಟದ ಆಯುರ್ವೇದ ಔಷಧಿಗಳನ್ನು ಮಾರಾಟ ಮಾಡುತ್ತಿರುವುದರಿಂದ ಐತಿಹಾಸಿಕ ಆಯುರ್ವೇದ ಪದ್ಧತಿಗೆ ಕಳಂಕ ಬರುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲವು ಉದ್ಯಮಗಳು ಕಳಪೆ ಗುಣಮಟ್ಟದ ಆಯುರ್ವೇದ ಔಷಧಿಗಳನ್ನು ಮಾರಾಟ ಮಾಡುತ್ತಿರುವುದರಿಂದ ಐತಿಹಾಸಿಕ ಆಯುರ್ವೇದ ಪದ್ಧತಿಗೆ ಕಳಂಕ ಬರುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಶುಕ್ರವಾರ ಯಲಹಂಕದಲ್ಲಿರುವ ಅಂತರ್‌-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಪತಂಜಲಿ ಸಭಾಂಗಣದಲ್ಲಿ ಸಂಸ್ಕೃತದಿಂದ ಕನ್ನಡ ಮತ್ತು ಆಂಗ್ಲ ಭಾಷೆಗೆ ಅನುವಾದಿಸಿರುವ ‘ಜ್ವರತಿಮಿರಭಾಸ್ಕರ, ಸರ್ವಜ್ಞರ ಸಮುಚ್ಚಯ ದರ್ಪಣ ಮತ್ತು ಜ್ವರತ್ರಿಶತೀ’ ಗ್ರಂಥ ಸರಣಿ ಹಾಗೂ ‘ಆಯುರ್ವೇದೀಯ ಶಬ್ದಕೋಶ’ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಆಯುರ್ವೇದದ ಹೆಸರಿನಲ್ಲಿ ಕೆಲವು ಉದ್ಯಮಗಳು ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡುತ್ತಿವೆ. ಇಂತಹ ಉತ್ಪನ್ನಗಳಿಗೆ ವೈಜ್ಞಾನಿಕ ಆಧಾರಗಳಿಲ್ಲ. ಕೇವಲ ಜಾಹೀರಾತುಗಳ ಮೂಲಕ ಗ್ರಾಹಕರನ್ನು ತಲುಪುತ್ತಿವೆ. ಹೀಗಾಗಿ ಐತಿಹಾಸಿಕ ಆಯುರ್ವೇದ ಪದ್ಧತಿಗೆ ಕಳಂಕ ಬರುತ್ತಿದೆ. ಅಲ್ಲದೇ, ಅಪಾಯಕಾರಿ ಅಲ್ಲದ ಈ ಚಿಕಿತ್ಸೆ ಬಗ್ಗೆ ಜನರಲ್ಲಿ ಅಪನಂಬಿಕೆ ಬರುತ್ತಿದೆ. ಅದನ್ನು ಹೊಗಲಾಡಿಸುವ ಪ್ರಯತ್ನ ಆಗಬೇಕಿದೆ ಎಂದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರ ಹಾಗೂ ಆಯುಷ್‌ ಇಲಾಖೆ ಮೇಲೆ ಆಯುರ್ವೇದ ಔಷಧಿಗಳ ಗುಣಮಟ್ಟ ನಿಯಂತ್ರಿಸುವ ಜವಾಬ್ದಾರಿ ಇದೆ ಎಂದರು.

ಆಯುಷ್‌ ಇಲಾಖೆಯ ಆಯುಕ್ತ ಶ್ರೀನಿವಾಸಲು ಮಾತನಾಡಿ, ಆಧುನಿಕ ಯುಗದ ಯಾಂತ್ರಿಕ ಜೀವನ ಪ್ರತಿಯೊಬ್ಬರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಆಯುರ್ವೇದಂತಹ ಪರಿಣಾಮಕಾರಿ ಚಿಕಿತ್ಸೆಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಆಗಿರುವ ಸಾಕಷ್ಟು ಸಂಶೋಧನೆಗಳಿಂದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಆಗುತ್ತಿದೆ. ತ್ವರಿತ ಆರಾಮ ಹಾಗೂ ಆರೋಗ್ಯ ಸುಧಾರಣೆಯೂ ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಅಂತರ್‌-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲದ ಕುಲಪತಿ ಪ್ರೊ. ದರ್ಶನ್ ಶಂಕರ್, ವಿವಿ ಕುಲಸಚಿವ ಅತುಲ್‌ ಕುಮಾರ್‌, ಗೌರವ ಯೋಜನಾ ನಿರ್ದೇಶಕ ಆಳ್ವಾರ್‌ ಉಪಸ್ಥಿತರಿದ್ದರು.