ಸಾರಾಂಶ
ಮಂಡ್ಯ ಮಂಜುನಾಥ
ಮಂಡ್ಯ : ನಗರದ ಕೆರೆಯಂಗಳದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ನಿರ್ಮಿಸಿರುವ ಮನೆಗಳಿಗೆ ಅನ್ಯಧರ್ಮೀಯರು ಅತಿಕ್ರಮ ಪ್ರವೇಶ ಮಾಡಿರುವುದರ ಹಿಂದೆ ವ್ಯವಸ್ಥಿತ ರಾಜಕೀಯ ಷಡ್ಯಂತ್ರವಿರುವುದು ಕಂಡುಬಂದಿದೆ. ಅಲ್ಲದೇ, ಇದು ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಯತ್ನಿಸುತ್ತಿರುವ ಹಿತಾಸಕ್ತಿಗಳ ಕುಚೋದ್ಯವೂ ಆಗಿದೆ.
ಆಸ್ಪತ್ರೆ ಜಾಗದಲ್ಲಿ ನೆಲೆಯೂರಿರುವ ತಮಿಳು ಕಾಲೋನಿ ನಿವಾಸಿಗಳನ್ನು ಅಲ್ಲೇ ಉಳಿಸುವುದು. ವಸತಿ ರಹಿತರ ಹೆಸರಿನಲ್ಲಿರುವವರಿಗೆ ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳನ್ನು ಕಾನೂನುಬದ್ಧವಾಗಿ ಹಂಚಿಕೆ ಮಾಡಿಸುವುದು. ಆ ಮೂಲಕ ವೋಟುಗಳನ್ನು ಸಂರಕ್ಷಿಸಿಕೊಳ್ಳುತ್ತಾ, ಹೊಸ ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುತ್ತಾ ರಾಜಕೀಯ ಲಾಭ ಪಡೆಯಬೇಕೆನ್ನುವುದಷ್ಟೇ ಇದರ ಹಿಂದಿನ ಸಂಚಾಗಿದೆ.
ಕೆರೆಯಂಗಳದ ನಿರ್ಮಿತಿ ಕೇಂದ್ರದ ಪಕ್ಕ ಐದು ವರ್ಷಗಳ ಹಿಂದೆ ೫೭೬ ಮನೆಗಳನ್ನು ತಮಿಳು ಕಾಲೋನಿ ನಿವಾಸಿಗಳಿಗೆ ನಿರ್ಮಿಸಲಾಗಿದೆ. ಎಲ್ಲೇ ಮನೆ ನಿರ್ಮಿಸಿಕೊಟ್ಟರೂ ನಿವಾಸಿಗಳು ಕ್ಯಾತೆ ತೆಗೆಯುವುದು ಮಾತ್ರ ತಪ್ಪಿಲ್ಲ. ಈ ಮೊದಲು ಮರಕಾಡುದೊಡ್ಡಿ ಬಳಿ ೨೪೦, ರೇಷ್ಮೆ ಬಿತ್ತನೆಕೋಠಿ ಬಳಿ ೨೯೦, ಹಾಲಹಳ್ಳಿ ಸ್ಲಂ ಬೋರ್ಡ್ ಬಳಿ ೪೦೦ಕ್ಕೂ ಹೆಚ್ಚು ಮನೆಗಳನ್ನು ತಮಿಳು ಕಾಲೋನಿ ನಿವಾಸಿಗಳಿಗೆಂದೇ ನಿರ್ಮಿಸಿಕೊಡಲಾಗಿತ್ತು. ಈಗ ಮತ್ತೆ ಜಿಲ್ಲಾಧಿಕಾರಿಯಾಗಿದ್ದ ಕೆ.ಮಂಜುಶ್ರೀ ಅವರು ಸರ್ಕಾರದಿಂದ ೩೦ ಕೋಟಿ ರು. ಹಣ ಬಿಡುಗಡೆಗೊಳಿಸಿ ೫೭೬ ಮನೆಗಳನ್ನು ಕಟ್ಟಿಕೊಟ್ಟಿದ್ದರೂ ಹೋಗಲು ತಮಿಳು ನಿವಾಸಿಗಳು ರೆಡಿ ಇಲ್ಲ. ರಾಜಕೀಯ ಕುಮ್ಮಕ್ಕಿನಿಂದಲೇ ದೀರ್ಘಕಾಲದಿಂದ ಆ ಜಾಗದಲ್ಲೇ ಉಳಿದುಕೊಂಡಿದ್ದಾರೆ. ಪರಿಣಾಮ ಮಿಮ್ಸ್ ಆಸ್ಪತ್ರೆ ಅಭಿವೃದ್ಧಿಯನ್ನೇ ಕಾಣದೆ ಐದು ದಶಕಗಳಿಂದ ಜಡ್ಡುಗಟ್ಟಿದೆ.
ತಮಿಳು ನಿವಾಸಿಗಳು ಮನೆಗಳ ಗುಣಮಟ್ಟ ಸರಿಯಿಲ್ಲವೆಂಬ ಕಾರಣವನ್ನೇ ಸದಾ ಮುಂದಿಟ್ಟುಕೊಂಡು ಬರುತ್ತಿದ್ದಾರೆ. ಆದರೆ, ಅವರಿಗಾಗಿ ನಿರ್ಮಿಸಿದ್ದ ಮನೆಗಳಲ್ಲಿ ಬೇರೆಯವರು ಈಗಲೂ ವಾಸಿಸುತ್ತಿದ್ದಾರೆ. ಅವರಿಗೆ ಯಾವ ತೊಂದರೆಯೂ ಆಗಿಲ್ಲ. ಹಾಗಾದರೆ ಜಾಗ ಬಿಟ್ಟು ಕದಲದಿರುವ ಹಿಂದಿನ ಮರ್ಮವಾದರೂ ಏನು?, ಇವರಿಗೆ ಬೆಂಬಲವಾಗಿ ನಿಂತಿರುವ ರಾಜಕೀಯ ಶಕ್ತಿಗಳು ಯಾವುವು ಎನ್ನುವುದು ರಹಸ್ಯವಾಗಿಯೇ ಉಳಿದಿದೆ.
ಏಕಕಾಲಕ್ಕೆ ನೂರಾರು ಮಂದಿ ಏಕಾಏಕಿ ತಮಿಳು ನಿವಾಸಿಗಳ ಮನೆಗಳಿಗೆ ಅತಿಕ್ರಮ ಪ್ರವೇಶ ಮಾಡಿರುವುದನ್ನು ನೋಡಿದರೆ ಬಹಳ ಪೂರ್ವಸಿದ್ಧತೆಯೊಂದಿಗೆ ತಯಾರಿ ನಡೆಸಿದಂತಿದೆ. ಇದರಲ್ಲಿ ಸ್ಥಳೀಯರು ಮಾತ್ರವಲ್ಲದೆ ಹೊರ ಜಿಲ್ಲೆಯಿಂದಲೂ ಜನರನ್ನು ಕರೆಸಿಕೊಂಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಕೆರೆಯಂಗಳದಲ್ಲಿ ಬೀಡಿ ಕಾರ್ಮಿಕರ ಕಾಲೋನಿಗೆ ಯಾವ ರೀತಿಯಲ್ಲಿ ಜನರು ಬಂದು ಠಿಕಾಣಿ ಹೂಡಿದರೋ ಅದೇ ಮಾದರಿಯಲ್ಲಿ ತಮಿಳು ನಿವಾಸಿಗಳ ಮನೆಗಳಿಗೂ ಜನರು ಅಕ್ರಮ ಪ್ರವೇಶ ಮಾಡಿದ್ದರೆಂಬುದು ಜನಜನಿತವಾಗಿದೆ.
ವ್ಯವಸ್ಥಿತ ಸಂಚಿನೊಂದಿಗೇ ರಾಜಕೀಯ ಶಕ್ತಿಗಳು ಪ್ರಾಯೋಗಿಕ ಪ್ರಯತ್ನವಾಗಿ ಅಕ್ರಮ ಪ್ರವೇಶವನ್ನು ನಡೆಸಿದೆ. ತಮಿಳು ನಿವಾಸಿಗಳು ಇಲ್ಲಿಗೆ ಬಾರದಂತೆ ನೋಡಿಕೊಳ್ಳುತ್ತಾ, ಐದು ವರ್ಷಗಳ ಹಿಂದೆ ಕಟ್ಟಿರುವ ಮನೆಗಳು ಖಾಲಿ ಉಳಿದಿರುವುದನ್ನು ಸರ್ಕಾರದ ಮುಂದಿಡುತ್ತಾ, ಇನ್ನೊಂದೆಡೆ ವಸತಿ ರಹಿತರಿಂದ ಖಾಲಿ ಇರುವ ವಸತಿಗಳನ್ನು ನೀಡುವಂತೆ ಒತ್ತಡ ಸೃಷ್ಟಿ ಮಾಡುತ್ತಾ ಬಹಳ ವ್ಯವಸ್ಥಿತ ಕಾರ್ಯಯೋಜನೆಯೊಂದಿಗೆ ತಮ್ಮ ಕಾರ್ಯ ಸಾಧಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆಯನ್ನಿಡುತ್ತಿದ್ದಾರೆ.
ಕಳೆದ ಜೂ.೩ರಂದು ವಸತಿ ಸಚಿವ ಜಮೀರ್ ಅಹಮದ್ಖಾನ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೆರೆಯಂಗಳದಲ್ಲಿ ನಿರ್ಮಿಸಿರುವ ವಸತಿಗಳನ್ನು ವಸತಿರಹಿತರಿಗೆ ವಿತರಣೆ ಮಾಡಲು ನ್ಯಾಯಾಲಯದಲ್ಲಿ ಅಫಿಡೆವಿಟ್ ಸಲ್ಲಿಸುವುದಕ್ಕೆ ಶಾಸಕ ಪಿ.ರವಿಕುಮಾರ್ ಅನುಮತಿ ಪಡೆದುಕೊಂಡಿದ್ದರು. ಸಭೆ ನಡೆದ ಹದಿನೈದು ದಿನಗಳ ಅಂತರದಲ್ಲೇ ಮನೆಗಳಿಗೆ ಅಕ್ರಮ ಪ್ರವೇಶ ನಡೆದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವುದರಲ್ಲಿ ಅನುಮಾನವೇ ಇಲ್ಲ.
ವಸತಿ ರಹಿತರನ್ನು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಅನ್ಯಧರ್ಮೀಯರನ್ನೇ ಯಾರೋ ಎತ್ತಿಕಟ್ಟಿ ತಮಿಳು ನಿವಾಸಿಗಳ ಮನೆಗಳತ್ತ ದಂಡೆತ್ತಿ ಕಳುಹಿಸಿರಬಹುದು. ಇದೊಂದು ವಿಫಲ ಪ್ರಯತ್ನವೆಂಬಂತೆ ಮೇಲ್ನೋಟಕ್ಕೆ ಕಂಡುಬಂದರೂ ಇದರ ಹಿಂದಿರುವ ಗೂಢಾರ್ಥವೇ ಬೇರೆಯಾಗಿದೆ. ಮುಂದಿನ ದಿನಗಳಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡರೂ ಆಶ್ಚರ್ಯಪಡಬೇಕಿಲ್ಲ. ಇದು ಗಂಭೀರ ಸ್ಥಿತಿ ತಲುಪುವ ಮುನ್ನವೇ ತಮಿಳು ನಿವಾಸಿಗಳನ್ನು ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರಿಸುವುದು ಉತ್ತಮ ಎಂಬ ಅಭಿಪ್ರಾಯಗಳು ಜನಮಾನಸದಲ್ಲಿ ಕೇಳಿಬರುತ್ತಿವೆ.
ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ನಿವಾಸಿಗಳನ್ನು ತೆರವುಗೊಳಿಸುವುದಕ್ಕೆ ಜಿಲ್ಲಾಡಳಿತ ಮತ್ತು ಮಿಮ್ಸ್ ಆಡಳಿತ ಮಂಡಳಿ ಕೂಡ ಹಿಂದೇಟು ಹಾಕುತ್ತಿವೆ. ಆಸ್ಪತ್ರೆ ಜಾಗಕ್ಕೆ ಸಂಬಂಧಿಸಿದಂತೆ ನಗರಸಭೆಗೆ ಅಧಿಕಾರವೇ ಇಲ್ಲದೆ ನೀಡಿರುವ ಒಂದು ಎಂಡಾರ್ಸ್ಮೆಂಟ್ನ್ನು ಮುಂದಿಟ್ಟುಕೊಂಡು ಕೆಲವು ನಿವಾಸಿಗಳು ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತಂದು ಎರಡು ವರ್ಷಗಳಾದರೂ ಜಿಲ್ಲಾಡಳಿತ, ಮಿಮ್ಸ್ ಆಡಳಿತ ಮಂಡಳಿ ಮಧ್ಯಪ್ರವೇಶಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಬಹುದಿತ್ತು. ಅವರೂ ಬಹುಶಃ ರಾಜಕೀಯ ಒತ್ತಡಕ್ಕೆ ಮಣಿದಿರಬಹುದೆಂಬುದನ್ನು ಅಲ್ಲಗಳೆಯುವಂತಿಲ್ಲ.
ಮಿಮ್ಸ್ ಆಸ್ಪತ್ರೆ ಅಭಿವೃದ್ಧಿಗಿಂತಲೂ ಹೆಚ್ಚಾಗಿ ಸ್ವಾರ್ಥ, ವೈಯಕ್ತಿಕ ಹಿತಾಸಕ್ತಿಯೇ ಮೇಲುಗೈ ಸಾಧಿಸುತ್ತಿರುವುದರಿಂದ ಆಸ್ಪತ್ರೆ ಅಭಿವೃದ್ಧಿ ಇಂದಿಗೂ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ಮನೆಗಳನ್ನು ಹಂಚುತ್ತಿರುವ ಬಗ್ಗೆ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮನೆಗಳ ಬಳಿ ಸೀಸಿ ಕ್ಯಾಮೆರಾಗಳನ್ನೂ ಅಳವಡಿಸಿ ೨೪*೭ ಭದ್ರತೆಯನ್ನು ಒದಗಿಸಲಾಗಿದೆ. ನೂರಾರು ಜನರು ಏಕಾಏಕಿ ಆ ಸ್ಥಳಕ್ಕೆ ಬರಬೇಕೆಂದರೆ ಯಾರದ್ದೋ ಕುಮ್ಮಕ್ಕು ಇದ್ದೇ ಇರುತ್ತದೆ. ಆ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸುತ್ತೇವೆ.
- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯಮಿಮ್ಸ್ ಆಸ್ಪತ್ರೆ ವಿಸ್ತರಣೆ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು. ಆಸ್ಪತ್ರೆ ಅಭಿವೃದ್ಧಿಗೆ ಬಂದ ಹಣವೆಲ್ಲವೂ ಸ್ಥಳಾವಕಾಶದ ಕೊರತೆಯಿಂದ ವಾಪಸ್ ಹೋಗುತ್ತಿದೆ. 500 ಹಾಸಿಗೆ ಸಾಮರ್ಥ್ಯಕ್ಕಿಂತ ೮೦೦ ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ತಮಿಳು ನಿವಾಸಿಗಳ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು.
- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರತಮಿಳು ನಿವಾಸಿಗಳನ್ನು ಆಸ್ಪತ್ರೆ ಜಾಗದಲ್ಲೇ ಉಳಿಸುವ ಸಂಚುಗಾರಿಕೆ ನಡೆದಿದೆ. ಇದಕ್ಕೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಎಂದಿಗೂ ಅವಕಾಶ ನೀಡಬಾರದು. ೧೮ ಎಕರೆ ಜಾಗದಲ್ಲಿರುವ ತಮಿಳು ನಿವಾಸಿಗಳನ್ನು ಕೆರೆಯಂಗಳದ ಮನೆಗಳಿಗೆ ಸ್ಥಳಾಂತರಿಸಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಅಸಿಟೇಟ್ ಕಾರ್ಖಾನೆ ಜಾಗ ಖಾಸಗಿಯವರ ಪಾಲಾದಂತೆ ಆಸ್ಪತ್ರೆ ಜಾಗ ಖಾಸಗಿಯವರ ಪಾಲಾಗುವುದರಲ್ಲಿ ಆಶ್ಚರ್ಯವಿಲ್ಲ.
- ಎಂ.ಬಿ.ನಾಗಣ್ಣಗೌಡ, ಕರುನಾಡ ಸೇವಕರು ಸಂಘ, ಮಂಡ್ಯಹೈಕೋರ್ಟ್ನಿಂದ ನಿವಾಸಿಗಳು ತಂದಿರುವ ತಡೆಯಾಜ್ಞೆಯಲ್ಲಿ ಸತ್ವವೇ ಇಲ್ಲ. ಸರಿಯಾದ ರೀತಿಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ದಾಖಲೆಗಳನ್ನು ಒದಗಿಸಿದ್ದರೆ ಎಂದೋ ತಮಿಳು ನಿವಾಸಿಗಳು ಸ್ಥಳಾಂತರಗೊಳ್ಳುತ್ತಿದ್ದರು. ರಾಜಕೀಯ ಒಳಸಂಚಿಗೆ ಮಿಮ್ಸ್ ಆಸ್ಪತ್ರೆ ಆಸ್ಪತ್ರೆ ಅಭಿವೃದ್ಧಿ ಹಳ್ಳ ಹಿಡಿದಿದೆ. ಜನಪ್ರತಿನಿಧಿಗಳಿಗೂ ಆಸ್ಪತ್ರೆ ಅಭಿವೃದ್ಧಿ ಬೇಡವಾಗಿದೆ.
- ಜಿ.ಟಿ.ರವೀಂದ್ರಕುಮಾರ್, ಸಾಮಾಜಿಕ ಹೋರಾಟಗಾರ