ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ನೀಡಲು ಸಿದ್ಧತೆ: ಕೃಷ್ಣನಾಯ್ಕ

| Published : Jan 20 2024, 02:00 AM IST

ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ನೀಡಲು ಸಿದ್ಧತೆ: ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಮಕ್ಕಳ ಇಂಗ್ಲಿಷ್ ಭಾಷೆಯ ಬೆಳವಣಿಗೆಗೆ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೀಘ್ರದಲ್ಲೇ ಆಂಗ್ಲ ಭಾಷೆಯ ಸಂವಹನ ದೃಷ್ಟಿಯಿಂದ ಲ್ಯಾಬ್ ಆರಂಭಿಸುವುದಾಗಿ ಶಾಸಕ ಕೃಷ್ಣನಾಯ್ಕ ತಿಳಿಸಿದರು.

ಹೂವಿನಹಡಗಲಿ: ಶಿಕ್ಷಣದಿಂದ ಮಕ್ಕಳ ವಿಕಾಸ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಶಾಸಕ ಎಲ್. ಕೃಷ್ಣನಾಯ್ಕ ತಿಳಿಸಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ವತಿಯಿಂದ ಆಯೋಜಿಸಿದ್ದ 2022- 23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಮಕ್ಕಳ ಇಂಗ್ಲಿಷ್ ಭಾಷೆಯ ಬೆಳವಣಿಗೆಗೆ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೀಘ್ರದಲ್ಲೇ ಆಂಗ್ಲ ಭಾಷೆಯ ಸಂವಹನ ದೃಷ್ಟಿಯಿಂದ ಲ್ಯಾಬ್ ಆರಂಭಿಸುವುದಾಗಿ ತಿಳಿಸಿದರು.

ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಒದಗಿಸುವ ಸಲುವಾಗಿ ಯೋಜನೆ ಜಾರಿಗೆ ತರಲಾಗುವುದು ಎಂದರು.

ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಮುಖ್ಯ ಗುರುಗಳು ಇಲಾಖೆಯ ಯೋಜನೆ ಜಾರಿಗೆ ಶ್ರಮವಹಿಸಬೇಕು. ವಿಜಯನಗರ ಜಿಲ್ಲೆಯಲ್ಲಿ ಹೂವಿನ ಹಡಗಲಿ ಪ್ರಥಮ ಸ್ಥಾನ ಗಳಿಸುವ ಹಾಗೆ ತರಬೇತಿ ನೀಡಿ ಎಂದರು.

ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಯರಾಂ ಚೌವ್ಹಾಣ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಮಾತನಾಡಿದರು. ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಪಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಎ. ಕೋಟೆಪ್ಪ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ. ಹನುಮಂತಪ್ಪ, ಟಿಪಿಒ ಮುಸ್ತಫಾ ಎಸ್., ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಶಿವಲಿಂಗಪ್ಪ, ಶೇಕ್ ಅಹ್ಮದ್, ಸರ್ವಮಂಗಳ ಕೃಷ್ಣಪ್ಪ ಜಾಡರ, ಗ್ರಂಥಾಲಯ ಅಧಿಕಾರಿ ಮಂಜುನಾಥ ಭೋವಿ ಇತರರು ಉಪಸ್ಥಿತರಿದ್ದರು. ಸುರೇಶ ಅಂಗಡಿ ಬನ್ನೆಪ್ಪ ಕೊಳಚಿ, ಸೂರ್ಯಕಾಂತ, ಎನ್‌. ಹಾಲೇಶ ನಿರ್ವಹಿಸಿದರು. ತಾಲೂಕಿನ ಒಟ್ಟು 50 ಪ್ರೌಢಶಾಲೆಗಳ ಟಾಪರ್ಸ್‌ಗಳಿಗೆ ಪುರಸ್ಕಾರ ನೆರವೇರಿಸಲಾಯಿತು.