ಕೊಪ್ಪಳ ಜಿಲ್ಲೆಯ ದಳಿತ ಯುವಕನ ಕೊಲೆ ಖಂಡಿಸಿ ಆಕ್ರೋಶ

| Published : Aug 22 2024, 12:48 AM IST

ಕೊಪ್ಪಳ ಜಿಲ್ಲೆಯ ದಳಿತ ಯುವಕನ ಕೊಲೆ ಖಂಡಿಸಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ನಡೆದಿರುವ ದಲಿತ ಯುವಕನ ಕೊಲೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ನಡೆದಿರುವ ದಲಿತ ಯುವಕನ ಕೊಲೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ್ ಗ್ರಾಮದ ಯಮನೂರಪ್ಪನವರ ಕೊಲೆಯನ್ನು ಖಂಡಿಸಿ ಆಡಳಿತ ಸೌಧದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಯಮನೂರಪ್ಪ ಕ್ಷೌರ ಮಾಡಿಸಲು ಅಂಗಡಿಗೆ ಹೋದಾಗ ಅಂಗಡಿ ಮಾಲೀಕ ಕ್ಷೌರ ಮಾಡಲು ನಿರಾಕರಿಸಿದ ಪರಿಣಾಮವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಿನಗೆ ಕ್ಷೌರ ಮಾಡಲು ಆಗುವುದಿಲ್ಲ ಎಂದು ಕೀಳಾಗಿ ಮಾತನಾಡಿದ್ದಲ್ಲದೇ, ಯಮನೂರಪ್ಪ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಮಾದಿಗ ಸಮುದಾಯಕ್ಕೇ ರಕ್ಷಣೆ ಇಲ್ಲದಾಗಿದೆ. ಸಮುದಾಯ ಶೋಷಣೆಗೊಳಪಡುತ್ತಿದೆ. ನಿತ್ಯವೂ ಒಂದಲ್ಲ ಒಂದು ಕಡೆ ಜಾತಿ ನಿಂದನೆ ,ದೌರ್ಜನ್ಯಗಳಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಶತಮಾನಗಳಿಂದಲೂ ಶೋಷಣೆಗೊಳಾಗುತ್ತಿರುವ ಮಾದಿಗ ಸಮುದಾಯಕ್ಕೆ ಸಮಾನತೆ ಇಲ್ಲದಾಗಿದೆ. ಸರ್ಕಾರ ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡುವುದಾಗಿ ಭರವಸೆ ನೀಡಿದೆ. ಆದರೂ ಕಾರ್ಯ ರೂಪಕ್ಕೆ ಬಂದಿಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕೊಲೆಗೆ ಕಾರಣನಾದವನ ಮೇಲೆ ಕಠಿಣ ಕಾನೂನು ಜರಗಿಸಿ ಹೋಟೆಲ್, ಅಂಗಡಿ-ಮುಂಗಟ್ಟು ದೇವಸ್ಥಾನಗಳ ಮುಂದೆ ನಾಮಫಲಕಗಳನ್ನು ಹಾಕಿ ಸಾರ್ವಜನಿಕರನ್ನು ಜಾಗೃತಗೊಳಿಸಿ ಅಸ್ಪೃಶ್ಯತೆ ನಿವಾರಣೆಗೆ ಕ್ರಮ ವಹಿಸಬೇಕು. ಯಮನೂರು ಕುಟುಂಬಕ್ಕೆ ಪರಿಹಾರ ಒದಗಿಸಿ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ವೇಳೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶ್ ಭಾಗ್ಯ ಸಂಚಾಲಕ ಬಿ.ಟಿ. ನಾಗಭೂಷಣ, ತಾಲೂಕು ಸಂಚಾಲಕ ದಡಗೂರು ಗಂಗಾಧರ, ಯರ್ರಿಜ್ಜನಹಳ್ಳಿ ನಾಗರಾಜ, ಅಮಕುಂದಿ ಗಂಗಾಧರ, ತಾಲೂಕು ಸಂಘಟನಾ ಸಂಚಾಲಕರಾದ ಚಂದ್ರಶೇಖರ, ತಿಪ್ಪೇಸ್ವಾಮಿ, ರಮೇಶ್ ,ಬೊಮ್ಮಲಿಂಗನಹಳ್ಳಿ ಮಲ್ಲಿಕಾರ್ಜುನ, ಮೊಗಲಹಳ್ಳಿ ಮಾರಣ್ಣ ಇದ್ದರು.