ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಜನಪ್ರಿಯ ಶಾಸಕ ಪ್ರದೀಪ್ ಈಶ್ವರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಸಚಿವರಾಗಬೇಕು ಎಂಬುದು ಕಾಂಗ್ರೆಸ್ ಮುಖಂಡರು ಮತ್ತು ಕ್ಷೇತ್ರದ ಲಕ್ಷಾಂತರ ಜನರ ಆಶಯವಾಗಿದೆ. ಅದು ಆಗಿಯೇ ತೀರಲಿದೆ ಎಂದು ಮಂಡಿಕಲ್ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ತಿಳಿಸಿದರು.ತಾಲೂಕಿನ ಮಂಡಿಕಲ್ ಹೋಬಳಿ ರಾಮಪಟ್ಟಣದಿಂದ ಸಿದ್ದಗಾನಹಳ್ಳಿವರೆಗೆ 15 ಅಗಲ 2 ಕಿ.ಮಿ ಉದ್ದದ 2 ಕೋಟಿ ರು. ವೆಚ್ಚದ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಳ್ಳಿಗಳ ಬೆಳವಣಿಗೆಯಲ್ಲಿಯೇ ದೇಶದ ಅಭಿವೃದ್ಧಿಯ ಗುಟ್ಟು ಅಡಗಿದೆ ಎಂಬ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ತತ್ವದಲ್ಲಿ ನಂಬಿಕೆ ಇಟ್ಟಿರುವ ಶಾಸಕ ಪ್ರದೀಪ್ ಈಶ್ವರ್ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕರಾಗಿದ್ದಾರೆ. ಕ್ಷೇತ್ರದ ಪ್ರತಿಹಳ್ಳಿಯ ರಸ್ತೆಗಳು ಚೆನ್ನಾಗಿರಬೇಕು ಎಂದು ಭಾವಿಸಿ ಎಲ್ಲೆಲ್ಲಿ ಸಾಧ್ಯವೋ ಎಲ್ಲೆಲ್ಲಾ ಸಿ ಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಇದಕ್ಕೆ ಇಂದಿನ ಶಂಕುಸ್ಥಾಪನೆಯೇ ಸಾಕ್ಷಿ ಎಂದರು.
ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಈ ಗ್ರಾಮಕ್ಕೆ ಬಂದಿದ್ದಾಗ ರಾಮಪಟ್ಟಣದಿಂದ ಸಿದ್ದಗಾನಹಳ್ಳಿವರೆಗೆ ರಸ್ತೆ ನಿರ್ಮಿಸಿ ಕೊಡುವ ಮಾತು ಕೊಟ್ಟಿದ್ದರು. ಅದನ್ನು ಉಳಿಸಿಕೊಂಡಿದ್ದಾರೆ. ಎಲ್ಲ ಕಡೆಯೂ ಶಾಸಕರೇ ಬಂದು ಕಾಮಗಾರಿಗಳಿಗೆ ಚಾಲನೆ ನೀಡುವುದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ನಮ್ಮ ನಾಯಕರು ಜನರಿಗೆ ಒಳ್ಳೆಯದಾಗಬೇಕು ಎಂಬ ಮಹದಾಸೆಯನ್ನಿಟ್ಟುಕೊಂಡಿದ್ದು, ಸ್ಥಳೀಯ ನಾಯಕರಾದ ನಮ್ಮ ಮೂಲಕ ಆ ಕೆಲಸ ಮಾಡಿಸುತ್ತಿದ್ದಾರೆ ಎಂದರು.ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ರೆಡ್ಡಿ ಮಾತನಾಡಿ, ಎಂಎಲ್ಎ ಪ್ರದೀಪ್ ಈಶ್ವರ್ ಎಂದರೆ ಕೇವಲ ಹೆಸರು ಮಾತ್ರವಲ್ಲ. ಬಡವರು ಮತ್ತು ಹಳ್ಳಿಗಳ ಅಭಿವೃದ್ಧಿಯ ಕನಸುಳ್ಳ ದೂರದೃಷ್ಟಿಯ ನಾಯಕ.ಅವರಿಗೆ ಪಕ್ಷನಿಷ್ಠೆಯ ಮೇಲಿರುವಷ್ಟೇ ಮಮತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಮೇಲಿದೆ. ಪಕ್ಷ ಮತ್ತು ಪಕ್ಷದ ವರಿಷ್ಠರು ಹೇಳುವ ಕೆಲಸವನ್ನು ಪ್ರಥಮ ಆದ್ಯತೆಯಾಗಿ ಮಾಡುವುದು ಅವರು ರೂಢಿಸಿಕೊಂಡು ಬಂದಿರುವ ನೀತಿಯಾಗಿದೆ. ಇಂತಹ ಪ್ರಾಮಾಣಿಕ ಶಾಸಕರನ್ನು ಪಡೆದ ಈ ಕ್ಷೇತ್ರವು ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಲಿದೆ. ಯಾರು ಏನೇ ಹೇಳಿದರೂ ಪ್ರದೀಪ್ ಈಶ್ವರ್ ಸಚಿವರಾಗಿ ಬರುವುದು ಸತ್ಯ ಎಂದರು.
ಈ ವೇಳೆ ಮುಖಂಡರಾದ ಮಂಡಿಕಲ್ ರಮೇಶ್, ಆದಿನಾರಾಯಣ, ನಸೀಮಾ, ವೆಂಕಟೇಶಪ್ಪ, ರಾಮಪಟ್ಟಣ ಮಹಬೂಬ್ ಸಾಬ್, ಗ್ರಾಮಸ್ಥರು ಇದ್ದರು.
ಸಿಕೆಬಿ-1 ರಾಮಪಟ್ಟಣದಿಂದ ಸಿದ್ದಗಾನಹಳ್ಳಿವರೆಗೆ ಸಿಸಿರಸ್ತೆ ನಿರ್ಮಾಣದ ನೂತನ ಕಾಮಗಾರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ಭೂಮಿಪೂಜೆ ನೆರವೇರಿಸಿದರು.