ಸಾರಾಂಶ
ಬಾಳೆಹೊನ್ನೂರು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊದಲ ದಿನವೇ ಪುನರ್ವಸು ಮಳೆಯ ಅಬ್ಬರ ಹೆಚ್ಚಾಗಿದ್ದು, ಶನಿವಾರ ಧಾರಾಕಾರ ಮಳೆ ಸುರಿದಿದೆ.
- ಮಾಗುಂಡಿ-ಜಕ್ಕಣಕ್ಕಿ ಬಳಿ ಮರ ಬಿದ್ದು ರಸ್ತೆ ಬಂದ್ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊದಲ ದಿನವೇ ಪುನರ್ವಸು ಮಳೆಯ ಅಬ್ಬರ ಹೆಚ್ಚಾಗಿದ್ದು, ಶನಿವಾರ ಧಾರಾಕಾರ ಮಳೆ ಸುರಿದಿದೆ.ಶನಿವಾರ ಪುನರ್ವಸು ಮಳೆ ನಕ್ಷತ್ರದ ಮೊದಲ ದಿನವಾಗಿದ್ದು, ಬೆಳಗ್ಗಿನಿಂದಲೂ ಧಾರಾಕಾರ ಪ್ರಮಾಣದಲ್ಲಿ ಸುರಿಯುತ್ತಿದೆ. ಶುಕ್ರವಾರ ಆರಿದ್ರಾ ಮಳೆ ಬೆಳಗ್ಗಿನಿಂದ ಕಡಿಮೆಯಾಗಿದ್ದರೂ ಸಹ ಸಂಜೆ ವೇಳೆಗೆ ಸಾಧಾರಣ ಪ್ರಮಾಣದಲ್ಲಿ ಸುರಿದಿತ್ತು.
ನಿರಂತರವಾಗಿ ಶನಿವಾರ ಮುಂಜಾನೆ ಮಳೆ ಸುರಿದ ಪರಿಣಾಮ ಹಾನ್ಬಾಳು- ಮುಡುಬ ರಾಜ್ಯ ಹೆದ್ದಾರಿಯ ಬಾಳೆ ಹೊನ್ನೂರಿನಿಂದ ಕಳಸ-ಹೊರನಾಡು, ಕೊಟ್ಟಿಗೆಹಾರ ಸಂಪರ್ಕ ಕಲ್ಪಿಸುವ ಮಾಗುಂಡಿ- ಜಕ್ಕಣಕ್ಕಿ ನಡುವೆ ಬೃಹತ್ ಮರವೊಂದು ಬೆಳಗ್ಗಿನ ಜಾವ ಐದು ಗಂಟೆ ವೇಳೆಗೆ ಮುಖ್ಯರಸ್ತೆಗೆ ಉರುಳಿ ಬಿದ್ದಿದ್ದು ಸಂಪರ್ಕ ಕಡಿತಗೊಂಡಿತ್ತು.ಹೊರನಾಡು, ಧರ್ಮಸ್ಥಳ, ಕೊಟ್ಟಿಗೆಹಾರ, ಶೃಂಗೇರಿ, ರಂಭಾಪುರಿ ಪೀಠ ಸೇರಿದಂತೆ ಮುಂತಾದ ಕಡೆಗೆ ತೆರಳುವ ಪ್ರಯಾಣಿಕರು 2 ಗಂಟೆಗಳ ಕಾಲ ರಸ್ತೆಯಲ್ಲಿಯೇ ನಿಲ್ಲುವಂತಾಯಿತು. ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಬೆಳಿಗ್ಗೆ 7 ಗಂಟೆ ವೇಳೆಗೆ ಮರವನ್ನು ಯಂತ್ರದ ಮೂಲಕ ಕತ್ತರಿಸಿ ತೆರವುಗೊಳಿಸಲಾಯಿತು. ಬಳಿಕ ವಾಹನಗಳ ಸಂಚಾರ ಆರಂಭಗೊಂಡಿತು.
ಮಳೆ ನಿರಂತರವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕುದುರೆಮುಖ, ಕಳಸ ಭಾಗದಲ್ಲೂ ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಪಟ್ಟಣದ ಭದ್ರಾನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.೦೬ಬಿಹೆಚ್ಆರ್ ೨:ಬಾಳೆಹೊನ್ನೂರು ಸಮೀಪದ ಮಾಗುಂಡಿ-ಜಕ್ಕಣಕ್ಕಿ ಬಳಿ ಮುಖ್ಯರಸ್ತೆಗೆ ಬೃಹತ್ ಮರವೊಂದು ಉರುಳಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.