ಸಾರಾಂಶ
ನಾರಾಯಣ ಭಟ್ ಅವರು ಕಲಾಸೇವೆ ಮೂಲಕ ಕಳೆದ 45 ವರುಷಗಳಲ್ಲಿ ಮುಖ್ಯ ಹಿಮ್ಮೇಳವಾದಕರಾಗಿ, ಯಕ್ಷಗಾನ ಕಲಾಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಸೂರ್ನಾಡು ಗಣೇಶ ದುರ್ಗಾ ಯಕ್ಷಗಾನ ಮಂಡಳಿ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲಿನಲ್ಲಿ ಸೇವೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆ.2 ರಂದು ಸಂಜೆ 7 ರಿಂದ ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಯೋಜನೆಯ ಭ್ರಾಮರೀ ಯಕ್ಷವೈಭವ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಹಿಮ್ಮೇಳ ಕಲಾವಿದ ಪೆರುವಾಯಿ ಬಿ. ನಾರಾಯಣ ಭಟ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿ 15 ಸಾವಿರ ರು. ನಗದು, ಪ್ರಶಸ್ತಿ ಪತ್ರ, ಬೆಳ್ಳಿಯ ಪದಕವನ್ನು ಒಳಗೊಂಡಿರುತ್ತದೆ.ನಾರಾಯಣ ಭಟ್ ಅವರು ಕಲಾಸೇವೆ ಮೂಲಕ ಕಳೆದ 45 ವರುಷಗಳಲ್ಲಿ ಮುಖ್ಯ ಹಿಮ್ಮೇಳವಾದಕರಾಗಿ, ಯಕ್ಷಗಾನ ಕಲಾಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಸೂರ್ನಾಡು ಗಣೇಶ ದುರ್ಗಾ ಯಕ್ಷಗಾನ ಮಂಡಳಿ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಯಕ್ಷಗಾನ ಗುರುಗಳಾಗಿ ಅಪಾರ ಶಿಷ್ಯಂದಿರನ್ನು ಹೊಂದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಗುರುತಿಸಿಕೊಂಡಿರುವ ವಸಂತ ವಾಮದಪದವು ಹಾಗೂ ಕಳೆದ 25 ವರುಷಗಳಿಂದ ನಿರಂತರವಾಗಿ ಪೂರ್ತಿರಾತ್ರಿಯ ಯಕ್ಷಗಾನ ತಾಳಮದ್ದಳೆ ಆಯೋಜಿಸಿಕೊಂಡು,ಯಕ್ಷಗಾನ ಕಲಾವಿದರನ್ನು ಗೌರವಿಸಿಕೊಂಡು ಬಂದಿರುವ ಯಕ್ಷಸಂಗಮ ಮೂಡುಬಿದಿರೆ ಸಂಸ್ಥೆಗೆ ಈ ಬಾರಿಯ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಭ್ರಾಮರೀ ಯಕ್ಷಸೇವಾ ಪುರಸ್ಕಾರವು ,ತಲಾ ಆರು ಸಾವಿರ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಇಡೀ ರಾತ್ರಿ ತೆಂಕು ಬಡಗಿನ ಪ್ರಸಿದ್ದ ಕಲಾವಿದರ ಒಗ್ಗೂಡುವಿಕೆಯಲ್ಲಿ ‘ಶ್ರೀಮತಿ ಪರಿಣಯ, ಸಾಧ್ವಿ ಸೈರಂದ್ರಿ, ವೈಜಯಂತಿ ಪರಿಣಯ’ ಯಕ್ಷಗಾನ ಉಚಿತವಾಗಿ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.