ನದಿ ಜಲಮೂಲಗಳ ಪಾವಿತ್ರ್ಯತೆ ಕಲುಷಿತಗೊಳ್ಳುತ್ತಿರುವ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಚ್. ನಜೀರ್ ಅಹ್ಮದ್ ಕರೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ನದಿ ಜಲಮೂಲಗಳ ಪಾವಿತ್ರ್ಯತೆ ಕಲುಷಿತಗೊಳ್ಳುತ್ತಿರುವ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಚ್. ನಜೀರ್ ಅಹ್ಮದ್ ಕರೆ ನೀಡಿದ್ದಾರೆ.ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ಮಾದಾಪಟ್ಟಣ ಪುಣ್ಯಕೋಟಿ ಗೋಶಾಲೆ ಸಹಯೋಗದೊಂದಿಗೆ ನಡೆದ 188ನೇ ಕಾವೇರಿ ಆರತಿ ಮತ್ತು ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಲಮೂಲಗಳಿಗೆ ಪೂಜೆ ಸಲ್ಲಿಸುವ ಸಂದರ್ಭ ಅರ್ಚಕರು ಪುಷ್ಪಾರ್ಚನೆ ಮಾಡುತ್ತಿದ್ದರೆ ಇನ್ನೊಂದೆಡೆ ಪಟ್ಟಣ ಗ್ರಾಮಗಳಿಂದ ಕಲ್ಮಶ ತ್ಯಾಜ್ಯಗಳನ್ನು ನದಿಗೆ ಹರಿಸುತ್ತಿರುವುದು ಆತಂಕಕಾರಿ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಪ್ರತಿಯೊಬ್ಬರು ಆರಾಧಿಸುವ ಮೂಲಕ ಜಲಮೂಲಗಳನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದರು.
ಗುರುಪೂರ್ಣಿಮೆ ಅಂಗವಾಗಿ ಮಾತನಾಡಿದ ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಮತ್ತು ಹಿರಿಯ ಶಿಕ್ಷಕ ಬಾಚರಣಿಯಂಡ ಪಿ ಅಪ್ಪಣ್ಣ, ಗುರುಗಳನ್ನು ಹುಡುಕಿಕೊಂಡು ದೂರದ ಬೆಟ್ಟಗಳಿಗೆ ಹೋಗುವ ಅಗತ್ಯವಿಲ್ಲ. ತಮ್ಮ ಗುರುಗಳನ್ನು ಗೌರವದಿಂದ ಕಂಡು ಗೌರವಿಸಿ ನಮಿಸುವುದು ಉತ್ತಮ ಸಂಸ್ಕಾರ ಎಂದರು.ಪುಣ್ಯಕೋಟಿ ಗೋಶಾಲೆಯ ಪ್ರಮುಖ ಶ್ರೀನಿವಾಸ್, ತಮ್ಮ ಗೋಶಾಲೆಯಲ್ಲಿ 70ಕ್ಕೂ ಅಧಿಕ ಗೋವುಗಳು ಇದ್ದು, ಬಹುತೇಕ ಅನಾಥ ಗೋವುಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆ ಎಂದು ತಿಳಿಸಿದರು.
ಕಾವೇರಿಗೆ ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ, ಅಷ್ಟೋತ್ತರ ನೆರವೇರಿಸಿ ನಂತರ ಸಾಮೂಹಿಕವಾಗಿ ಆರತಿ ಬೆಳಗಿದರು.ಗುರುಪೂರ್ಣಿಮೆ ಅಂಗವಾಗಿ ಎಂ ಎಚ್ ನಜೀರ್ ಅಹ್ಮದ್, ಬಾಚರಣಿಯಂಡ ಪಿ ಅಪ್ಪಣ್ಣ, ನಿವೃತ್ತ ಪ್ರಾಂಶುಪಾಲರಾದ ಡಾ ದೇವರಾಜ್ ಅವರನ್ನು ಗೌರವಿಸಲಾಯಿತು.
ನಮಾಮಿ ಕಾವೇರಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ಧರಣಿ ಸೋಮಯ್ಯ, ಕರುಂಬಯ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯಾನ್, ಸುಧೀರ್, ಪುಣ್ಯಕೋಟಿ ಗೋಶಾಲೆಯ ಪ್ರಮುಖರಾದ ಅಜಿತ್ ಮೂಕಾಂಬಿಕಾ ದಂಪತಿ, ಕರ್ಕಳ್ಳಿ ಸುಭಾಷ್, ಮನು ರೈ, ಮೈಸ್ ಚಂದ್ರಶೇಖರ್, ಡಿ ಸಿ ಮಂಜುನಾಥ್, ಪ್ರದೀಪ್, ಜನಾರ್ಧನ್ ಮಧುಸೂಧನ್, ಸಮಾಜ ಕಲ್ಯಾಣ ಅಧಿಕಾರಿ ಮಧು ಮತ್ತಿತರರು ಇದ್ದರು.