ಶಾಸಕ ಎಚ್,ಡಿ,ತಮ್ಮಯ್ಯ ನಿವಾಸದಲ್ಲಿ ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ’ ಉದ್ಘಾಟನಾ ಸಮಾರಂಭ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರಾಜಕಾರಣಕ್ಕಿಂತ ನಮ್ಮೂರಿನ ಶಾಂತಿಯೇ ಮುಖ್ಯ, ಯಾರಿಗೂ ತೊಂದರೆ ಆಗಬಾರದೆಂದು ಬಯಸುತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿ ಶುಕ್ರವಾರ ಶಾಸಕ ಎಚ್,ಡಿ,ತಮ್ಮಯ್ಯ ನಿವಾಸದಲ್ಲಿ ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಸಮಾಜಮುಖಿ ಕಾರ್ಯಕ್ರಮಗಳು ನಮ್ಮ ಮನೆಗಳಲ್ಲಿ ನಡೆಯಬೇಕು. ಆಗ ಬೇರೆಯವರಿಗೆ ಮಾದರಿ ಆಗುತ್ತದೆ. ಮನಸು ಸರಿ ಇಲ್ಲದಿದ್ದರೆ, ಪ್ರೀತಿ ಇಲ್ಲದಿದ್ದರೆ ಯಾವ ದೊಡ್ಡ ಮನೆಯಲ್ಲಿ ಊಟ ಹಾಕಿದರೆ ಏನು ಪ್ರಯೋಜನ. ಅದು ಅವರಿಗೆ ಪ್ರೀಯವಾಗುವುದಿಲ್ಲ, ಚಿಕ್ಕ ಮನೆ ಆದರೂ ಚಿಕ್ಕ ಕಬೋರ್ಡ್ನಲ್ಲಿ ಒಂದು ಗ್ರಂಥಾಲಯ ತೆರೆಯಬೇಕು ಎಂದು ಕರೆ ನೀಡಿದರು.ನನಗೆ ರಾಜಕಾರಣಕ್ಕಿಂತ ನಮ್ಮೂರು ಹಾಗೂ ನಮ್ಮೂರಿನ ಜನರ ಶಾಂತಿಯಿಂದಿರಬೇಕು. ಯಾರಿಗೂ ತೊಂದರೆ ಆಗಬಾರ ದೆಂದು ಬಯಸುತ್ತೇನೆ. ದೇಶದ ಬೆನ್ನೆಲುಬು ರೈತರು, ಒಳ್ಳೆಯ ಮಳೆ, ಬೆಳೆ ಆಗಲೆಂದು ಎಲ್ಲಾ ವರ್ಗದ ಜನರಿಗೆ ಉತ್ತಮ ಆರೋಗ್ಯ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ. ಮಾನಸ, ‘ಪುಸ್ತಕ’ ಬದುಕಿನ ದಿಕ್ಕನ್ನು ಬದಲಾವಣೆ ಮಾಡಿ ಬದುಕಿನ ಹೆಜ್ಜೆ ಹೇಗಿರಬೇಕೆಂದು ತೋರಿಸುತ್ತದೆ. ನಾವುಗಳು ಬದುಕನ್ನು ಕೆದಕುತ್ತಾ ಹೋಗುತ್ತಿದ್ದೇವೆ. ಬದುಕಿನಲ್ಲಿ ಹೇಗೆ ಬದುಕಬೇಕು ಎಂಬುವುದು ಒಂದು ಕಲೆ. ಬದುಕುವ ಕಲೆ ಗೊತ್ತಿಲ್ಲದ ಕಾರಣಕ್ಕೆ ಬದುಕನ್ನು ಕೆದುಕುತ್ತಾ ಹೋಗುತ್ತಿದ್ದೇವೆ ಎಂದರು.
ಈವರೆಗೆ ಲೇಖಕರಿಗೆ, ಪ್ರಕಾಶಕರಿಗೆ ಮಾತ್ರ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಶಸ್ತಿ ನೀಡಲಾಗುತ್ತಿತ್ತು. ಈಗ ಮನೆಗೊಂದು ಗ್ರಂಥಾಲಯ ಯೋಜನೆ ಹಮ್ಮಿಕೊಂಡು ನಾಲ್ಕು ಕಂದಾಯ ವಿಭಾಗಗಳಲ್ಲಿ ಮನೆಯಲ್ಲೆ ಗ್ರಂಥಾಲಯ ಮಾಡುವವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಶ್ ಕ್ಯಾತನಬೀಡು, ಸಿಡಿಎ ಅಧ್ಯಕ್ಷ ಮಂಜೇಗೌಡ, ರೈತ ಮುಖಂಡ ಗುರು ಶಾಂತಪ್ಪ, ಕೆ.ಬಿ. ಪರಮೇಶ್ವರಪ್ಪ, ಡಾ. ಬೆಳವಾಡಿ ಮಂಜುನಾಥ್, ನಟರಾಜ್ ಎಸ್. ಕೊಪ್ಪಲು, ನಿವೃತ್ತ ಅಧಿಕಾರಿ ಡಾ. ಮಂಜುಳಾ ಹುಲ್ಲಹಳ್ಳಿ, ರೇಖಾ ಹುಲಿಯಪ್ಪಗೌಡ, ಕುಂದೂರು ಅಶೋಕ್, ಸುರೇಶ್ ಉಪಸ್ಥಿತರಿದ್ದರು.ಪೊಟೋ:
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ನಿವಾಸದಲ್ಲಿ ತೆರೆಯಲಾದ ಗ್ರಂಥಾಲಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ಮಾನಸ ಉದ್ಘಾಟಿಸಿದರು. ಈ ವೇಳೆ ಶಾಸಕ ತಮ್ಮಯ್ಯ, ಸಿಡಿಎ ಅಧ್ಯಕ್ಷ ಮಂಜೇಗೌಡ, ರವೀಶ್ ಕ್ಯಾತನಬೀಡು ಮೊದಲಾದವರಿದ್ದರು.