ಆಚರಣೆ ಮೂಲಕ ಸಂಸ್ಕೃತಿ ಉಳಿಕೆ:ಎ. ಎಸ್. ಪೊನ್ನಣ್ಣ

| Published : Aug 05 2024, 12:32 AM IST

ಸಾರಾಂಶ

10ನೇ ವರ್ಷದ ಕಕ್ಕಡ ನಮ್ಮೆ ಕಾರ್ಯಕ್ರಮ ಉದ್ಘಾಟಿಸಲಾಯಿತು. ಆಚರಣೆ ಮೂಲಕ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಕಕ್ಕಡ ಪದ್ ನೆಟ್ಟ್ ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಗರೀಕರಣ ವಿಸ್ತಾರವಾಗುತ್ತಿದ್ದಂತೆ ನಮ್ಮ ಸಂಸ್ಕೃತಿ ಮರೆತು ಹೋಗಬಾರದು. ಇಂತಹ ಆಚರಣೆಗಳ ಮೂಲಕ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ಕುಟ್ಟ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ 10ನೇ ವರ್ಷದ ಕಕ್ಕಡ ನಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡವ ಸಮಾಜ ಗಳಿಗೆ ಬಿಡುಗಡೆಯಾಗಿರುವ ಹಣದಲ್ಲಿ ಶೇ. 18ರಷ್ಟು ಜಿಎಸ್ಟಿ ತೆರಿಗೆ ಹೊರತುಪಡಿಸಿ ಬೇರೆ ಯಾವುದೇ ಹಣವನ್ನು ನೀಡಬಾರದು, ಈಗಾಗಲೇ ಕೊಡವ ಸಮಾಜಗಳು ಒಕ್ಕೂಟಕ್ಕೆ ಆರು ಕೋಟಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಸಮುದಾಯ ಭವನಕ್ಕೆ ಒಂದು ಕೋಟಿ ಹಣ, ಕೊಡವ ಸಮಾಜಗಳಿಗೆ 3 ಕೋಟಿ ಅನುದಾನಕ್ಕೆ ಉಂಟಾಗಿದ್ದ ತಾಂತ್ರಿಕ ಅಡಚಣೆ ಸರಿಪಡಿಸಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಕಳೆದ ಹತ್ತು ವರ್ಷಗಳಿಂದ ಸ್ಥಳೀಯ ಜನರಿಗೆ ಒಂದೆಡೆ ಸೇರಲು ಹಾಗೂ ಅವರ ಪ್ರತಿಭೆ ಅನಾವರಣಕ್ಕೆ ಕಕ್ಕಡ ನಮ್ಮೆ ಮೂಲಕ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯರು ಹೊಂದಿರುವ ವ್ಯಾಪಾರ, ಕರಕುಶಲ ಕಲೆ, ಆಹಾರ ತಯಾರಿಕೆ ಇತ್ಯಾದಿಗಳಿಗೆ ಪರಿಚಯಿಸುವ ವೇದಿಕೆಯಾಗಿ ಕಕ್ಕಡ ನಮ್ಮೆ ಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಎರಡುವರೆ ವರ್ಷಗಳ ಹಿಂದೆ ಕೊಡವ ಮತ್ತು ಜಮ್ಮ ಹಿಡುವಳಿದಾರರ ಕೋವಿ ಹಕ್ಕಿಗೆ ಧಕ್ಕೆ ಬಂದಾಗ ಹೈಕೋರ್ಟ್ ನಿಂದ ಸುಪ್ರೀಂ ಕೋರ್ಟ್ ವರೆಗೆ ಎ. ಎಸ್. ಪೊನ್ನಣ್ಣ ಮತ್ತು ಸಂಗಡಿಗರು ಒಂದು ರು. ಸಹ ಹಣವನ್ನು ಸಹ ಕೇಳದೆ ಉಚಿತವಾಗಿ ಕಾನೂನು ಹೋರಾಟ ಮಾಡಿ ಕೊಡಗಿನ ಮೂಲ ನಿವಾಸಿಗಳಿಗೆ ಜಯ ತಂದು ಕೊಟ್ಟಿದ್ದಾರೆ. ಹಾಗೆಯೇ ಕಸ್ತೂರಿರಂಗನ್ ವಿಚಾರ ಮತ್ತೆ ಪ್ರಸ್ತಾಪವಾಗಿದ್ದು ವಯನಾಡ್ ಭೂಕುಸಿತದಿಂದ ಈ ಯೋಜನೆ ಜಾರಿಗೆ ತರಲು ಪುಷ್ಠಿ ಸಿಕ್ಕಿದೆ. ಆದರೆ ಈ ಯೋಜನೆ ಜಾರಿಗೆ ಬಂದರೆ ಕೊಡಗಿಗೆ ಉಂಟಾಗುವ ಅಪಾಯದ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದರು.

ಕಳೆದ ಸರ್ಕಾರವಿದ್ದಾಗ 10 ಕೋಟಿ ಅನುದಾನವನ್ನು ಕೊಡವ ಜನಾಂಗದ ಅಭಿವೃದ್ಧಿಗೆ ಮಂಜೂರು ಮಾಡಿದ್ದು ಆದರೆ ಅದಕ್ಕೆ ತಾಂತ್ರಿಕ ಅನುಮೋದನೆ ಸಿಕ್ಕಿರಲಿಲ್ಲ ಇದೀಗ ತಾಂತ್ರಿಕ ಅನುಮೋದನೆಯನ್ನು ಈಗಿನ ಸರ್ಕಾರದಿಂದ ಎ. ಎಸ್. ಪೊನ್ನಣ್ಣ ಅವರು ಕೊಡಿಸುವ ಮೂಲಕ ಹಣ ಬಿಡುಗಡೆ ಮಾಡಿಸಿದ್ದಾರೆ ಎಂದರು.

ಅಜ್ಜಿಕುಟ್ಟಿರ ಕಾಂಚನ ಪೊನ್ನಣ್ಣ, ಕೊಡವ ಸಮಾಜದ ಉಪಾಧ್ಯಕ್ಷ ಹೊಟ್ಟೇಂಗಡ ರಮೇಶ್, ಕಾರ್ಯದರ್ಶಿ ಕೊಂಗಾಂಡ ಸುರೇಶ್ ದೇವಯ್ಯ, ಉಪ ಕಾರ್ಯದರ್ಶಿ ತೀತಿರ ಮಂದಣ್ಣ, ಖಜಾಂಚಿ ಮಚ್ಚಮಾಡ ಸುಬ್ರಮಣಿ ನಿರ್ದೇಶಕರಾದ ಕೇಚಮಾಡ ವಾಸು ಉತ್ತಪ್ಪ, ಕೋದಂಡ ಲೀಲಾ ಕಾರ್ಯಪ್ಪ, ತೀತಿರ ಕಬೀರ್ ತಿಮ್ಮಯ್ಯ, ಚೆಪ್ಪುಡೀರ ಪಾರ್ಥ, ಜಾಗ ದಾನಿಗಳಾದ ಮುಕ್ಕಾಟಿರ ರಾಜ ಮಂದಣ್ಣ, ಚೆಕ್ಕೆರ ರಾಬಿನ್ ಕಾರ್ಯಪ್ಪ ಹಾಗೂ ಸಾಂಸ್ಕೃತಿಕ ಮತ್ತು ಮಹಿಳಾ ಸಂಘದ ಪದಾಧಿಕಾರಿಗಳಾದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ತೀತಿರ ಮೇಘನಾ ತಿಮ್ಮಯ್ಯ, ಮಚ್ಚಮಾಡ ನವ್ಯ ಪ್ರಕಾಶ್, ಕಳ್ಳಂಗಡ ಗ್ರೀಷ್ಮ ಅಪ್ಪಣ್ಣ, ಚೆಕ್ಕೆರ ದೇಚು ರಾಬಿನ್, ಕೋಳೆರ ಪ್ರಿಯಾ ಮನೋಜ್ ಮತ್ತಿತರರು ಹಾಜರಿದ್ದರು.

ಸ್ಥಳೀಯರು ತೊಡಗಿಸಿಕೊಂಡಿರುವ ವ್ಯಾಪಾರ ಉದ್ದಿಮೆ, ಆಹಾರ ತಯಾರಿಕೆ ಆಟೋಮೊಬೈಲ್ ಕ್ಷೇತ್ರದ ಪರಿಚಯ ಹಾಗೂ ಪ್ರದರ್ಶನ, ಮಾರಾಟ ವ್ಯವಸ್ಥೆ ಮಾಡಲಾಗಿತ್ತು.

ಹೂವಿನ ಗಿಡಗಳು ಕರಕುಶಲ ವಸ್ತುಗಳು ಫ್ಯಾಷನ್ ಡಿಸೈನ್, ಪೇಂಟಿಂಗ್, ಆಹಾರ ತಯಾರಿಕಾ ವಿಭಾಗದಲ್ಲಿ ಚಟ್ನಿ ಉಪ್ಪಿನಕಾಯಿ ವೈವಿಧ್ಯಮಯ ತಿನಿಸುಗಳು ಪ್ರದರ್ಶನ ಹಾಗೂ ಮಾರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಹಿಳೆಯರ ಕಲರವ ಕಕ್ಕಡ ನಮಗೆ ಹಬ್ಬದ ವಾತಾವರಣ ಮೂಡಿಸಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕ್ರಮಕ್ಕೆ ಮಹಿಳೆಯರು ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.