ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪೋಷಕರು ಗುರುತಿಸುವ ಕೆಲಸ ಆಗಬೇಕಿದೆ ಎಂದು ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಕೆ.ವಿ.ಗೋಪಾಲಕೃಷ್ಣ ಭಟ್ ಸಲಹೆ ನೀಡಿದರು.ಪಟ್ಟಣದ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ತಾಲೂಕು ಬ್ರಾಹ್ಮಣ ಸಭಾ ಹಾಗೂ ಕೌಂಡಿಣ್ಯ ವಿಪ್ರ ಬಳಗ, ಶಾರದ ಸತ್ಸಂಗ ಸಮಾಜ ಸಂಯುಕ್ತಾಶ್ರಯದಲ್ಲಿ ಆಚಾರ್ಯತ್ರಯರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಪ್ರ ಸಮಾಜದ ಪ್ರತಿಯೊಬ್ಬ ತಂದೆ- ತಾಯಿಗಳು ಮಕ್ಕಳ ಪ್ರತಿಭೆ ಗುರುತಿಸಬೇಕು ಹಾಗೂ ಪ್ರೋತ್ಸಾಹಿಸುವ ಕೆಲಸ ಮಾಡಿದಾಗ ಮಾತ್ರ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮಾಜದ ವಟುಗಳಿಗೆ ವಿವಾಹವಾಗಲು ಹೆಣ್ಣು ಮಕ್ಕಳು ಸಿಗದೇ ವರ್ಷದಿಂದ ವರ್ಷಕ್ಕೆ ರಾಜ್ಯದ ಎಲ್ಲೆಡೆ ಅವಿವಾಹಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.ಬ್ರಾಹ್ಮಣರು ಧಾರ್ಮಿಕ ಆಚರಣೆ, ಧಾರ್ಮಿಕ ಶಿಕ್ಷಣದ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು. ಮುಂದಿನ ಪೀಳಿಗೆಗೂ ಸನಾತನ ಧರ್ಮ ಉಳಿಸಿ ಬೆಳೆಸಬೇಕಾಗಿದೆ. ಬ್ರಾಹ್ಮಣ ಸಮುದಾಯ ಮಕ್ಕಳಿಗೆ ಸನಾತನ ಧರ್ಮ, ಧಾರ್ಮಿಕ ಆಚರಣೆ, ಪರಂಪರೆ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.
ಬ್ರಾಹ್ಮಣ ಸಮಾಜ ಸಂಘಟನೆಗೆ ಒತ್ತು ನೀಡಬೇಕು. ಮಕ್ಕಳ ಶಿಕ್ಷಣದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಇಂದಿನ ಜೀವನ ಶೈಲಿಯಲ್ಲಿ ಬ್ರಾಹ್ಮಣರಿಗೆ ಶಿಕ್ಷಣವೇ ಅಸ್ತ್ರವಾಗಿದ್ದು, ಮನಗಂಡು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುವ ಮೂಲಕ ತಂದೆ- ತಾಯಿ ಹೆಸರಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಎಸ್.ಗೋವಿಂದರಾಜನ್, ವಿಜಯ ಗ್ಯಾಸ್ ಮಾಲೀಕ ದೊರೆಸ್ವಾಮಿ, ಕೌಂಡಿನ್ಯ ವಿಪ್ರ ಬಳಗದ ಅಧ್ಯಕ್ಷ ಆನಂದ ಕುಮಾರ್, ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಹಾಲಕ್ಷ್ಮೀ ನಾಗರಾಜು, ಶಾರದ ಸತ್ಸಂಗ ಸಮಾಜದ ಅಧ್ಯಕ್ಷೆ ಗಾಯತ್ರಿ ಅನಂತು, ಉಪಾಧ್ಯಕ್ಷರಾದ ರವಿಕಾಂತ್, ಮಂಜುನಾಥ್, ಶ್ರೀರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಕುಮಾರ್, ತಾಲೂಕು ಬ್ರಾಹ್ಮಣ ಸಭಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಸೇರಿ ಹಲವರಿದ್ದರು.