ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನಗರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಸಮುದಾಯ ಭವನ ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ವಾಲ್ಮೀಕಿ ಸಮಾಜದ ಮುಖಂಡರ ದೂರಿನ ಮೇರೆಗೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಗರದ ಕೋಡಿಸರ್ಕಲ್ನ ರೋಟರಿ ಭವನದ ಪಕ್ಕದಲ್ಲಿ ಸರ್ಕಾರದ ವಿವಿಧ ಅನುದಾನಗಳಡಿ ಸುಮಾರು ೩ಕೋಟಿರೂ ವೆಚ್ಚದಲ್ಲಿ ವಾಲ್ಮೀಕಿ ಭವನದ ಕಾಮಗಾರಿ ನಡೆಯುತ್ತಿದ್ದು ಆದರೆ ಈ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಮಾಜದ ಮುಖಂಡರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಸಪ್ತಶ್ರೀ ಹಾಗೂ ತಹಸೀಲ್ದಾರ್ ಪವನ್ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕಳಪೆ ಕಾಮಗಾರಿ ಎಂಬುದು ಮೇಲ್ನೋಟಕ್ಕೆ ಕಂಡುಬಂದಂತೆ ಕಾಣುತ್ತಿದೆ. ಕಾಮಗಾರಿಗೆ ಬಳಸಿದ ವಸ್ತುಗಳನ್ನು ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಿ ತಾಂತ್ರಿಕ ಪರಿಣಿತರ ವರದಿಯಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಕಾಮಗಾರಿಯನ್ನು ಸ್ಥಗಿತ ಮಾಡಿ ಎಂದು ಸೂಚನೆ ನೀಡಿದರು.ಈ ವೇಳೆ ಸಮಾಜದ ಮುಖಂಡ ಜಯಸಿಂಹ ಸೇರಿದಂತೆ ಮತ್ತಿತರರು ಮಾತನಾಡಿ, ಸರ್ಕಾರ ಭವನ ನಿರ್ಮಾಣಕ್ಕೆ ಹಣ ನೀಡಿದರೂ ಗುತ್ತಿಗೆದಾರರು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡುತ್ತಿದ್ದಾರೆ. ಕಟ್ಟಡದ ತಳಪಾಯವನ್ನು ಕಲ್ಲಿನಿಂದ ನಿರ್ಮಿಸದೆ ಕಳಪೆ ಇಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಇಟ್ಟಿಗೆಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು ಪಿಲ್ಲರ್ಗಳಿಗೆ ಸರಿಯಾದ ಕ್ಯೂರಿಂಗ್ ಮಾಡಿಲ್ಲ. ತೀರಾ ಕಳಪೆ ಸಿಮೆಂಟ್ ಬಳಸಿದ್ದು ಕಂಡು ಬರುತ್ತಿದ್ದು, ಯುಜಿಡಿ ಕೊಳಚೆ ನೀರನ್ನು ಕಾಮಗಾರಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಮಹೇಶ್, ಮುಖಂಡರಾದ ಸೀತರಾಮನಾಯ್ಕ, ನಾಗರಾಜು, ಮಹಲಿಂಗಯ್ಯ, ಮಂಜುನಾಥ್ ಮತ್ತಿತರರಿದ್ದರು.