ಹಳೆಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಉಳಿಸಿ ಅನುಷ್ಠಾನ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ

ಕನಕಗಿರಿ: ಜಿರಾಮ್ ಜಿ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿ ತಾಲೂಕು ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ತಾಪಂ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ ಮೂಲಕ ಜಿಪಂ ಸಿಇಒಗೆ ಮನವಿ ಸಲ್ಲಿಸಿದರು.

ತಾಲೂಕು ಕಾರ್ಯದರ್ಶಿ ಬಾಳಪ್ಪ ಗದ್ದಿ ಮಾತನಾಡಿ, ಡಿ. 21ರಂದು ಕೇಂದ್ರ ಸರ್ಕಾರ ಮನರೇಗಾ ರದ್ದುಗೊಳಿಸಿ ಕಾರ್ಪೊರೇಟ್ ಪರ ನೀತಿಗಳಿಗೆ ಜೈ ಪರಾಗ್ ಹೇಳುವ ಜಿರಾಮ್ ಜಿ ಯೋಜನೆಯನ್ನು ಸಂಸತ್‌ನಲ್ಲಿ ಜಾರಿಗೊಳಿಸಿದೆ. ಜು.1ರಿಂದ ಅಧಿಕೃತವಾಗಿ ಕೆಲಸ ಕೊಡುತ್ತೇನೆಂದು ಹೇಳಿಕೊಂಡು ಅನುಷ್ಠಾನಕ್ಕೆ ಹೊರಟಿರುವುದು ಖಂಡನೀಯ. ಹಳೆಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಉಳಿಸಿ ಅನುಷ್ಠಾನ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಜಿರಾಮ್ ಜಿ ರದ್ದುಪಡಿಸಬೇಕು. ತಕ್ಷಣವೇ ಕೂಲಿಕಾರರಿಗೆ ಕೆಲಸ ಕೊಡಬೇಕು. ಕನಿಷ್ಠ ₹700 ನಿಗದಿಪಡಿಸಬೇಕು. ಎನ್‌ಎಂಎಂಎಸ್ ಮತ್ತು ಈ ಕೆವೈಸಿ ಅಂತ ಅವೈಜ್ಞಾನಿಕ ತಂತ್ರಜ್ಞಾನ ಅಳವಡಿಸುವುದನ್ನು ಕೈ ಬಿಟ್ಟು ಕಣ್ಣು ರೆಪ್ಪೆ ಬಡಿಸಿ ಪ್ರತಿಯೊಬ್ಬರ ಫೋಟೋ ತೆಗೆಯುವುದನ್ನು ರದ್ದುಪಡಿಸಿ ಸರಳ ರೀತಿಯಲ್ಲಿ ಕೂಲಿಕಾರರಿಗೆ ಹಾಜರಾತಿ ನೀಡಬೇಕು. ಕೇಂದ್ರ ಸರ್ಕಾರ 60% ಅನುದಾನ ಕೊಡುತ್ತೇನೆಂದು ಹೇಳಿರುವಂತೆ 75 ದಿನದ ಕೆಲಸ ರಾಜ್ಯ ಸರ್ಕಾರ ಅವಲಂಬಿಸದೆ ನೀಡಬೇಕು. ಇನ್ನೂ ಈಗಾಗಲೇ ವಿಧಾನಸಭೆಯಲ್ಲಿ ಜಿರಾಮ್ ಜಿ ಅನುಷ್ಠಾನ ಮಾಡುವುದಿಲ್ಲವೆಂದು ನಿರ್ಣಯಿಸಿರುವುದರಿಂದ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ, ಕಾಯ್ದೆಯಡಿ ನೂರು ದಿನದ ಕೆಲಸ ನೀಡಲೇಬೇಕು. ಮಳೆ ಇಲ್ಲದೆ ಬರಗಾಲ ಬಂದಿರುವುದರಿಂದ ಮತ್ತು ವಿಪರಿತ ಸೂರ್ಯನ ಕಿರಣ ಹೆಚ್ಚಿರುವುದರಿಂದ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಕೆಲಸ ನೀಡಬೇಕು. ಬಿಸಿಲನ ತಾಪಕ್ಕೆ ಇತರ ಅಪಘಾತಗಳಿಗೆ ಸಿಲುಕಿ ಕೆಲಸದ ಸಂದರ್ಭದಲ್ಲಿ ಸಾವನ್ನಪ್ಪಿದರೆ ಆ ಕೂಲಿಕಾರರಿಗೆ ₹10ಲಕ್ಷ ಪರಿಹಾರ ನೀಡಬೇಕು. ಯುದ್ಧದ ಹೆಸರಿನಲ್ಲಿ ಹೆಚ್ಚಾಗಿರುವ ತೈಲ ಬೆಲೆಯು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿದಿದೆ. ಅದಕ್ಕಾಗಿ ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಕೂಡಲೇ ಇಳಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಅಧ್ಯಕ್ಷ ರಮೇಶ ಬಡಿಗೇರ,ಸದಸ್ಯರಾದ ಯಮನಪ್ಪ ಕುಂಬಾರ, ರಾಘವೇಂದ್ರ, ಪಂಪಾಪತಿ ಅಲಾಯಿಕುಣಿ, ಮಮಜುನಾಥ ಪಗಡದಿನ್ನಿ, ಕೆಂಚಪ್ಪ ಕುರಿ, ಕರಿಯಪ್ಪ ಭೋವಿ, ನಾಗಪ್ಪ ಹಡಪದ, ಅಬ್ದುಲ್ ರೆಹಮಾನ್, ಮುದಿಯಪ್ಪ ಇದ್ದರು.