ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು: ನಂಜಾವಧೂತ ಶ್ರೀ

| Published : Oct 29 2025, 01:00 AM IST

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು: ನಂಜಾವಧೂತ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಹೈನುಗಾರಿಕೆಯಲ್ಲಿ ಬಹಳ ದೊಡ್ಡ ಕ್ರಾಂತಿಯನ್ನೇ ಮಾಡಿದೆ, ಲಕ್ಷಾಂತರ ಬಡ ರೈತ ಕುಟುಂಬಗಳಿಗೆ ಜೀವನ ಆಸರೆಗೆ ಆರ್ಥಿಕ ಶಕ್ತಿ ತುಂಬಿರುವ ಹಾಲು ಒಕ್ಕೂಟಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು.

ಕನ್ನಡಪ್ರಭ ವಾರ್ತೆ ಶಿರಾ

ಭಾರತದ ಆರ್ಥಿಕ ಸುಭದ್ರತೆಗೆ ಸಹಕಾರಿ ಕ್ಷೇತ್ರ ಬಹುದೊಡ್ಡ ಕೊಡುಗೆ ನೀಡಿದೆ, ಸಹಕಾರಿ ಕ್ಷೇತ್ರದ ಪವಿತ್ರತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇದ್ದರೆ ಕ್ಷೇತ್ರದ ಬೆಳವಣಿಗೆ ಕುಂಠಿತವಾಗುತ್ತದೆ. ಈ ಹಿನ್ನೆಲೆ ಹಾಲು ಒಕ್ಕೂಟಗಳನ್ನು ರಾಜಕೀಯ ಮುಕ್ತಗೊಳಿಸಿ ರೈತರ ಅಭಿವೃದ್ಧಿಗೆ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದ ತುಮಕೂರು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ರವರಿಗೆ ಆಶೀರ್ವದಿಸಿ ಮಾತನಾಡಿದರು. ರಾಜ್ಯ ಹೈನುಗಾರಿಕೆಯಲ್ಲಿ ಬಹಳ ದೊಡ್ಡ ಕ್ರಾಂತಿಯನ್ನೇ ಮಾಡಿದೆ, ಲಕ್ಷಾಂತರ ಬಡ ರೈತ ಕುಟುಂಬಗಳಿಗೆ ಜೀವನ ಆಸರೆಗೆ ಆರ್ಥಿಕ ಶಕ್ತಿ ತುಂಬಿರುವ ಹಾಲು ಒಕ್ಕೂಟಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಹಾಲು ಉತ್ಪಾದನೆಯಿಂದ ರೈತರು ಆರ್ಥಿಕವಾಗಿ ಸದೃಢರಾಗುವುದರ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಕೆಎಂಎಫ್ ಗೆ ದೇಶದಲ್ಲಿಯೇ ಗುಣಮಟ್ಟದ ಹಾಲು ನೀಡುವ ಒಕ್ಕೂಟ ಎಂಬ ಹೆಗ್ಗಳಿಕೆ ಇದೆ. ಬೇರೆ ಬೇರೆ ರಾಜ್ಯಗಳಲ್ಲೂ ಕೂಡ ನಂದಿನಿ ಹಾಲಿಗೆ ಉತ್ತಮ ಬೇಡಿಕೆ ಇದೆ, ಇಂತಹ ಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡುವ ಲಕ್ಷಾಂತರ ರೈತರ ಸುಧಾರಣೆಗೆ ಹೆಚ್ಚು ಹೆಚ್ಚು ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಿ ರೈತರು ಉತ್ಪಾದಿಸುವ ಹಾಲಿಗೆ ಹೆಚ್ಚು ಬೆಲೆ ನೀಡುವಂತಾಗಬೇಕು ಎಂದರು.

ರೇಷ್ಮೆ ಬೆಳೆಗಾರರಿಗೆ ಮತ್ತು ಹಾಲು ಉತ್ಪಾದಕರಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹಿಸಬೇಕು, ಕೇಂದ್ರ ಸರ್ಕಾರ ರೇಷ್ಮೆ ಆಮದು ನಿಲ್ಲಿಸಿದ ಕಾರಣ, ರಾಜ್ಯದಲ್ಲಿ ರೇಷ್ಮೆ ಬೆಳೆ ಬಗ್ಗೆ ರೈತರು ಹೆಚ್ಚು ಆಸಕ್ತಿ ವಹಿಸುವಂತಾಗಿದೆ. ರೇಷ್ಮೆ ಬೆಳೆಗಾರರಿಗೆ ಮತ್ತು ಹಾಲು ಉತ್ಪಾದಕರಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹಿಸಬೇಕು ಎಂದರು.

ಸ್ಪಟಿಕ ಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿಗಳ ಆಶೀರ್ವಾದ ಪಡೆದು ಮಾತನಾಡಿದ ಕೊಂಡವಾಡಿ ಚಂದ್ರಶೇಖರ್, ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್ .ಡಿ. ಕುಮಾರಸ್ವಾಮಿಯವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅವಕಾಶ ನೀಡಿದರೆ, ಸ್ಪರ್ಧೆ ಮಾಡಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುಮುಕ್ ಕೊಂಡವಾಡಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಾಂತಕುಮಾರ್, ಮಂಜುನಾಥ್ ಸೇರಿ ಹಲವಾರು ಮುಖಂಡರು ಹಾಜರಿದ್ದರು.