ಸಾರಾಂಶ
ಹಾನಗಲ್ಲ: ನೌಕರರು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ, ಸಾರ್ವಜನಿಕರು ಸಹಕಾರ ನೀಡದಿದ್ದರೆ ಯಾವುದೇ ಇಲಾಖೆ ಸಮರ್ಪಕ ಕೆಲಸ ಮಾಡಲು ಸಾಧ್ಯವಿಲ್ಲ. ಹಾನಗಲ್ಲ ಪುರಸಭೆಯ ತೆರಿಗೆ ₹50 ಲಕ್ಷ ಬಾಕಿ ಇದೆ. ವಸೂಲಿ ಯಾರ ಹೊಣೆ ಎಂದು ಶಾಸಕ ಶ್ರೀನಿವಾಸ ಮಾನೆ ಪ್ರಶ್ನಿಸಿದರು.
ಸೋಮವಾರ ಇಲ್ಲಿನ ಗುರುಭವನದಲ್ಲಿ ಪುರಸಭೆ ಆಯೋಜಿಸಿದ್ದ ಪೌರಾಡಳಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುರಸಭೆ ಸದಸ್ಯರು, ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವಚ್ಛತೆ ಎಲ್ಲರ ಆದ್ಯತೆಯಾಗಬೇಕು. ಪುರಸಭೆ ಆಸ್ತಿ ಒತ್ತುವರಿ ಆಗುವುದು, ಅದನ್ನು ಬಿಡಿಸಿಕೊಳ್ಳುವುದು ಇಂತಹ ಪ್ರಕರಣಗಳು ಸಲ್ಲದು. ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮನಾದ ಜವಾಬ್ದಾರಿಯಿಂದ ಎಲ್ಲವೂ ಚೆನ್ನಾಗಿ ನಡೆಯಬಲ್ಲವು. ಪುರಸಭೆಯ ತೆರಿಗೆ ಬಾಕಿ ₹50 ಲಕ್ಷ ಇದೆ ಎಂದರೆ ಇದು ಯಾರ ಲೋಪದಿಂದ ಎಂಬ ಪ್ರಶ್ನೆ ಕಾಡುತ್ತದೆ.
ಅಧಿಕಾರಿಗಳು ಹೇಳುವ ಕಾರಣಗಳೂ, ಸಾರ್ವಜನಿಕರು ಹೇಳುವ ಉದಾಹರಣೆಗಳಿಗಿಂತ ಪಟ್ಟಣದ ಹಿತಕ್ಕಾಗಿ ತೆರಿಗೆ ಸರಿಯಾದ ಸಮಯಕ್ಕೆ ಪಾವತಿ ಮಾಡುವುದು ಸಾರ್ವಜನಿಕರ ಆದ್ಯತೆಯಾದಲ್ಲಿ ಪಟ್ಟಣದ ಅಭಿವೃದ್ಧಿ ಸಾಧ್ಯ ಎಂದರು.ಪುರಸಭೆ ಪ್ರಭಾರ ಅಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಸರ್ಕಾರದ ಯೋಜನೆಗಳ ಸಮರ್ಪಕ ಬಳಕೆಯಲ್ಲಿ ಪುರಸಭೆ ಹಾಗೂ ಸಾರ್ವಜನಿಕರ ಸಮಪಾಲು ಇರಬೇಕು.
ನಮ್ಮ ಸರ್ಕಾರ ಜನರಿಗೋಸ್ಕರ ಇರುವ ಸರ್ಕಾರ. ಜನರೂ ಸರ್ಕಾರದ ಕೆಲಸಗಳಿಗೆ ಶಕ್ತಿ ತುಂಬಿ ಇಡೀ ವ್ಯವಸ್ಥೆಯನ್ನು ಸರಿಯಾಗಿಟ್ಟುಕೊಳ್ಳುವಲ್ಲಿ ಸಹಕರಿಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಮಾತನಾಡಿ, ಪುರಸಭೆಯ ಹಿತಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ. ಇದೆಲ್ಲದರ ನಡುವೆ ಶ್ರಮಿಕರ ಸೇವೆಯನ್ನು ಸ್ಮರಿಸುವ ದಿನ ಇದಾಗಿದೆ. ಸರ್ಕಾರ ಪೌರಾಡಳಿತ ದಿನಾಚರಣೆಗೆ ಅವಕಾಶ ಮಾಡಿಕೊಟ್ಟಿರುವುದು ನಿಜಕ್ಕೂ ಸಂತಸದ ಸಂಗತಿ. ಈ ಮೂಲಕ ಪುರಸಭೆಗಳ ಸಮಸ್ಯೆಗಳನ್ನು ಸಾರ್ವಜನಿಕರಕೊಂದಿಗೆ ಹಂಚಿಕೊಳ್ಳುವುದಕ್ಕೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಈ ದಿನಾಚರಣೆ ಸಹಕಾರಿ. ಕುಡಿಯುವ ನೀರು, ವಿದ್ಯುದ್ದೀಪ, ನಗರದ ಸ್ವಚ್ಛತೆಗೆ ಪ್ರಥಮಾದ್ಯತೆ ನೀಡುತ್ತಿದ್ದೇವೆ. ಕಂದಾಯ ವಸೂಲಿಯಲ್ಲಿಯೂ ಪ್ರಗತಿಯ ಹಾದಿಯಲ್ಲಿದ್ದೇವೆ ಎಂದರು.
ಪುರಸಭೆ ಸದಸ್ಯರಾದ ಸುನಿತಾ ಭದ್ರಾವತಿ, ಮಮತಾ ಆರೆಗೊಪ್ಪ, ಖುರ್ಷಿದ್ ಹುಲ್ಲತ್ತಿ, ಪರಶುರಾಮ, ಖಂಡೂನವರ, ಅಬ್ದುಲ್ಘನಿ ಪಾಳಾ, ವಿನಾಯಕ ಬಂಕನಾಳ, ನಿಯಾಜ ಸರ್ವಿಕೇರಿ, ಸುರೇಶ ನಾಗಣ್ಣನವರ, ಮಾಲತೇಶ ಕಾಳೆ, ಮೇಕಾಜಿ ಕಲಾಲ, ಕಾಂಗ್ರೆಸ್ ನಗರ ಅಧ್ಯಕ್ಷ ಮತೀನ ಶಿರಬಡಗಿ ವೇದಿಕೆಯಲ್ಲಿದ್ದರು. ಮಧುಮತಿ ಡೂಗೂರಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ
ಸವಣೂರು: ಸರ್ಕಾರಿ ಸೇವೆ ಮಾಡಲು ಕೂಡಾ ಸೌಭಾಗ್ಯ ಇರಬೇಕು. ಅಂತಹ ಸೌಭಾಗ್ಯವನ್ನು ನಾನು ಪಡೆದುಕೊಂಡು ಸುಮರು 40 ವರ್ಷ ಶಿಕ್ಷಕ ವೃತ್ತಿ ಜೀವನ ಸಲ್ಲಿಸುರುವುದು ಅವಿಸ್ಮರಣೀಯವಾಗಿದೆ ಎಂದು ಎನ್.ಎಂ. ಪಾಟೀಲ ತಿಳಿಸಿದರು.
ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿರುವ ಟಿಎಂಎಇಎಸ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಮ್ಮ ಸೇವಾ ನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ 2024- 25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಸುದೀರ್ಘವಾಗಿ ಸುಮಾರು ನಲವತ್ತು ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿರುವುದು ನನ್ನ ಪುಣ್ಯ ಎಂದರು.
2024- 25ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪಲ್ಲವಿ ಓದುಸುಮಠ, ದ್ವಿತೀಯ ಸ್ಥಾನ ಪಡೆದ ರಂಜಿತಾ ಬರದೂರ, ತೃತೀಯ ಸ್ಥಾನ ಪಡೆದ ವಿಜಯಲಕ್ಷ್ಮಿ ಮಾಲಿ ಅವರನ್ನು ಸನ್ಮಾನಿಸಲಾಯಿತು. ಈ ವಿದ್ಯಾರ್ಥಿಗಳಿಗೆ ಬಸಪ್ಪ ಮಾಲಿ ಹಾಗೂ ಶಿವಲಿಂಗಪ್ಪ ಕನವಳ್ಳಿ ಅವರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.ಎಸ್ಡಿಎಂಸಿ ಅಧ್ಯಕ್ಷ ಮಾಲತೇಶ ತಳವಾರ ಅಧ್ಯಕ್ಷತೆ ವಹಿಸಿದ್ದರು.
ಪರಮಯ್ಯಶಾಸ್ತ್ರೀ ಹಿರೇಮಠ, ಬಿಆರ್ಪಿಗಳಾದ ಗಂಗಾಧರ ಹಿರೇಮಠ, ಗ್ರಾಪಂ ಸದಸ್ಯರಾದ ನಿಂಗಪ್ಪ ಆರೇರ, ಯುವಕರಾದ ಗುರುಬಸಯ್ಯ ಚಪ್ಪರದಹಳ್ಳಿಮಠ, ಮಾರುತಿ ಬಣಕಾರ, ವೀರೇಶ ಸಿ., ವೀರೇಶ ಕುಬಿಹಾಳ, ಸಂಜೀವ ಮಾಲಿ, ನಾಗರಾಜ ಮಡ್ಲೂರ, ಶರಣಪ್ಪ ಬಡಿಗೇರ, ಮಲ್ಲಯ್ಯ ಮೇವುಂಡಿ, ಶರಣಪ್ಪ, ಮುಖ್ಯೋಪಾಧ್ಯಾಯರಾದ ಜಿ. ಮಲ್ಲಪ್ಪ, ಶಿಕ್ಷಕರಾದ ಎಸ್.ಬಿ. ಗುಡಗೇರಿ, ಚಂದ್ರು ಕಡೇಮನಿ, ಯು. ರವಿಚಂದ್ರ, ಪಿ.ಎ. ಪುರಾಣಿಕಮಠ ಇತರರು ಇದ್ದರು.