ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ದಿನನಿತ್ಯದ ಜೀವನದಲ್ಲಿ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸಗಳನ್ನು ಮಾಡಬೇಕಾಗುತ್ತದೆ. ಗಿಡ ನೆಟ್ಟು ಪೋಷಿಸುವುದರಿಂದ ಶುದ್ಧ ಗಾಳಿ ಹಾಗೂ ಪ್ರಕೃತಿ ರಕ್ಷಿಸುವುದರಿಂದ ಮಳೆ, ಬೆಳೆ ಹಾಗೂ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ದೇಶದ ಅಭಿವೃದ್ಧಿಯೂ ಸಾಧ್ಯವೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಅಭಿಪ್ರಾಯಟ್ಟರು.ಪಟ್ಟಣದ ಡಾ. ಅಂಬೇಡ್ಕರ್ ನಗರ ಸಮೀಪವಿರುವ ಸರ್ಕಾರಿ ಬಾಲಕರ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವಿಶ್ವಪರಿಸರ ದಿನ ಪ್ರಯುಕ್ತ ಕಾನೂನು ಸೇವಾ ಸಮಿತಿ, ವಲಯ ಅರಣ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಗುರುವಾರ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕೋವಿಡ್ ಭೀಕರತೆಯ ಸಂದರ್ಭದಲ್ಲಿ ಆಕ್ಸಿಜನ್ಗಾಗಿ ಪರದಾಡಿದ ಸನ್ನಿವೇಶ ಕಂಡಿದ್ದೇವೆ. ಜತೆಗೆ ಲಕ್ಷ ಲಕ್ಷ ಹಣ ನೀಡಿ ಖರೀದಿಯನ್ನು ಮಾಡಲಾಗಿತ್ತು. ಆದ್ದರಿಂದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ನೆಟ್ಟಂತಹ ಗಿಡಗಳನ್ನು ಸಂರಕ್ಷಣೆ ಮಾಡಿ, ಉಳಿಸಿ, ಪೋಷಿಸಿ, ಬೆಳೆಸುವ ಮೂಲಕ ಅರ್ಥಪೂರ್ಣ ಆಚರಣೆ ಮಾಡೋಣವೆಂದು ಕರೆಕೊಟ್ಟರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಈ ನಿಟ್ಟಿನಲ್ಲಿ ಗಾಳಿ, ನೀರು, ಭೂಮಿ, ಪ್ರಕೃತಿ ಹಾಗೂ ಪರಿಸರ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಆದರೆ ಪಟಾಕಿ ಸಿಡಿಸುವುದು, ಟೈರ್ಗಳಿಗೆ ಬೆಂಕಿ ಹಾಕುವುದು, ಪ್ಲಾಸ್ಟಿಕ್ ಬಳಕೆ, ರಾಸಾಯನಿಕವನ್ನು ನದಿ, ಕೆರೆಕಟ್ಟೆಗಳಿಗೆ ಹರಿಯಲು ಬಿಟ್ಟು ಎಲ್ಲವನ್ನೂ ಕುಲಷಿತಗೊಳಿಸುತ್ತಿದ್ದೇವೆ, ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಜತೆಗೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಆದ್ದರಿಂದ ಪರಿಸರ ರಕ್ಷಣೆಗಾಗಿ ಹಾಗೂ ಪ್ರಕೃತಿಯ ಉಳಿವಿಗಾಗಿ ಗಿಡಮರಗಳ ರಕ್ಷಣೆ ಹಾಗೂ ಪೋಷಣೆಯಲ್ಲಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣವೆಂದು ಕರೆಕೊಟ್ಟರು.ಸಿವಿಲ್ ನ್ಯಾಯಾಧೀಶರಾದ ಚೇತನಾ, ಅಪರ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಗುಡದಿನ್ನಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಉಪ ಪ್ರಾಂಶುಪಾಲ ಪುರುಷೋತ್ತಮ್, ವಲಯ ಅರಣ್ಯಾಧಿಕಾರಿಗಳಾದ ದಿಲೀಪ್ ಕುಮಾರ್ ಪಿ.ಸಿ. ಹಾಗೂ ಶೃತಿ, ಉಪವಲಯ ಅರಣ್ಯಾಧಿಕಾರಿಗಳಾದ ಕುಮಾರಸ್ವಾಮಿ, ಪ್ರದೀಪ್ ಕುಮಾರ್ ಹಾಗೂ ರುದ್ದೇಶ್, ಶಿಕ್ಷಕರಾದ ಬೇಬಿ ರಾಣಿ. ತಹಸಿನ್ ಇರ್ಫಾನ, ನಾಗವೇಣಿ, ದಿವಾಕರ್, ಬಿ.ಎಸ್.ಕಾಂತರಾಜ್, ಎಚ್.ಎಚ್.ಫ್ರಾನ್ಸಿಸ್ ರೋಶನ್, ಎಚ್.ಆರ್.ತೀರ್ಥಪ್ಪ, ಸುಮಾ ರಾಣಿ, ಅಂಬುಜಾಕ್ಷಿ, ಗೌರಮ್ಮ, ವೀಣಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.