ಸಾರಾಂಶ
ಪ್ರಸ್ತುತ ಸಂದರ್ಭದಲ್ಲಿ ನಮ್ಮ ವೈರಿ ತಮಿಳು ಅಲ್ಲ, ತಮಿಳು ಸೇರಿದಂತೆ ದಕ್ಷಿಣ ಭಾರತದ ಯಾವ ಭಾಷಿಕರ ವಿರುದ್ಧ ನಾವಾಗಲಿ ಅಥವಾ ಅವರಾಗಲಿ ವೈರತ್ವ ಮಾಡುವುದರಲ್ಲಿ ಅರ್ಥವೇ ಇಲ್ಲ. ನಮ್ಮ ನಿಜವಾದ ವಿರೋಧ ಹಿಂದಿಯದ್ದಾಗಬೇಕಿದೆ.
ಧಾರವಾಡ: ಪ್ರಸ್ತುತ ಸಂದರ್ಭದಲ್ಲಿ ನಮ್ಮ ವೈರಿ ತಮಿಳು ಅಲ್ಲ, ತಮಿಳು ಸೇರಿದಂತೆ ದಕ್ಷಿಣ ಭಾರತದ ಯಾವ ಭಾಷಿಕರ ವಿರುದ್ಧ ನಾವಾಗಲಿ ಅಥವಾ ಅವರಾಗಲಿ ವೈರತ್ವ ಮಾಡುವುದರಲ್ಲಿ ಅರ್ಥವೇ ಇಲ್ಲ. ನಮ್ಮ ನಿಜವಾದ ವಿರೋಧ ಹಿಂದಿಯದ್ದಾಗಬೇಕಿದೆ.
ದಕ್ಷಿಣದ ದ್ರಾವಿಡ ಭಾಷಾ ಸಮೂಹ ಎಂಬ ಒಗ್ಗಟ್ಟು ಮಾಡಿಕೊಂಡು ಹಿಂದಿಯ ವಿರುದ್ಧ ಹೋರಾಟ ಶುರು ಮಾಡಬೇಕಿದೆ ಎಂದು ಅಂತಾರಾಷ್ಟ್ರೀಯ ಭಾಷಾ ತಜ್ಞ ಪ್ರೊ. ಗಣೇಶ ಎನ್. ದೇವಿ ಪ್ರತಿಪಾದಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಭಾಷೆಯ ಅಸ್ಮಿತೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಳದ ಪ್ರಮಾಣ ಇಳಿಮುಖವಾಗುತ್ತಿದ್ದು, ಹಿಂದಿ ಭಾಷಿಕರು ಇರುವ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದು ಅಂಕಿ- ಅಂಶಗಳಿಂದ ಸ್ಪಷ್ಟವಾಗಿದೆ. ಇದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡನೆ ಆಗಲಿದ್ದು, ಕನ್ನಡ, ತಮಿಳು, ತೆಲಗು, ಮಲಿಯಾಳಂ ಸೇರಿ ದಕ್ಷಿಣ ಭಾರತದ ಭಾಷಿಕರ ಲೋಕಸಭಾ ಕ್ಷೇತ್ರಗಳು ಕಡಿಮೆ ಆಗಲಿವೆ. ಉತ್ತರ ಭಾರತದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳು ಹೆಚ್ಚಾಗಲಿವೆ. ಹೀಗಾಗಿ ದಕ್ಷಿಣದ ರಾಜ್ಯಗಳಿಗೆ ಮುಂದೆ ಯಾವತ್ತೂ ಕೇಂದ್ರದ ರಾಜಕೀಯದಲ್ಲಿ ಸ್ಥಾನ ಸಿಗುವುದಿಲ್ಲ ಎಂಬ ರಾಜಕೀಯವನ್ನು ದಕ್ಷಿಣದ ರಾಜ್ಯಗಳು ಅರ್ಥೈಸಿಕೊಂಡು ತಮ್ಮ-ತಮ್ಮಲ್ಲಿಯೇ ನ್ಯಾಯವಾಡುವುದನ್ನು ನಿಲ್ಲಿಸಬೇಕು ಎಂದು ಪ್ರೊ. ಗಣೇಶ ದೇವಿ ಸ್ಪಷ್ಟಪಡಿಸಿದರು.
ಸಹಬಾಳ್ವೆ ಇರಲಿ: ಉತ್ತರ ಭಾರತದ ರಾಜಕೀಯ ಅರಿತು ನಾವು ಸಹಬಾಳ್ವೆಯಿಂದ ಇರಬೇಕು. ಭಾಷೆ- ಭಾಷೆಯ ಮಧ್ಯೆ ಜಗಳ ಏತಕ್ಕೆ? ಈ ಹಿಂದೆ ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸಿದರು. ಈಗ ನಡೆದಿರುವುದು ಅದೇ ನೀತಿ. ಕನ್ನಡ, ತಮಿಳು, ತೆಲುಗು, ಮಲಯಾಳ, ಮರಾಠಿಗರನ್ನು ಒಡೆದು ಆಳುತ್ತಿದ್ದಾರೆ. ಇದು ಕೂಡಲೇ ನಿಲ್ಲಬೇಕು. ಕನ್ನಡ ಎಂತಹ ಶ್ರೇಷ್ಠ ಭಾಷೆ ಎಂದರೆ ಬರುವ ದಿನಗಳಲ್ಲಿ ಕನ್ನಡಕ್ಕೆ ನೋಬೆಲ್ ಬಂದರೂ ಅಚ್ಚರಿ ಏನಿಲ್ಲ ಎಂದು ಕನ್ನಡದ ಮೇಲಿನ ಅಭಿಮಾನವನ್ನು ಪ್ರೊ. ಗಣೇಶ ದೇವಿ ಬಿಚ್ಚಿಟ್ಟರು.
ಹಿರಿಯ ಭಾಷಾ ತಜ್ಞ ಡಾ. ಸಂಗಮೇಶ ಸವದತ್ತಿಮಠ ಆಶಯ ನುಡಿಗಳನ್ನು ಹೇಳಿದರು. ಡಾ. ಸಂತೋಷ ಹಾನಗಲ್ ಸಂಪಾದಿಸಿದ ಭಾಷೆ- ಬದುಕು ಗ್ರಂಥವನ್ನು ಚಂದ್ರಕಾಂತ ಬೆಲ್ಲದ ಬಿಡುಗಡೆ ಮಾಡಿದರು. ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಎ. ಮುರಿಗೆಪ್ಪ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಪ್ರೊ. ಧನವಂತ ಹಾಜವಗೋಳ ಕಾರ್ಯಕ್ರಮ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ನಮ್ಮ ನಿಜವಾದ ವಿರೋಧ ತಮಿಳು ಅಲ್ಲ. ಕಮಲ್ ಹಾಸನ್ ಅವರ ಹೇಳಿಕೆ ದೊಡ್ಡದು ಮಾಡುವುದರಲ್ಲಿ ಅರ್ಥವೇನಿಲ್ಲ. ಭಾಷೆ ಜಗಳಕ್ಕಾಗಿ ಅಲ್ಲ, ಆದರೆ, ಜಗಳ ಮಾಡಿಸುತ್ತಿರುವುದು ರಾಜಕಾರಣ. ಹೀಗಾಗಿ ಭಾಷೆಯಿಂದ ಪ್ರೀತಿ- ಸಹಬಾಳ್ವೆ ಬೆಳೆಸಬೇಕಿದೆ. ತಮಿಳು, ಕನ್ನಡದ ಜಗಳ ಏಕೆ? ಯಾರು ಹುಟ್ಟು ಹಾಕುತ್ತಿದ್ದಾರೆ? ಯಾರು ಬೆಳೆಸುತ್ತಿದ್ದಾರೆ? ಎಂಬುದನ್ನು ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಅರ್ಥೈಸಿಕೊಳ್ಳಬೇಕಿದೆ ಎಂದು ಖ್ಯಾತ ಭಾಷಾತಜ್ಞ ಪ್ರೊ. ಗಣೇಶ ಎನ್. ದೇವಿ ಹೇಳಿದರು.