ಎಲ್ಲರೂ ಮಂಜುನಾಥನನ್ನು ಹಿಡಿದುಕೊಂಡು ಬಾಗಿಲು ತೆಗೆಸು ಎಂದು ಕೂಗಾಡುತ್ತಿದ್ದಾರೆ. ನಂತರ ಮಂಜುನಾಥನ ಮೊಬೈಲ್ ಕಿತ್ತುಕೊಂಡು ಚಾಕುವಿನಿಂದ ಪಕ್ಕೆಗೆ ಹಾಗೂ ಇತರೆ ಕಡೆಯಲ್ಲಿ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಕನ್ನಡಪ್ರಭ ವಾರ್ತೆ ತುಮಕೂರು
ಶಾಮಿಯಾನ ಮತ್ತು ಪ್ಲವರ್ ಡೆಕೋರೇಷನ್ ಅಂಗಡಿಯ ಮಾಲೀಕನಿಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.ತಮಿಳುನಾಡಿನ ಹೊಸೂರು ಬತ್ತಲಪಲ್ಲಿಯ ಸತೀಶ್ಕುಮಾರ್ (40), ಸೇಲಂ ತಾಲೂಕಿನ ಕಡತ್ತೂರು ಗ್ರಾಮದ ಕೇಶವನ್ (43), ಸೇಲದಂಡಿ ತಾಲೂಕು ದಿಂಡದಲ್ನ ಕವಿತೇಶ್ವರನ್ ಹಾಗೂ ದಿಂಡಗಲ್ ಜಿಲ್ಲೆಯ ಅರುಣ್ ಪ್ರಶಾನ್ (26) ಎಂಬುವರೇ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಂದು ನಡೆದಿದ್ದೇನು?:
ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದ ಜಮೀನಿನಲ್ಲಿ ಕೊಲೆಯಾಗಿರುವ ಮಂಜುನಾಥ್ ಹೊಸ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಜ. 11ರಂದು ರಾತ್ರಿ 8.30 ಗಂಟೆ ಸುಮಾರಿನಲ್ಲಿ ಮಂಜುನಾಥ್ ಮನೆಯ ಹೊರಗೆ ಖಾರಪುರಿ ತಿನ್ನುತ್ತಾ ಕುಳಿತಿದ್ದರು. ಅದೇ ವೇಳೆಗೆ ಮಗಳು ಅನುಷ ಮನೆಯ ಪಕ್ಕದ ನಲ್ಲಿಯ ಬಳಿ ಯಾರೋ ಇಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದನ್ನು ನೋಡಿ ಕಳ್ಳರು ಬಂದಿದ್ದಾರೆ ಎಂದು ಕೂಗಿದ್ದಾಳೆ. ಇನ್ನೊಬ್ಬ ಮಗಳು ಯಶಸ್ವಿಯು ಮನೆಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ನಂತರ ಮಂಜುನಾಥ ಆ ವ್ಯಕ್ತಿಗಳ ಬಳಿಯಲ್ಲಿ ಹೋದಾಗ 5 ಜನರು ಮಂಜುನಾಥನನ್ನು ಹಿಡಿದುಕೊಂಡು ಬಾಗಿಲು ತೆಗೆಸು ಎಂದು ಚಾಕು ತೋರಿಸಿದ್ದು, ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಜತೆಗೆ ತಲೆಗೆ ಸಂಪೂರ್ಣವಾಗಿ ಬಟ್ಟೆ ಮುಚ್ಚಿಕೊಂಡು ಕಣ್ಣು ಮಾತ್ರ ಕಾಣುವಂತೆ ಇದ್ದರು ಎಂದು ಅವರು ವಿವರಿಸಿದರು.ಎಲ್ಲರೂ ಮಂಜುನಾಥನನ್ನು ಹಿಡಿದುಕೊಂಡು ಬಾಗಿಲು ತೆಗೆಸು ಎಂದು ಕೂಗಾಡುತ್ತಿದ್ದಾರೆ. ನಂತರ ಮಂಜುನಾಥನ ಮೊಬೈಲ್ ಕಿತ್ತುಕೊಂಡು ಚಾಕುವಿನಿಂದ ಪಕ್ಕೆಗೆ ಹಾಗೂ ಇತರೆ ಕಡೆಯಲ್ಲಿ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಡಿಷನಲ್ ಎಸ್ಪಿಗಳಾದ ಪುರುಷೋತ್ತಮ್, ಗೋಪಾಲ್ ಮಾರ್ಗದರ್ಶನದಲ್ಲಿ ತಿಪಟೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ಕುಮಾರ್ ಶರ್ಮ ನೇತೃತ್ವದಲ್ಲಿ ಚಿ.ನಾ.ಹಳ್ಳಿ ಸಿಪಿಐ ಜನಾರ್ಧನ್, ಸಿರಾ ಸಿಪಿಐ ಪ್ರವೀಣ್ಕುಮಾರ್, ತುಮಕೂರಿನ ಜಯನಗರ ಪಿಎಸ್ಐ ತಿರುಮಲೇಶ್, ಹಂದನಕೆರೆ ಪಿಎಸ್ಐ ಚಿತ್ತರಂಜನ್ ಹಾಗೂ ಸಿರಾ ಪೊಲೀಸ್ ಠಾಣೆ ಸಿಬ್ಬಂದಿ ನಾಗರಾಜು, ಭಕ್ತ ಕುಂಬಾರ, ಕೆಂಚರಾಯಪ್ಪ, ಮಂಜುನಾಥಸ್ವಾಮಿ, ಜಯನಗರ ಠಾಣೆ ಸಿಬ್ಬಂದಿ ಚಂದ್ರನಾಯ್ಕ, ಅರುಣ್ಕುಮಾರ್, ಮನುಶಂಕರ್, ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು, ರಮೇಶ್ ರವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದೆ.