ಸಾರಾಂಶ
ಹಿರಿಯೂರು ತಾಲೂಕಿನ ಹಲವಾರು ಸರ್ಕಾರಿ ಶಾಲೆಗಳಲ್ಲಿ ಪೋಷಕರ ಸಭೆ ನಡೆಸಲಾಯಿತು.
314 ಶಾಲೆಗಳಲ್ಲಿ ಪೋಷಕರ ಸಭೆ ಯಶಸ್ವಿ: ಬಿಇಒ ತಿಪ್ಪೇಸ್ವಾಮಿ ಹರ್ಷಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರ ಸಭೆಗಳು ಉತ್ತಮ ಯಶಸ್ಸನ್ನು ಕಂಡಿವೆ ಎಂದು ಬಿಇಒ ಸಿ.ಎಂ.ತಿಪ್ಪೇಸ್ವಾಮಿ ಹರ್ಷ ವ್ಯಕ್ತಪಡಿಸಿದರು.ತಾಲೂಕಿನ 314 ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಪೋಷಕರ ಸಭೆ ಆಯೋಜನೆಯಾಗಿದ್ದು ಸಭೆಗಳ ಯಶಸ್ಸಿನ ನಂತರ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಹೆಚ್ಚಲು ಈ ಪೋಷಕರ ಸಭೆಗಳು ಸಹಕಾರಿಯಾಗಿವೆ. ಮಕ್ಕಳ ವಿದ್ಯಾ ಪ್ರಗತಿಯಲ್ಲಿ ಪೋಷಕರ ಜವಾಬ್ದಾರಿಯೂ ಇದ್ದು ಇಂತಹ ಸಭೆಗಳಿಂದ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಹಭಾಗಿತ್ವದಿಂದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದರು.ತಾಲೂಕಿನ ಹಲವಾರು ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ, ಎಸ್ಡಿಎಂಸಿ ಮತ್ತು ಪೋಷಕರು ಶಾಲೆಗೆ ಕಲಿಕಾ ಉಪಕರಣಗಳನ್ನು ನೀಡುವ ವಾಗ್ದಾನ ನೀಡಿದರು. ಸಭೆಗೆ ಮುಂಚೆ ಪೋಷಕರಿಗೆ ಮನರಂಜನ ಸ್ಪರ್ಧೆ, ಕ್ರೀಡಾ ಸ್ಪರ್ಧೆಗಳನ್ನು ಆಯಾಯ ಶಾಲೆಗಳಲ್ಲಿ ಆಯೋಜಿಸಿದ್ದು ಬಹುಮಾನಗಳನ್ನು ವಿತರಿಸಲಾಯಿತು.
ಪ್ರತಿ ಶಾಲೆಗೂ ಬಿಇಒ ಕಚೇರಿಯಿಂದ ಮೇಲ್ವಿಚಾರಣಾ ಅಧಿಕಾರಿಗಳನ್ನು ನೇಮಿಸಿದ್ದು ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಕಂಪ್ಯೂಟರ್ ಕಲಿಕೆಗೆ ಇನ್ನಷ್ಟು ಒತ್ತು ನೀಡಲು ಬಹುತೇಕ ಶಾಲೆಗಳಲ್ಲಿ ಚರ್ಚೆ ನಡೆಸಲಾಯಿತು.ಶಾಲೆಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಎಲ್ಲಾ ಹಂತದ ಜನ ಪ್ರತಿನಿಧಿಗಳನ್ನು ಕೋರಲು ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಯಿತು ಎಂದು ಅವರು ತಿಳಿಸಿದರು.