ಕನ್ನಡಪ್ರಭ ವಾರ್ತೆ ಮಂಡ್ಯ
ಪರಿಚಯ ಪ್ರಕಾಶನದಿಂದ ಏ.೧೨ರಂದು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ ೧೦.೩೦ ಗಂಟೆಗೆ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಸ್ಥಾಪಕ ಶಿವಕುಮಾರ ಆರಾಧ್ಯ ಹೇಳಿದರು.ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಲೇಖಕಿ ವಸು ವತ್ಸಲೆ ಅವರ ಅಂತರಿಕ್ಷದಲ್ಲಿ ವಿಹಾ ಕೃತಿ ಆಯ್ಕೆಯಾಗಿದೆ. ಕಳೆದ ವರ್ಷ ಜೂನ್ನಲ್ಲಿ ಮಕ್ಕಳ ಸಾಹಿತ್ಯದಲ್ಲಿ ಪ್ರಕಟಿಸಲಾದ ಪುಸ್ತಕಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು. ರಾಜ್ಯಾದ್ಯಂತ ಸುಮಾರು ೬೮ ಮಂದಿ ಲೇಖಕರು ಮತ್ತು ಪ್ರಕಾಶಕರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ತಿಂಗಳು ಸಾಹಿತಿ ಜಿ.ಎನ್.ಮೋಹನ್ ಮತ್ತು ಹೇಮಾ ಖುರ್ಸಾಪುರ ಅವರ ನೇತೃತ್ವದಲ್ಲಿ ನಡೆದ ತೀರ್ಪುಗಾರರ ಸಭೆಯಲ್ಲಿ ವಸು ವತ್ಸಲೆ ಕೃಷಿ ಪ್ರಶಸ್ತಿಗೆ ಆಯ್ಕೆಯಾಗಿವೆ. ಲೇಖಕಿ ಅನುಪಮಾ ಕೆ.ಬೆಣಚಿನ ಮರ್ಡಿ ಅವರ ಇರುವೆಗಳು ಮತ್ತು ಆಗಂತುಕ, ಪ್ರಸಾದ್ ನಾಯ್ಕ್ ಅವರ ಜಿಪ್ಸಿ ಜೀತು ಕೃತಿಗಳು ತೀರ್ಪುಗಾರರ ವಿಶೇಷ ಮೆಚ್ಚುಗೆ ಗಳಿಸಿವೆ ಎಂದರು.ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ವಹಿಸುವರು. ಅವಧಿ ಇ-ಮ್ಯಾಗಜೈನ್ ಸಂಪಾದಕ ಜಿ.ಎನ್.ಮೋಹನ್ ಪ್ರಶಸ್ತಿ ಪ್ರದಾನ ಮಾಡುವರು. ಮಕ್ಕಳ ಸಾಹಿತ್ಯ ನನ್ನ ಅಸ್ಮಿತೆಯ ಹುಡುಕಾಟ ವಿಷಯ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಶಿವಲಿಂಗಪ್ಪ ಹಂದಿಹಾಳ ವಿಶೇಷ ಉಪನ್ಯಾಸ ನೀಡುವರು. ನಂತರ ನಡೆಯುವ ಸಂವಾದದಲ್ಲಿ ಜಿಲ್ಲೆಯ ಅನೇಕ ಸಾಹಿತಿಗಳು, ಶಿಕ್ಷಣ ತಜ್ಞರು ಮತ್ತು ಓದುಗರು ಪಾಲ್ಗೊಳ್ಳಲಿದ್ದಾರೆ ಎಂದು ನುಡಿದರು.
ಮಕ್ಕಳ ಸಾಹಿತ್ಯದ ಪುಸ್ತಕಗಳಿಗೆ ಕಳೆದೊಂದು ದಶಕದಿಂದ ರೇಖಾಚಿತ್ರಗಳನ್ನು ಬರೆಯುತ್ತಿರುವ ಸೃಜನಶೀಲ ಕಲಾವಿದ ಸಂತೋಷ್ ಸಸಿ ಹಿತ್ಲು ಅವರಿಗೆ ಪರಿಚಯ ಪ್ರಕಾಶನ ವಿಶೇಷ ಗೌರವ ಸಮ್ಮಾನ ನೀಡಿ ಗೌರವಿಸುತ್ತಿದೆ. ಮಂಡ್ಯ ಜಿಪಂ ಸಿಇಒ ಕೆ.ಆರ್.ನಂದಿನಿ ಸನ್ಮಾನ ನಡೆಸಿಕೊಡುವರು. ಹಿರಿಯ ಚಿತ್ರ ಕಲಾವಿದ ಗುಜ್ಜಾರಪ್ಪ, ವಿಕಸನ ಸಂಸ್ಥೆಯ ಮಹೇಶ್ ಚಂದ್ರ ಗುರು, ಪ್ರಥಮ್ ಬುಕ್ಸ್ ಕನ್ನಡ ಸಂಪಾದಕಿ ಹೇಮಾ ಖುರ್ಸಾಪುರ, ಯುವ ಬರಹಗಾರರ ಬಳಗದ ಟಿ.ಸತೀಶ್ ಜವರೇಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು.
ಪುಟ್ಟ ಮಗುವಿನಿಂದ ಹಿಡಿದು ಹದಿಹರೆಯದ ಮಕ್ಕಳವರೆಗೆ ವಿವಿಧ ಪ್ರಕಾರದ ಮಕ್ಕಳ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಅಂದು ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಓದುಗರು ರಿಯಾಯ್ತಿ ದರದಲ್ಲಿ ವಿಜ್ಞಾನ, ಪರಿಸರ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಉತ್ತಮ ಪುಸ್ತಕಗಳನ್ನು ಖರೀದಿಸಬಹುದು ಎಂದರು.
ಗೋಷ್ಠಿಯಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ನ ಅಧ್ಯಕ್ಷ ಎಂ.ವಿನಯ್ಕುಮಾರ್, ಡಾ.ಅನಿತಾ, ಅರವಿಂದ ಪ್ರಭು, ಬಿ.ಕೆ.ಪುಷ್ಪ ಇದ್ದರು.