ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಪ್ರತಿಯೊಬ್ಬರು ಆರೋಗ್ಯ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಆರೋಗ್ಯ ಮೇಳದಲ್ಲಿ ಭಾಗವಹಿಸಿರುವ ಬಡವರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಸಲಹೆ ನೀಡಿದರು.ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಹಾಗೂ ತಾಲೂಕು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಆರೋಗ್ಯ ರಕ್ಷಣೆ ಮೂಲ ಶುಚಿತ್ವ. ಸ್ವಚ್ಛತೆ ಕಾಪಾಡಿಕೊಂಡರೆ ಆರೋಗ್ಯ ತನ್ನಿಂದ ತಾನೆ ಸುರಕ್ಷಿತವಾಗಿರುತ್ತದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿಯೇ ಆರೋಗ್ಯ ಮೇಳ ಆಯೋಜಿಸುವುದು ಯಾತಕ್ಕೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ ಹಲವಾರು ಯೋಜನೆಗಳಿವೆ. ಮೇಳದ ಮೂಲಕ ಜನರಲ್ಲಿ ಅವುಗಳ ಜಾಗೃತಿ ಮೂಡಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ ಎಂದರು.ಮಳೆಗಾಲ ಆರಂಭಗೊಂಡಿದೆ. ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮನೆಯಲ್ಲಿ ಮೊದಲು ಶುಚಿತ್ವ ಕಾಪಾಡಿಕೊಳ್ಳಬೇಕು. ನೀರನ್ನು ಕಾಯಿಸಿ, ಶೋಷಿ ಕುಡಿಯಬೇಕು. ಮನೆಯಲ್ಲಿ ಶೌಚಾಲಯವನ್ನು ಬಳಸಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಭುಲಿಂಗ ಮಾನಕರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಸಂಜಯಕುಮಾರ ರಾಯಚೂರಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಂ.ಎಸ್. ಪಾಟೀಲ್ ಮಾತನಾಡಿದರು.ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಸಾಜೀದ್, ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗಮ್ಮ, ಲಿಂಗಯ್ಯಸ್ವಾಮಿ, ಡಾ. ಹರ್ಷವರ್ಧನ ರುಫುಗಾರ, ನೇತ್ರತಜ್ಞ ಶಮೀಮ್ ತಿಮ್ಮಾಪೂರಿ ವೇದಿಕೆಯಲ್ಲಿದ್ದರು. ಶಹಾಪುರದ ಮಹತ್ಮಾ ಜ್ಯೋತಿಭಾಪುಲೆ ಕಲಾ ತಂಡದಿಂದ ಆರೋಗ್ಯ ಅರಿವು ಜಾಥಾ ಗೀತೆಗಳ ಪ್ರರ್ದಶನ ನಡೆಯಿತು.
ಈ ವೇಳೆ ಹೆಚ್ಚುಬಾರಿ ರಕ್ಷದಾನ ಮಾಡಿದ ನಾಲ್ವರನ್ನು ಸನ್ಮಾನಿಸಲಾಯಿತು. ಅಂಧತ್ವ ನಿವಾರಣಾ ಇಲಾಖೆಯಿಂದ ಕಣ್ಣಿನ ದೋಷ ಇದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಆರೋಗ್ಯ ಇಲಾಖೆಯ ಮಲ್ಲಣ್ಣ ಗೋನಾಲ ಸ್ವಾಗತಿಸಿದರು. ಶಿಕ್ಷಕ ಮಹಾಂತೇಶ ದೇವರಗೋನಾಲ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಿಸಿರಾಮ ವಂದಿಸಿದರು.