ಮಡಿಕೇರಿ: ಇತ್ತೀಚೆಗಷ್ಟೇ ಸಿದ್ದಾಪುರ ಸಮೀಪದ ಪಳ್ಳಕೆರೆ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟದಲ್ಲಿ ಬೀಡುಬಿಟ್ಟಿದ ಸುಮಾರು 20ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ಇಲಾಖೆ ವತಿಯಿಂದ ನಡೆಸಲಾಗಿತು. ಇದೀಗ ಮತ್ತೆ ಅರೆಕಾಡು ವ್ಯಾಪ್ತಿಯಿಂದ ಕಾವೇರಿ ನದಿ ದಾಟಿ ಪಳ್ಳಕೆರೆ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಿಗೆ ಬಂದಿರುವ ಸುಮಾರು 17ಕ್ಕೂ ಅಧಿಕ ಕಾಡಾನೆಗಳು ಕಾಫಿ, ಅಡಕೆ, ತೆಂಗು ಸೇರಿದಂತೆ ವಿವಿಧ ಕೃಷಿ ಫಸಲನ್ನು ನಾಶಪಡಿಸಿದ್ದು, ಸಾರ್ವಜನಿಕರ ಭೀತಿಗೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರು, ಇಲಾಖೆಯಿಂದ ಆನೆ ಓಡಿಸ್ತಾ ಇದ್ದೇವೆ ಅಂತ ಬರುತ್ತಾರೆ. ಆದರೆ ಯಾವುದೇ ಪ್ರಯೋಜನ ಇಲ್ಲ. ಯಾಕೆಂದರೆ ಇಲ್ಲಿಂದ ಓಡಿಸಿಕೊಂಡು ಹೋಗಿ ಮತ್ತೊಂದು ತೋಟಕ್ಕೆ ಬಿಟ್ಟು ಕಾರ್ಯಾಚರಣೆ ಪೂರ್ಣಗೊಳಿಸದೆ ಅಂತ್ಯ ಮಾಡ್ತಾರೆ. ಇದರಿಂದಾಗಿ ಬೇರೊಂದು ತೋಟದಲ್ಲಿ ಬೀಡುಬಿಟ್ಟಿದ ಆನೆಗಳು ಮತ್ತೆ ಅದೇ ಕಡೆ ವಾಪಸಾಗುತ್ತಿದ್ದು, ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ಪದೇ ಪದೆ ವಿಫಲವಾಗುತ್ತಿದೆ ಎಂದು ದೂರಿದ್ದಾರೆ.