ಪಾಂಡೇಶ್ವರ: ವಿಶಿಷ್ಟ ರೀತಿಯಲ್ಲಿ ಬೇಸಿಗೆ ಶಿಬಿರ ಸಂಯೋಜನೆ

| Published : May 19 2024, 01:48 AM IST

ಪಾಂಡೇಶ್ವರ: ವಿಶಿಷ್ಟ ರೀತಿಯಲ್ಲಿ ಬೇಸಿಗೆ ಶಿಬಿರ ಸಂಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಿವು ಕೇಂದ್ರ - ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾ.ಪಂ. ಹಾಗೂ ಸಾಸ್ತಾನ ಮಹಿಳಾ ಮಂಡಲ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಪಾಂಡೇಶ್ವರದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಪಾಂಡೇಶ್ವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಅರಿವು ಕೇಂದ್ರ - ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾ.ಪಂ. ಹಾಗೂ ಸಾಸ್ತಾನ ಮಹಿಳಾ ಮಂಡಲ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ ಸಹಯೋಗದಲ್ಲಿ ನಡೆಯುತ್ತಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.

ಮಕ್ಕಳ ಬೇಸಿಗೆ ರಜೆಗೆ ಪೂರಕವಾದ ವಾತಾವರಣವನ್ನು ಶಿಬಿರದ ಮೂಲಕ ನೀಡಬೇಕು. ಇದರಿಂದ ಮಕ್ಕಳು ಮನೆಯಲ್ಲೇ ಕಾಲಕಳೆಯುವುದಕ್ಕಿಂತ ಶಿಬಿರದ ಮೂಲಕ ನಾನಾ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಳ್ಳುವಂತಾಗುತ್ತದೆ. ಈ ದಿಸೆಯಲ್ಲಿ ಇಲ್ಲಿನ ಶಿಬಿರ ಮತ್ತಷ್ಟು ವೈವಿಧ್ಯತೆ ತಾಣವಾಗಿ ಮೂಡಿಬರಲಿ ಎಂದು ಆಶಿಸಿದರು.

ಮುಖ್ಯ ಅಭ್ಯಾಗತರಾಗಿ ಸಾಸ್ತಾನ ಮಹಿಳಾ ಮಂಡಲ ಅಧ್ಯಕ್ಷೆ ಸುಮಿತ್ರಾ ಸುಧಾಕರ್, ಸ್ನೇಹ ಸಂಜೀವಿನಿ ಮುಖ್ಯಸ್ಥೆ ಉಷಾ ಗಣೇಶ, ಸಂಪನ್ಮೂಲ ವ್ಯಕ್ತಿಯಾಗಿ ಜ್ಞಾನೇಶ್ವರಿ ಉಡುಪ ಉಪಸ್ಥಿತರಿದ್ದರು.

ಮಕ್ಕಳು ಕವನ ರಚನೆ, ಚುಕ್ಕಿ ರಂಗೋಲಿ, ಉಲ್ಲನ್ ಕ್ರಾಫ್ಟ್ ಮಾಡುವುದು ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳನ್ನು ಶಿಬಿರಾರ್ಥಿಗಳಿಗೆ ನೀಡಲಾಯಿತು. ೫೨ ಮಕ್ಕಳು ಶಿಬಿರದಲ್ಲಿ ಭಾಗಿಯಾದರು.

ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ನಿರೂಪಿಸಿ, ಸ್ವಾಗತಿಸಿದರು. ಪಂಚಾಯಿತಿ ಕಾರ್ಯದರ್ಶಿ ವಿಜಯ ಭಂಡಾರಿ ವಂದಿಸಿದರು.