ಸಾರಾಂಶ
ಬೆಂಗಳೂರು : ರಾಜ್ಯದ ಪ್ರಮುಖ 14 ದೇವಸ್ಥಾನಗಳ ಪ್ರಸಾದವನ್ನು ಭಕ್ತರ ಮನೆಗಳಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಧಾರ್ಮಿಕ ದತ್ತಿ ಇಲಾಖೆ ಗುರುವಾರದಿಂದ ಚಾಲನೆ ನೀಡಲಾಗಿದೆ.
ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸೇವೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಕೆಲ ಸಂದರ್ಭದಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇ-ಪ್ರಸಾದ ಸೇವೆ ಮೂಲಕ ಆರ್ಡರ್ ಮಾಡಿ ಮನೆಗೆ ಪ್ರಸಾದ ತರಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನೋ ಲಾಸ್ ನೋ ಪ್ರಾಫಿಟ್ ಪರಿಕಲ್ಪನೆಯಲ್ಲಿ ಭಕ್ತರಿಗೆ ಸೇವೆ ನೀಡಲಾಗುವುದು. 100 ರಿಂದ 200 ರು.ಗಳಲ್ಲಿ ಮನೆ ಬಾಗಿಲಿಗೆ ಪ್ರಸಾದ ಸೇವೆ ಒದಗಿಸಲಾಗುವುದು ಎಂದರು. ಪ್ರಸಾದವನ್ನು https://csc.devalayas.com/ ಮೂಲಕ ಆನ್ಲೈನ್ ಮೂಲಕ ಬುಕ್ ಮಾಡಿ ಮನೆಗಳಿಗೆ ಪ್ರಸಾದ ತರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಯಾವೆಲ್ಲ ಪ್ರಸಾದ ತರಿಸಿಕೊಳ್ಳಬಹುದು?:
ದೇವಾಲಯಗಳ ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ ಅಥವಾ ಭಂಡಾರ, ಕುಂಕಮ, ಬಿಲ್ವಪತ್ರೆ/ಹೂವು/ತುಳಸಿ ಹಾಗೂ ದೇವರ ಚಿತ್ರವಿರುವ ಪ್ಯಾಕೆಟ್ ಅಳತೆಯ ಲ್ಯಾಮಿನೇಟೆಡ್ ಭಾವಚಿತ್ರ, ಡಾಲರ್ ಮತ್ತು ದಾರ, ದೇವಾಲಯದ ಮಹಿಮೆ ಹಾಗೂ ಸ್ತೋತ್ರದ ಮುದ್ರಣಗಳನ್ನು ಭಕ್ತರು ಇ-ಪ್ರಸಾದ ಸೇವೆಯಿಂದ ತರಿಸಿಕೊಳ್ಳಬಹುದು.
ದೇವಸ್ಥಾನಗಳ ವಿವರ
- ಬೆಂಗಳೂರು ಜಯನಗರದ ಶ್ರೀ ವಿನಾಯಕ ಸ್ವಾಮಿ ದೇವಾಲಯ, ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ, ಮಂಡ್ಯದ ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ, ಮೈಸೂರು ನಂಜನಗೂಡಿನ ಶೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ಕೋಲಾರದ ಮಾಲೂರಿನ ಶ್ರೀ ಪುಸನ್ನ ವೆಂಕಟರಮಣ ಸ್ವಾಮಿ ದೇವಾಲಯ, ಉಡುಪಿಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ, ಬೀದರ್ನ ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೆಳಗಾವಿ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ದಕ್ಷಿಣ ಕನ್ನಡದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನ, ವಿಜಯನಗರದ ಹೂವಿನಹಡಗಲಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಕೊಪ್ಪಳದ ಹುಲಿಗಿಯ ಶ್ರೀ ಹುಲಿಗಮ್ಮ ದೇವಾಲಯ, ಕಲಬುರಗಿಯ ಗಾಣಗಾಪುರದ ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ.
ಬೆಳಗಾವಿಯ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾ ಯಲಮ್ಮ ದೇವಸ್ಥಾನ, ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ, ಮಂಡ್ಯ ಜಿಲ್ಲೆಯ ಚಲುವನಾರಾಯಣ ಸ್ವಾಮಿ ದೇವಾಲಯ, ಬೆಂಗಳೂರಿನ ಶ್ರೀ ಗವಿಗಂಗಾಧರೇಶ್ವರ ದೇವಾಲಯ ಸೇರಿ ಒಟ್ಟು 14 ದೇವಸ್ಥಾನಗಳ
ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ಸಿಎಸ್ಸಿ ಸಂಸ್ಥೆಯ ಇ-ಗೌವರ್ನೆನ್ಸ್ನ ರಾಜ್ಯ ಮುಖ್ಯಸ್ಥ ಶಕೀಬ್ ಅಹಮದ್, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಡಾ. ಬಿ.ಎಸ್.ದ್ವಾರಕನಾಥ್, ಕೆ.ಚಂದ್ರಶೇಖರ್, ಮಲ್ಲಿಕಾ ಪ್ರಶಾಂತ ಪಕ್ಕಳಾ ಇತರರಿದ್ದರು.