ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಜೀವನದಲ್ಲಿ ಎಲ್ಲವನ್ನೂ ಸ್ವೀಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ನಿಮ್ಮ ದೇಹ, ಶರೀರಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು. ಅಲ್ಲದೆ, ಮನಸ್ಸು ಶಾಂತಿಯ ಕಡೆಗೆ ಪ್ರಯಣ ಬೆಳೆಸಿ ಬುದ್ಧಿ ಕೆಲಸ ಮಾಡುವಂತೆ ಮಾಡುತ್ತದೆ ಎಂದ ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಹೇಳಿದ್ದಾರೆ.ನಗರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಸೋಮವಾರ ಹ್ಯಾಪಿನೆಸ್ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ಕುರಿತು ಬೇರೆಯವರು ಏನು ಮಾಡುತ್ತಾರೆ ಎಂಬುದನ್ನು ಬಿಟ್ಟುಬಿಡಿ. ಜತೆಗೆ ತಪ್ಪನ್ನು ತಿದ್ದಿಕೊಳ್ಳುವಂತಹ ವಿಶಾಲ ಮನೋಭಾವ ಬೆಳೆಸಿಕೊಂಡರೆ ಬದುಕು ಸುಂದರವಾಗಿರುತ್ತದೆ. ತಪ್ಪು ಮಾಡಿರುವವರ ಕುರಿತು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಅನಗತ್ಯವಾಗಿ ಕೊರಗುತ್ತಿದ್ದರೆ ದುಃಖ ಅನುಭವಿಸುತ್ತಾ ಬದುಕುತ್ತೀರಿ ಎಂದು ಕರೆ ನೀಡಿದರು.ಧ್ಯಾನ, ಜ್ಞಾನದಿಂದ ಸಂತೋಷ: ಜೀವನದಲ್ಲಿ ಧ್ಯಾನ, ಜ್ಞಾನ ಇದ್ದಾಗ ಸುಖ, ಸಂತೋಷ ಜತೆಯಾಗುತ್ತದೆ. ಜೀವನದ ಮುಖ್ಯವಾದ ಉದ್ದೇಶವೇ ಆನಂದ. ಆದರೆ ಆನಂದವಾಗಿರುವುದನ್ನು ಅನಗತ್ಯವಾಗಿ ಮುಂದೂಡಿಕೆ ಮಾಡುತ್ತಿದ್ದೇವೆ. ಸುತ್ತಮುತ್ತಲಿನ ಜನರ ಜತೆಯಲ್ಲಿ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವ ಜತೆಗೆ ಇಷ್ಟಾರ್ಥ ಸಿದ್ಧಿಗಾಗಿ ಸಾಧಿಸುವ ಮನೋಭಾವ ಬೆಳೆಸುವ ಅಗತ್ಯವಿದೆ ಎಂದರು.ನಗುವನ್ನು ಕಳೆದುಕೊಂಡಿರುವವರಿಗೆ ಕೆಲವು ಪ್ರೋತ್ಸಾಹ ಮಾತುಗಳನ್ನಾದರೂ ಆಡಿ. ಇವೆಲ್ಲವುಗಳು ದೃಢವಾದ ಮಾನಸಿಕ ಆರೋಗ್ಯಕ್ಕೆ ಪೂರಕ ಎಂದು ರವಿಶಂಕರ ಗುರೂಜಿ ಹೇಳಿದರು.
ರವಿಶಂಕರ ಗುರೂಜಿ ಪ್ರವಚನ ಕೇಳಲು ನೂರಾರು ಮಂದಿ ಭಾಗವಹಿಸಿದ್ದರು. ಇದೇ ಸಂದರ್ಭ ಗುರೂಜೀ ಭಕ್ತ ಡಾ.ಶ್ಯಾಮ್ ಪ್ರಸಾದ್ ಕುಂಬ್ಳೆ ಅವರು ರಜತ ಕಿರೀಟವನ್ನು ಗುರೂಜಿಗೆ ಸಮರ್ಪಿಸಿದರು.