ಸಾರಾಂಶ
ಮೊದಲಿಗಿಂತಲೂ ಈಗ ಜಾತಿ ಪದ್ಥತಿ ಕಡಿಮೆಯಾಗಿದೆ. ದುರಂತದ ಸಂಗತಿ ಏನೆಂದರೆ, ಸ್ವಾತಂತ್ರ್ಯ ಬಂದ ನಂತರ ಸರ್ಕಾರಗಳೇ ಕಾನೂನು ಮೂಲಕ ವಸತಿ ನಿಲಯಗಳಲ್ಲೂ ಎಸ್ಸಿ-ಎಸ್ಟಿ ವಸತಿ ನಿಲಯಗಳು ಬೇರೆ, ಅಲ್ಪಸಂಖ್ಯಾತರ ವಸತಿ ನಿಲಯಗಳು ಬೇರೆಯಾಗಿ ಮಾಡಿದವು.
ಧಾರವಾಡ: ಎಲ್ಲ ವರ್ಗ- ಸಮಾಜವನ್ನು ಒಂದೇ ತೆರನಾಗಿ ನೋಡಬೇಕಾದ ಆಳುವ ಸರ್ಕಾರಗಳು ಎಸ್ಸಿ-ಎಸ್ಟಿ ಸೇರಿದಂತೆ ಇತರೆ ಜನಾಂಗಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯಗಳನ್ನು ಸ್ಥಾಪಿಸಿಕೊಟ್ಟಿರುವುದೇ ಸಮಾಜದಲ್ಲಿ ಎಡಪಂಥೀಯ ಚಿಂತನೆ ಹೆಚ್ಚಾಗಲು ಕಾರಣ ಎಂದು ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಸೋಮವಾರ ಇಲ್ಲಿಯ ದೀನ್ದಯಾಳ ಉಪಾಧ್ಯಾಯ ಹೆಸರಿನ ವಸತಿ ನಿಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲಿಗಿಂತಲೂ ಈಗ ಜಾತಿ ಪದ್ಥತಿ ಕಡಿಮೆಯಾಗಿದೆ. ದುರಂತದ ಸಂಗತಿ ಏನೆಂದರೆ, ಸ್ವಾತಂತ್ರ್ಯ ಬಂದ ನಂತರ ಸರ್ಕಾರಗಳೇ ಕಾನೂನು ಮೂಲಕ ವಸತಿ ನಿಲಯಗಳಲ್ಲೂ ಎಸ್ಸಿ-ಎಸ್ಟಿ ವಸತಿ ನಿಲಯಗಳು ಬೇರೆ, ಅಲ್ಪಸಂಖ್ಯಾತರ ವಸತಿ ನಿಲಯಗಳು ಬೇರೆಯಾಗಿ ಮಾಡಿದವು. ಈ ಮೊದಲು ಊರುಗಳಲ್ಲಿ ಬೇರೆ ಬೇರೆ ಜಾತಿಗಳಿಗೆ ಬೇರೆ ಬೇರೆ ಕೇರಿಗಳಿದ್ದವು. ಹಾಗೆಯೇ ವಸತಿ ನಿಲಯಗಳಲ್ಲೂ ಹೊಸ ಹೊಸ ಕೇರಿಗಳನ್ನು ಸೃಷ್ಟಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಾನು ರಾಜಕೀಯಕ್ಕೆ ಬಂದ ಮೇಲೆ ಈ ವಿಷಯ ಬಹಳ ಕಾಡಿತ್ತು. ನಮ್ಮ ಎಲ್ಲ ಹುಡುಗರುಗಳು ಎಲ್ಲರೊಂದಿಗೂ ಕೂಡಿ ಬೆಳೆಯಬೇಕು, ಓದಬೇಕು. ಆಗ ಮಾತ್ರ ಪರಸ್ಪರ ಸಮನ್ವಯತೆ ಬರುತ್ತದೆ. ಈಗ ಆಗುತ್ತಿರುವ ಕೋಮು ಗಲಭೆಗಳು ಆಗೋದಿಲ್ಲ ಎಂದು ಎಲ್ಲ ಜಾತಿ-ಜನಾಂಗದವರು ಕೂಡಿ ಓದುವ ಪಂ. ದೀನದಯಾಳ ಉಪಾಧ್ಯಾಯ ವಸತಿ ನಿಲಯವನ್ನು ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ವಸತಿ ನಿಲಯಗಳು ಸಹ ಇದೇ ತೆರನಾಗಿಯೇ ಸ್ಥಾಪಿಸಬೇಕು ಎಂಬ ಇಚ್ಛೆಯನ್ನು ಬೆಲ್ಲದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಎನ್.ಎಚ್. ಕೋನರಡ್ಡಿ ಸೇರಿದಂತೆ ಇತರರು ಇದ್ದರು.