ಸಾರಾಂಶ
ಬಸವನಬಾಗೇವಾಡಿ : ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಪಟ್ಟಣದ ಮಾರುಕಟ್ಟೆಗಳಲ್ಲಿ ಶುಕ್ರವಾರ ಪರಿಸರ ಸ್ನೇಹಿ, ಪಿಒಪಿ ಗಣಪತಿ ಮೂರ್ತಿಗಳು ಲಗ್ಗೆ ಇಟ್ಟಿವೆ. ಗ್ರಾಹಕರು ಚೌಕಾಸಿ ಮಾಡಿ ತಮಗೆ ಇಷ್ಟವಾದ ಮೂರ್ತಿಗಳನ್ನು ಖರೀದಿಸುತ್ತಿರುವುದ ಹಾಗೂ ಕಾಯ್ದಿರಿಸುವುದು ಕಂಡುಬಂದಿತು.
ಪಟ್ಟಣದ ಬಸವೇಶ್ವರ ದೇವಸ್ಥಾನ ಮುಂಭಾಗ, ಮಾರುತಿ ದೇವಸ್ಥಾನದ ಮುಂಭಾಗ ಸೇರಿ ವಿವಿಧೆಡೆಗಳಲ್ಲಿ ಗಣಪತಿ ಮೂರ್ತಿಗಳು ಮಾರಾಟ ಜೋರಾಗಿತ್ತು. ಆದರೆ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗಿಂತ ಹೆಚ್ಚಾಗಿ ಪಿಒಪಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಇದೆ. ಮಣ್ಣಿನ ಮೂರ್ತಿಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆ ಇದೆ.
ಗಣೇಶ ಮೂರ್ತಿ ಮಾರಾಟಗಾರ ನಾಗೇಶ ಕುಂಬಾರ ಎಂಬುವರು ಕೊಣ್ಣೂರುನಿಂದ ಮಣ್ಣಿನ ಗಣಪತಿ ಮೂರ್ತಿ ತಂದು ಮಾರಾಟ ಮಾಡುತ್ತಿದ್ದಾರೆ. ಮಣ್ಣಿನ ಗಣಪತಿಕ್ಕಿಂತಲೂ ಪಿಒಪಿ ಗಣಪತಿ ಮೂರ್ತಿಗಳಿಗೆ ಬೇಡಿಕೆಯಿದೆ. ನಾನು ತಂದ ಮಣ್ಣಿನ ಗಣಪತಿ ಮೂರ್ತಿಗಳು ಸಂಪೂರ್ಣ ಮಾರಾಟವಾದರೆ ನಾನು ಹಾಕಿದ ಬಂಡವಾಳ ಲಾಭ ಆಗುತ್ತದೆ. ಇಲ್ಲದಿದ್ದರೆ ನಷ್ಟ. ಗಾತ್ರಕ್ಕೆ ತಕ್ಕಂತೆ ₹ ೨೫೦ ರಿಂದ ₹ ೫ ಸಾವಿರ ವರೆಗೆ ಮಾರಾಟವಾಗುತ್ತಿವೆ ಎಂದರು.
ಪಟ್ಟಣದ ಅಂಚೆ ಕಚೇರಿ ಹತ್ತಿರ ಕೃಷ್ಣ ಗಣಪತಿ ಮಂಡಳ, ಹಿಂದು ಮಹಾಗಣಪತಿ ಮಹಾಮಂಡಳ, ಗಣಪತಿ ವೃತ್ತದ ಗಣಪತಿ ಯುವಕ ಮಂಡಳ, ವೀರಭದ್ರೇಶ್ವರ ನಗರದ ಗಣಪತಿ ಯುವಕ ಮಂಡಳ, ಓಂ ನಗರದ ಯುವಕ ಮಂಡಳ, ಶಹರ ಗಣಪತಿ ಮಂಡಳ ಸೇರಿದಂತೆ ವಿವಿಧ ಮಂಡಳಗಳು ಗಣಪತಿ ಪ್ರತಿಷ್ಠಾಪಿಸಲು ಮಂಟಪಗಳನ್ನು ಸಿದ್ಧಗೊಳಿಸಿದ್ದಾರೆ.
ಇನ್ನು, ಪಟ್ಟಣದ ವಿವಿಧ ಅಂಗಡಿಗಳಲ್ಲಿ ಮಂಟಪ, ಅಲಂಕಾರಿಕ ಸಾಮಗ್ರಿ, ಪ್ಲಾಸ್ಟಿಕ್ ಹಾರ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಪಟ್ಟಣದ ದಾನೇಶ್ವರಿ ಜನರಲ್ ಸ್ಟೋರ್ನಲ್ಲಿ ಗಣಪತಿ ಪ್ರತಿಷ್ಠಾಪನೆಗೆ ರೆಡಿಮೇಟ್ ಮಂಟಪ ಮಾರಾಟಕ್ಕೆ ತಂದಿರುವದು ವಿಶೇಷ. ವಿವಿಧ ಅಳತೆಯ ಮಂಟಪಗಳ ಬೆಲೆ ₹೧೮೦೦-೩೦೦೦ ಇದೆ ಎಂದು ಸ್ಟೋರ್ ಮಾಲೀಕ ಅಳ್ಳಗಿ ಹೇಳಿದರು. ಇನ್ನು, ಹಬ್ಬದ ಹಿನ್ನಲೆ ಹಣ್ಣುಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ಹಣ್ಣಿನ ಅಂಗಡಿಗಳ ಮುಂದೆ ಪೂಜೆ ಬೇಕಾದ ಹಣ್ಣುಗಳ ಮಾರಾಟದ ಭರಾಟೆ ನಡೆದಿತ್ತು.