ಎರಡು ಗುಂಪುಗಳ ನಡುವೆ ನಡೆದಿದ್ದ ಗಲಾಟೆಯನ್ನು ನಿಯಂತ್ರಿಸಲು ಡ್ಯೂಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಸಿವಿಲ್ ಡ್ರೆಸ್ ಮೇಲಿದ್ದ ಪೊಲೀಸರೊಬ್ಬರು ಮಧ್ಯ ಪ್ರವೇಶಿಸಿದ್ದರು. ಈ ವೇಳೆ ಕೆಲ ದುಷ್ಕರ್ಮಿಗಳು ಏಕಾಏಕಿ ಪೊಲೀಸರ ಮೇಲೆಯೇ ತಿರುಗಿಬಿದ್ದು, ಸಿಬ್ಬಂದಿಗೆ ತಳ್ಳಾಟ- ನೂಕಾಟ ನಡೆಸಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಗದಗ: ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದ ಜಗಳವನ್ನು ಬಿಡಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿಯ ಮೇಲೆಯೇ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಗರದ ಧೋಬಿಗಾಟ್ ಬಳಿ ನಡೆದಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ನಡೆದಿದ್ದ ಗಲಾಟೆಯನ್ನು ನಿಯಂತ್ರಿಸಲು ಡ್ಯೂಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಸಿವಿಲ್ ಡ್ರೆಸ್ ಮೇಲಿದ್ದ ಪೊಲೀಸರೊಬ್ಬರು ಮಧ್ಯ ಪ್ರವೇಶಿಸಿದ್ದರು. ಈ ವೇಳೆ ಕೆಲ ದುಷ್ಕರ್ಮಿಗಳು ಏಕಾಏಕಿ ಪೊಲೀಸರ ಮೇಲೆಯೇ ತಿರುಗಿಬಿದ್ದು, ಸಿಬ್ಬಂದಿಗೆ ತಳ್ಳಾಟ- ನೂಕಾಟ ನಡೆಸಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಗದಗ ನಗರದ ತೇಜಾ ನಗರದ ನಿವಾಸಿ ವಿಜಯ್ ಲಮಾಣಿ(19) ಮಲ್ಲಸಮುದ್ರ ಗ್ರಾಮದ ಅನ್ವರ್ ಬುವಾಜಿ(25), ಮೊಹಮ್ಮದ್ ಹೊಸಮನಿ(26), ಮಲ್ಲಸಮುದ್ರ ಗ್ರಾಮದ ಆಸೀಫ್ ಢಕ್ಕೇದ್(18), ರಾಜೇಸಾಬ್ ಕುಂದಗೋಳ(20) ಎಂದು ಗುರುತಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನ್ಯಾಯಾಲಯಕ್ಕೆ ಹಾಜರ್: ಗುರುವಾರ ರಾತ್ರಿ ಧೋಬಿಘಾಟ್ ಸಮೀಪ ಐವರು ಯುವಕರು ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಿದ್ದರು. ಆ ಸಮಯದಲ್ಲಿ ಕರ್ತವ್ಯದಲ್ಲಿರದಿದ್ದರೂ, ಅಲ್ಲಿದ್ದ ನಮ್ಮ ಪೊಲೀಸ್ ಕಾನ್ಸ್ಟೇಬಲ್ ತಮ್ಮ ಸಮಯಪ್ರಜ್ಞೆ ತೋರಿಸಿ ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಲು ಮುಂದಾದರು. ಈ ವೇಳೆ ಅವರಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ. ಕರ್ತವ್ಯದಲ್ಲಿ ಇರದೇ ಇದ್ದರೂ ಜಗಳವನ್ನು ತಡೆದು ಪರಿಸ್ಥಿತಿ ಹದಗೆಡದಂತೆ ನೋಡಿಕೊಂಡಿದ್ದು ಅವರ ಕಾರ್ಯ ಶ್ಲಾಘನೀಯ. ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಿದ್ದ ಈ ಐವರನ್ನೂ ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.
