- ಸರ್ಕಾರದಿಂದ ಶಾಲಾ ಮಕ್ಕಳಿಗೆ ಯೋಗ ಮ್ಯಾಟ್ ವಿತರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗಕ್ಕೆ ಸರ್ಕಾರ ನೀಡಿರುವ ಪಿಎಂಶ್ರೀ ಯೋಜನೆಯು ಮಕ್ಕಳ ಸರ್ವಾತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್ ಡಿಎಂಸಿ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ ತಿಳಿಸಿದರು.
ಶನಿವಾರ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರಾಥಮಿಕ ವಿಭಾಗದಲ್ಲಿ ಮಕ್ಕಳಿಗೆ ಸರ್ಕಾರ ನೀಡಿರುವ ಯೋಗ ಮ್ಯಾಟ್ ವಿತರಿಸಿ ಮಾತನಾಡಿ ಮಕ್ಕಳು ಶಿಕ್ಷಣ ಕಲಿಕೆ ಜೊತೆಗೆ ಕಲೆ, ಸಂಗೀತ, ಕ್ರೀಡೆ, ವ್ಯಾವಹಾರಿಕ, ಪ್ರವಾಸ, ವೃತ್ತಿ ಪರ ಜೀವನ, ಕೌಶಲ್ಯ, ವ್ಯಕ್ತಿತ್ವ ವಿಕಸನ, ಸ್ಪೋಕನ್ ಇಂಗ್ಲೀಷ್ ಸೇರಿದಂತೆ ಇನ್ನು ಹಲವಾರು ವಿಷಯಧಾರಿತ ವಿಚಾರ ತಿಳಿಸಲು ಸರ್ಕಾರ ನುರಿತ ಶಿಕ್ಷಕರನ್ನು ನೇಮಿಸಿದೆ.ಇದಕ್ಕಾಗಿ ಲಕ್ಷಾಂತರ ಖರ್ಚು ಮಾಡುತ್ತಿದೆ. ಈಗಾಗಲೇ ಶಾಲೆ ಶಿಕ್ಷಕರು ಈ ಯೋಜನೆ ಉಪಯೋಗವನ್ನು ಮಕ್ಕಳಿಗೆ ಹೇಳಿ ಕೊಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಕಂಡು ಕೊಂಡಿದ್ದೇವೆ. ಈ ಯೋಜನೆಯಿಂದ ಮಕ್ಕಳ ಅಭಿವೃದ್ಧಿಯಜೊತೆಗೆ ಶಾಲೆ ಕೊಠಡಿಗಳು, ಶೌಚಾಲಯಸಹ ಅಭಿವೃದ್ದಿಯಾಗುತ್ತಿದ್ದು ಶತಮಾನ ಕಂಡ ಮಾದರಿ ಶಾಲೆಯಾಗಿ ಹೊರ ಹೊಮ್ಮುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಭೂ ದಾನಿ ಹೆಚ್.ಎನ್.ರವಿಶಂಕರ್ ಮಾತನಾಡಿ, ಶಾಲೆಗೆ ಸೇರಿದ 6 ಎಕರೆ ಜಾಗ ಬಿಡಿಸಿಕೊಳ್ಳುವಲ್ಲಿ ಈಗಾಗಲೇ ಯಶಸ್ವಿಯಾಗಿದ್ದೇವೆ. ಶಾಲೆಗೆ ಸಂಬಂಧಿಸಿದಂತೆ ಇನ್ನೂ ಸ್ವಲ್ಪ ಜಾಗ ಅದಷ್ಟು ಬೇಗ ಬಿಡಿಸಿ ಕೊಂಡು ಶಾಲೆಗೆ ಅದಾಯ ತರುವ ಕೆಲಸ ಮಾಡುತ್ತೇವೆ. ಬಿಡಿಸಿಕೊಂಡಿರುವ ಜಾಗದಿಂದ ಶಾಲೆಗೆ ಸಾಕಷ್ಟು ಅದಾಯ ಬರುವಂತಾಗಿದೆ ಎಂದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಉದಯ್, ಸದಸ್ಯರಾದ ಅಬುಬೇಕರ್, ಪುರುಶೋತ್ತಮ, ಸಿಬು, ಅಭಿನವ ಗಿರಿರಾಜ್, ಕೀರ್ತಿಶೆಟ್ಟಿ, ಮುಖ್ಯ ಶಿಕ್ಷಕ ನಂಜುಂಡಪ್ಪ, ಸಹ ಶಿಕ್ಷಕರು ಉಪಸ್ಥಿತರಿದ್ದರು.