ಕನ್ನಡಪ್ರಭ ವಾರ್ತೆ ವಿಜಯಪುರ

ತಿಕೋಟಾ ಪಟ್ಟಣದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದ್ದು, ಕೂಡಲೇ ಈ ವಿಷಯವಾಗಿ ಗೃಹ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಎಂ.ಬಿ. ಪಾಟೀಲರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವಂತೆ ಹಾಗೂ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಆರಂಭಗೊಂಡ ರ‍್ಯಾಲಿ ಜಿಲ್ಲಾಧಿಕಾರಿಕಚೇರಿಗೆ ತಲುಪಿತು.

ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ತಿಕೋಟಾ ಪಟ್ಟಣದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡಿದೆ. ಅದನ್ನು ಪ್ರಶ್ನಿಸಿರುವ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು, ಗೊಂದಲಕ್ಕೆ ಕಾರಣವಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ವಿಷಯಗಳಿಗೂ ನೈತಿಕ ಹೊಣೆ ಹೊತ್ತು ಗೃಹ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಎಂ.ಬಿ. ಪಾಟೀಲರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಮುಖಂಡರಾದ ವಿಜಯಕುಮಾರ ಕುಡಿಗನೂರ ಮಾತನಾಡಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಉಮೇಶ ಕಾರಜೋಳ, ಮಳುಗೌಡ ಪಾಟೀಲ, ಶರತ ಬಿರಾದಾರ, ಪ್ರಕಾಶ ಮಿರ್ಜಿ, ಬಸವರಾಜ ಬೈಚಬಾಳ, ಮಹೇಂದ್ರ ನಾಯಕ, ಸಾಬು ಮಾಶ್ಯಾಳ, ಸಂದೀಪ ಪಾಟೀಲ, ಕೃಷ್ಣಾ ಗುನ್ನಾಳಕರ, ವಿಜಯ ಜೋಶಿ, ವಿಕಾಸ ಪದಕಿ, ಕಾಂತು ಶಿಂಧೆ, ಮಹಾನಗರ ಪಾಲಿಕೆ ಉಪಮೇಯರ್‌ ಸುಮಿತ್ರಾ ಜಾಧವ, ಮಲ್ಲಮ್ಮ ಜೋಗೂರ, ಭಾರತಿ ಭುಯ್ಯಾರ ಪಾಲ್ಗೊಂಡಿದ್ದರು.