ಮುಂಡರಗಿ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಮೂಲಕ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಅವುಗಳನ್ನು ಗ್ರಾಹಕರು ಸದುಪಯೋಗ ಪಡೆಯಲು ಮುಂದಾಗಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ತಿಳಿಸಿದರು.ತಾಲೂಕಿನ‌ ಹಮ್ಮಿಗಿಯ ಬಸವೇಶ್ವರ ಕಲ್ಯಾಣಮಂಟಪದಲ್ಲಿ ನಡೆದ ಅಂಚೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸೇವೆ ನೀಡುವುದರಿಂದಾಗಿ ಗ್ರಾಹಕರು ತಮ್ಮ ದಿನನಿತ್ಯದ ಅಗತ್ಯಗಳಿಗೆ ಅಂಚೆ ಇಲಾಖೆ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಂಚೆ ಇಲಾಖೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೇ ಬ್ಯಾಂಕಿಂಗ್, ಉಳಿತಾಯ ಯೋಜನೆಗಳು, ವಿಮೆ, ಪಿಂಚಣಿ ವಿತರಣೆ, ಆನ್‌ಲೈನ್ ಪಾವತಿ, ಪಾರ್ಸೆಲ್ ವಿತರಣಾ ಸೇವೆ ಸೇರಿದಂತೆ ಹಲವು ಸೇವೆ ನೀಡಲಾಗುತ್ತದೆ ಎಂದರು.

ಐಪಿಪಿಬಿ ಮ್ಯಾನೇಜರ್ ಆನಂದ ಸಾಗರ ಮಾತನಾಡಿ, ವಿದ್ಯುನ್ಮಾನ ಹಣಕಾಸು ವಹಿವಾಟು ಸೇವೆ ಕ್ಷೇತ್ರದಲ್ಲಿ ಹೊಸ ಭಾಷ್ಯ ಐಪಿಪಿಬಿ(ಇಂಡಿಯಾ ಪೊಸ್ಟ್ ಮೆಂಟ್ ಬ್ಯಾಂಕ್) ಪಡೆದುಕೊಂಡಿದೆ. ಇನ್ನೂ ಕೇವಲ 7 ವರ್ಷದಲ್ಲಿ ದೇಶದ 10 ಕೋಟಿ ಜನರಿಗೆ ಡಿಬಿಟಿ ಸೇವೆ ಕಲ್ಪಿಸಿದೆ. ಹಾಗಾಗಿ 7 ವರ್ಷದಲ್ಲಿ ಈ ಮಹತ್ವದ ಸಾಧನೆ ತೋರಿದ ಡಿಬಿಟಿ ಬ್ಯಾಂಕ್ ಆಫ್ ಇಂಡಿಯಾ ಎಂಬ ಮಹತ್ವದ ಯೋಜನೆಗೆ ಅನುಷ್ಠಾನ ಆಗಲಿದೆ ಎಂದರು.ಸಹಾಯಕ ಅಂಚೆ ಅಧೀಕ್ಷಕ ವಿ. ಸುನೀಲಕುಮಾರ, ನಾಗರಾಜ ಮದ್ದಿನ ಮಾತನಾಡಿದರು. ಬಸಯ್ಯ ಕಲ್ಮಠ ಸಾನ್ನಿಧ್ಯ ವಹಿಸಿದ್ದರು. ಉಪ ಅಂಚೆ ಪಾಲಕ‌ ಹಾಲಪ್ಪ ವಾಮನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶಿವಾನಂದ ಮೇಟಿ, ಗ್ರಾಪಂ ಸದಸ್ಯರಾದ ಎ.ಎಚ್. ಬಹದ್ದೂರದೇಸಾಯಿ, ಜಲಾನಸಾಬ ವಡ್ಡಟ್ಟಿ, ಅಂಚೆ ಸಹಾಯಕ ಮಧುಕುಮಾರ ಶಿರೋರ, ಅಂಚೆ ಮೇಲ್ವಿಚಾರಕ ರವಿ ಜಾಧವ, ನಾಗರಾಜ ವಿಭೂತಿ, ಅಮರೇಶ ರಾಠೋಡ, ಐಶ್ವರ್ಯ ಹಿರೇಮಠ, ಅಶ್ವಿನಿ ಇನಾಮತಿ, ಹಾಲೇಶ ಹಂಸಭಾವಿ ಮತ್ತಿತರರು ಇದ್ದರು.