ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿದಂಡೆತ್ತಿ ಬಂದವರಿಂದ ಪಟ್ಟಣದ ಜನರನ್ನು ರಕ್ಷಣೆ ಮಾಡಿದ ದಂಡಿನ ಮಾರಮ್ಮನ ಹಬ್ಬವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದು ಫೆ.23 ಮತ್ತು 24 ರಂದು ಎರಡು ದಿನಗಳ ಕಾಲ ನಡೆಯುವ ನಡೆಯಲಿರುವ ಸಿಡಿ ಹಬ್ಬಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದಂಡಿನ ಮಾರಮ್ಮ ಮತ್ತು ಪಟ್ಟಲದಮ್ಮ ಅಕ್ಕತಂಗಿಯರು ಆಗಿದ್ದು, ಮೊದಲು ದಂಡಿನ ಮಾರಮ್ಮ ಹಬ್ಬ ಮಾಡಿದ ನಂತರ ನಾಲ್ಕು ದಿನಗಳ ನಂತರ ಪಟ್ಟಲದಮ್ಮ ಸಿಡಿ ಹಬ್ಬವೂ ನೂರಾರು ವರ್ಷಗಳಿಂದಲೂ ಸಂಪ್ರದಾಯಕವಾಗಿ ನಡೆಯಿತುತ್ತಿದೆ.
ದಂಡಿನ ಮಾರಮ್ಮ ಹಿನ್ನೆಲೆ: ರಾಜರ ಆಳ್ವಿಕೆ ಕಾಲದಲ್ಲಿ ವಿವಿಧ ಪ್ರದೇಶಗಳಿಗೆ ಹೋಗಲು ಮಳವಳ್ಳಿ ಮುಖ್ಯ ಕೇಂದ್ರವಾಗಿದ್ದರಿಂದ ಬೇರೆ ಪ್ರಾಂತ್ಯದ ಸೈನಿಕರ ದಾಳಿ ಆಗಿಂದಾಗ್ಗೆ ನಡೆಯುತ್ತಿತ್ತು. ಸೈನಿಕರ ಉಪಟಳವನ್ನು ತಾಳಲಾರದೇ ಇಲ್ಲಿನ ಜನರು ದಂಡಿನ ಮಾರಮ್ಮ ದೇವಿಗೆ ರಕ್ಷಿಸುವಂತೆ ಮೊರೆ ಹೋದ ಹಿನ್ನೆಲೆಯಲ್ಲಿ ಪಟ್ಟಣದ ಹೊರಭಾಗದಲ್ಲಿ ನೆಲೆಗೊಂಡು ದಂಡೆತ್ತಿ ಬಂದ ಸೈನಿಕರಿಗೆ ವಾಂತಿ ಬೇದಿ ಕೊಟ್ಟು ವಾಪಸ್ ಹೋಗುವಂತೆ ಮಾಡಿ ಜನರನ್ನು ರಕ್ಷಣೆ ಮಾಡಿದ್ದಕ್ಕೆ ಅಂದಿನಿಂದ ಭಕ್ತಿಪ್ರಧಾನವಾಗಿ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ದಂಡಿನ ಮಾರಮ್ಮದೇವಿಗೆ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಅರಕೆ ತೀರಿಸುತ್ತಾರೆ. ನಂತರ ಫೆ.23 ಮತ್ತು 24ರಂದು ನಡೆಯಲಿರುವ ಸಿಡಿ ಹಬ್ಬದ ಯಶಸ್ವಿಗೆ ಶ್ರಮಿಸುತ್ತಾರೆ.ಪಟ್ಟಲದಮ್ಮ ಹಬ್ಬದ ಹಿನ್ನಲೆ:ಇತಿಹಾಸದ ಪ್ರಕಾರ 300 ವರ್ಷಗಳ ಹಿಂದೆ ಪಟ್ಟಣದ ಪೇಟೆ ಬೀದಿವಾಸಿ ಮಂಚಟಪ್ಪನವರು ಶ್ರೀರಂಗಪಟ್ಣಣ ಸೇರಿದಂತೆ ಮತ್ತಿತ್ತರ ಕಡೆಗಳಿಗೆ ಹೋಗಿ ಅಡಿಕೆ ವ್ಯಾಪಾರ ಮಾಡಿಕೊಂಡು ಮಳವಳ್ಳಿಗೆ ಬರುತ್ತಿದ್ದಾಗ ಅಡಿಕೆ ಚೀಲದಲ್ಲಿ ಎರಡು ವಿಗ್ರಹಗಳು ಕಂಡುಬಂದಿವೆ. ಮಂಚಟಪ್ಪನವರ ಕನಸಿಗೆ ಬಂದು ತಮಗೆ ಗುಡಿ ಕಟ್ಟಿ ಪೂಜಿಸುವಂತೆ ಹೇಳಿದ್ದರಂತೆ. ಅದರಂತೆ ದೇವಸ್ಥಾನ ನಿರ್ಮಾಣ ಮಾಡಿಸಿ ಅಡಿಕೆ ಚೀಲದಲ್ಲಿ ಸಿಕ್ಕ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಂದಿನಿಂದ ಇಲ್ಲಿಯವರೆವಿಗೂ ಈ ದೇವತೆಗಳಿಗೆ ಮಂಚಟಪ್ಪನವರ ಕುಟುಂಬದಿಂದಲೇ ಹಬ್ಬದಲ್ಲಿ ಪ್ರಥಮ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ.ಹಬ್ಬಕ್ಕೆ ಸಿಡಿರಣ್ಣ ತಯಾರಿ: ಸಿಡಿರಣ್ಣನನ್ನು ಸುಮಾರು 46 ಅಡಿ ಉದ್ದವಿರುವ ಒಂದೇ ತಾವಸದ ಮರದಿಂದ ಮಾಡಿದ್ದು, ಹರಕೆ ಹೊತ್ತವರು ಸಿಡಿರಣ್ಣಕ್ಕೆ ವ್ಯಕ್ತಿ ಬೆನ್ನಿಗೆ ಕಬ್ಬಿಣದ ಕೊಂಡಿ ಹಾಕಿ ಸಿಡಿ ಹಾರಿಸುತ್ತಿದ್ದರು. ಈ ಹಿಂದೆ ಹಬ್ಬದ ವೇಳೆ ಕೊಂಡಿ ಕಳಚಿ ಬಿದ್ದು, ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮನುಷ್ಯರನ್ನು ನೇತು ಹಾಕುವುದನ್ನು ನಿಲ್ಲಿಸಿ ತಾಮ್ರದಲ್ಲಿ ಮನುಷ್ಯನಾಕೃತಿಯಲ್ಲಿ ಮಾಡಿರುವ ಸಿಡಿರಣ್ಣನನ್ನು ಕಟ್ಟಿ ಹಬ್ಬ ಆಚರಿಸಲಾಗುತ್ತಿದೆ. ನವ ದಂಪತಿಗಳು ಸೇರಿದಂತೆ ಸಿಡಿಹಬ್ಬಕ್ಕೆ ಆಗಮಿಸುವ ಲಕ್ಷಾಂತರ ಮಂದಿ ಹಣ್ಣು ಜವನ ಎಸೆದು ನಮಿಸುತ್ತಾರೆ. ಫೆ.24 ರಂದು ಕೊಂಡೋತ್ಸವ:
ಸಿಡಿಹಬ್ಬದ ಹಿನ್ನೆಲೆಯಲ್ಲಿ ಫೆ.24ರಂದು ನಡೆಯಲಿರುವ ಕೊಂಡಕ್ಕೆ ತಾಲೂಕಿನ ತಮ್ಮಡಹಳ್ಳಿ ಸೇರಿ ವಿವಿಧ ಗ್ರಾಮದ ರೈತರು ತಮ್ಮ ರಾಸುಗಳಿಗೆ ಹೂವಿನಿಂದ ಆಲಂಕರಿಸಿಕೊಂಡು ಸೌದೆಯನ್ನು ಮೆರವಣಿಗೆ ಮೂಲಕ ಪಟ್ಟಲದಮ್ಮ ದೇವಸ್ಥಾನಕ್ಕೆ ತರುತ್ತಾರೆ. ದೇಗುಲದ ಉಸ್ತುವಾರಿ ಸಮಿತಿ ಕೊಂಡಕ್ಕೆ ಸಿದ್ಧತೆ ಮಾಡುತ್ತಾರೆ. ಸಿಡಿಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಇಡೀ ರಾತ್ರಿ ಜಾತ್ರೆ ಶಾಂತಿಯುತವಾಗಿ ನಡೆಯಲು ಆಗತ್ಯ ಕ್ರಮ ಕೈಗೊಳ್ಳಲಾಗಿದೆ. ಹಬ್ಬದ ಅಂಗವಾಗಿ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿದೆ. ಹಬ್ಬಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು, ಪಾರ್ಕಿಂಗ್, ತಾತ್ಕಾಲಿಕ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಕ್ರಮಗಳನ್ನು ಪುರಸಭೆ ಮತ್ತು ತಾಲೂಕು ಆಡಳಿತ ಕೈಗೊಂಡಿದೆ.