ಸಾರಾಂಶ
ಬೆಂಗಳೂರು : ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ಅಟ್ಟಹಾಸ ಮೆರೆದು 26 ಹಿಂದೂಗಳ ಹತ್ಯಗೈದ ಘಟನೆ ಖಂಡಿಸಿ ಗುರುವಾರವೂ ರಾಜ್ಯದ ಹಲವೆಡೆ ಮುಸ್ಲಿಂ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಶೀಘ್ರ ಪ್ರತಿಕಾರಕ್ಕೆ ಕೇಂದ್ರ ಸರ್ಕಾವನ್ನು ಆಗ್ರಹಿಸಿವೆ.
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಅಂಜುಮನ್ ಇ-ಇಸ್ಲಾಂ ಸಂಸ್ಥೆ ಪದಾಧಿಕಾರಿಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಹಾವೇರಿ ಗಾಂಧಿ ವೃತ್ತದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಪದವೀಧರರ ಹಿತರಕ್ಷಣೆ ವೇದಿಕೆ ವತಿಯಿಂದ ಮೊಂಬತ್ತಿ ಬೆಳಗಿ ಮೃತರಿಗೆ ಸಂತಾಪ ಸೂಚಿಸಲಾಯಿತು. ಅದೇ ರೀತಿ ರಾಣಿಬೆನ್ನೂರಿನಲ್ಲಿ ಎಬಿವಿಪಿ ಹಾಗೂ ಎಸ್ಡಿಪಿಐ, ಹಾನಗಲ್ಲಿನಲ್ಲಿ ಬ್ರಾಹ್ಮಣ ಮಹಾಸಭಾ, ರಟ್ಟೀಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು, ಭಜರಂಗದ ದಳ, ವಿಶ್ವ ಹಿಂದೂ ಪರಿಷತ್, ಮಾತೃಭೂಮಿ ಪೌಂಡೇಷನ್, ಆರ್ಎಸ್ಎಸ್ ಸಂಘಟನೆಗಳ ಕಾರ್ಯಕರ್ತರು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಹಿಂದು ಜಾಗರಣಾ ವೇದಿಕೆ ಹಾಗೂ ವಿಶ್ವ ಹಿಂದು ಪರಿಷತ್, ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕ್ಯಾಂಡಲ್ ಹಿಡಿದು ಮೌನಾಚರಣೆ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಮಜಲಿಸ್ ಎ ಮುಂತಾಜಿಮಾ ಮತ್ತು ಅಂಜುಮನ್ ಕಮಿಟಿ, ಚಿಕ್ಕಮಗಳೂರು, ಬೀದರ್, ಔರಾದನಲ್ಲಿ ಎಬಿವಿಪಿ, ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕ, ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿಯಲ್ಲಿ ಬಿಜೆಪಿ ಮಂಡಲ, ದಾವಣಗೆರೆಯಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬಿಜೆಪಿ, ಹಿಂದು ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು. ಬಸವಕಲ್ಯಾಮದಲ್ಲಿ ಬಿಜೆಪಿ, ಬೆಳಗಾವಿ ಜಿಲ್ಲೆಯ ಮೂಡಲಗಿ, ಗೋಕಾಕ, ಬೈಲಹೊಂಗಲ, ಸವದತ್ತಿ, ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಹಿಂದೂ ಸಂಘಟನೆ ಒಕ್ಕೂಟ ಮತ್ತು ಬಿಜೆಪಿ, ವಿಜಯಪುರ, ಇಂಡಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.