ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಪ್ರೆಸ್ಟ್ರಸ್ಟ್ ವತಿಯಿಂದ ಏ.14ರಂದು ಬೆಳಗ್ಗೆ 10.30ಕ್ಕೆ ನಗರದ ಸರ್ಕಾರಿ ನೌಕರರ ಭವನದಲ್ಲಿ 2026ನೇ ಸಾಲಿನ ಪಿ. ಲಂಕೇಶ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಬಾರಿಯ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಪ್ರಶಸ್ತಿ 25 ಸಾವಿರ ರು.ಗಳ ನಗದು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ. ಅಂದು ನಾಡಿನ ಅನೇಕ ಹಿರಿಯ ಪತ್ರಕರ್ತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಂದು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ಯು.ಎಚ್.ವೈದ್ಯನಾಥ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಅವರು ಮೈಸೂರಿನ ಕೃಷ್ಣರಾಜ ನಗರ ತಾಲೂಕಿನ ಸೌತನಹಳ್ಳಿಯಲ್ಲಿ ದಿ. ಪಟೇಲ್ ದೇವಪ್ಪ ಮತ್ತು ದಿ. ಶಿವಲಿಂಗಮ್ಮನವರ ಪುತ್ರರಾಗಿ ಜನಿಸಿದ ಇವರು, 1973ರಲ್ಲಿ ಮೈಸೂರು ವಿವಿಯಿಂದ ಪತ್ರಿಕೋದ್ಯಮ ವಿಷಯದಲ್ಲಿ ಎಂಎ ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಪದವಿ ಪರೀಕ್ಷೆ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಪತ್ರಕರ್ತ ವೃತ್ತಿ ಆರಂಭಿಸಿದ ಇವರು ಲೋಕವಾಣಿ, ವಿಶಾಲ ಕರ್ನಾಟಕ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸಮಾಡಿ ನಾಡಿನ ಪ್ರತಿಷ್ಠಿತ ದಿನಪತ್ರಿಕೆ ಕನ್ನಡಪ್ರಭದಲ್ಲಿ ಎರಡೂವರೆ ದಶಕಗಳಿಗೆ ಹೆಚ್ಚು ಕಾಲ ಕೆಲಸ ಮಾಡಿ, ಬಳಿಕ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ಆ ಪತ್ರಿಕೆಯ ಪ್ರದಾನ ಸಂಪಾದಕರಾಗಿದ್ದ ಪತ್ರಿಕೋದ್ಯಮದ ದಿಗ್ಗಜರಾಗಿದ್ದ ಕೆ.ಶ್ಯಾಮ್ರಾವ್, ಖಾದ್ರಿಶಾಮಣ್ಣ, ರಾಮಕೃಷ್ಣಮೂರ್ತಿ, ವೈಎನ್ಕೆ ಮೊದಲಾದವರ ನಿಕಟವರ್ತಿಗಳಾಗಿದ್ದು, ಕನ್ನಡಿಗರ ಪ್ರಜಾನುಡಿ ಪ್ರಾದೇಶಿಕ ದಿನಪತ್ರಿಕೆಯ ಪ್ರದಾನ ಸಂಪಾದಕರಾಗಿದ್ದರು ಎಂದು ಮಾಹಿತಿ ನೀಡಿದರು.
ಡಿ.ಮಹಾದೇವಪ್ಪ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಬೆಂಗಳೂರು ವರದಿಗಾರರ ಕೂಟ ಪ್ರಶಸ್ತಿ, ರಾಮಕೃಷ್ಣ ರಾಷ್ಟ್ರೀಯ ಚಿಂತನಾವೇದಿಕೆ ಪ್ರಶಸ್ತಿ, ಮುಖ್ಯಪ್ರಾಣ ವಾಯು ಸಾಂಸ್ಕೃತಿಕ ಅಕಾಡೆಮಿ ಚಿತ್ರೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಟ್ರಸ್ಟ್ನ ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ, ಶಿವರಾತ್ರೇಶ್ವರ ಮಾಧ್ಯಮ ಪ್ರಶಸ್ತಿ, ಪತ್ರಿಕಾರಂಗದ ಹರಿಕಾರ ಟಿಎಸ್ಆರ್ ಪ್ರಶಸ್ತಿ ಲಭಿಸಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಟ್ರಸ್ಟ್ನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಉಪಾಧ್ಯಕ್ಷ ಹೊನ್ನಾಳಿ ಚಂದ್ರಶೇಖರ್, ಖಜಾಂಚಿ ಹುಲಿಮನೆ ತಿಮ್ಮಪ್ಪ, ಸಹ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಟ್ರಸ್ಟಿಗಳಾದ ಗೋಪಾಲ್ ಯಡಗೆರೆ, ಜಿ.ಪದ್ಮನಾಭ್, ಗಜೇಂದ್ರಸ್ವಾಮಿ, ಗೋವಾ ಮೋಹನ್ ಇದ್ದರು.